ಬೆಂಗಳೂರು, ಫೆ.2-ರಾಜ್ಯ ಸಚಿವ ಸಂಪುಟದ 15 ಸಚಿವರ ವಿರುದ್ಧ ಕಿಡಿಕಾರುತ್ತಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರಿಗೆ ದೆಹಲಿಗೆ ಬುಲಾವ್ ಬಂದಿದೆ.ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತ ಅರುಣ್ ಸಿಂಗ್ ಈ ಬುಲಾವ್ ನೀಡಿದ್ದು, ಸೋಮವಾರ ಈ ಕುರಿತಂತೆ ರೇಣುಕಾಚಾರ್ಯ ಅವರ ಜತೆ ಮಾತುಕತೆ ನಡೆಸಿದರು.
ಅರುಣ್ ಸಿಂಗ್ ಅವರ ಜತೆಗಿನ ಮಾತುಕತೆಯ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಫೆ.7 ಅಥವಾ 8ರಂದು ದೆಹಲಿಗೆ ತೆರಳಲಿದ್ದಾರೆ.
ಮೂಲಗಳ ಪ್ರಕಾರ, ಸೋಮವಾರ ರೇಣುಕಾಚಾರ್ಯ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ ಅರುಣ್ ಸಿಂಗ್ ಸಚಿವರ ವಿರುದ್ಧ ಕಿಡಿ ಕಾರುತ್ತಿರುವುದಕ್ಕೆ ಕಾರಣ ಕೇಳಿದರು.
ಈ ಸಂದರ್ಭದಲ್ಲಿ ಸ್ವಪಕ್ಷದ ಕೆಲ ಸಚಿವರು ಮತ್ತು ವಲಸೆ ಬಂದು ಸಚಿವರಾಗಿರುವ ಕೆಲವರ ವರ್ತನೆ ಬಗ್ಗೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದರು.ಸರ್ಕಾರದಲ್ಲಿರುವ ಬಹುತೇಕ ಸಚಿವರು ತಮ್ಮ ವ್ಯಾಪಾರ, ವ್ಯವಹಾರಕ್ಕಾಗಿ ಇರುವಂತೆ ಭಾಸವಾಗುತ್ತಿದೆ. ಇವರಿಗೆ ಶಾಸಕರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ. ಸರ್ಕಾರಕ್ಕೆ ಗೌರವ ತರುವ, ಆ ಮೂಲಕ ಪಕ್ಷಕ್ಕೆ ಶಕ್ತಿ ತರುವ ಯಾವ ಆಸಕ್ತಿಯೂ ಇಲ್ಲ ಎಂದರು.
ತಮಗೆ ಬೇಕಾದವರ ಮೂಲಕ ವ್ಯವಹಾರದಲ್ಲಿ ಅಪಾರ ಪ್ರಮಾಣದ ಹಣ ತೊಡಗಿಸುತ್ತಿರುವ ಹಲವು ಸಚಿವರು ಇದೇ ಕಾರಣಕ್ಕಾಗಿ ಸರ್ಕಾರವನ್ನು ದಲ್ಲಾಳಿಗಳ ಮಾರುಕಟ್ಟೆಯನ್ನಾಗಿ ಮಾರ್ಪಡಿಸಿದ್ದಾರೆ.ಕೇಳಿದರೆ ಸರ್ಕಾರ ಬರಲು ತಾವು ಬಂಡವಾಳ ಹೂಡಿರುವುದಾಗಿ ಉಡಾಫೆಯ ಮಾತನಾಡುತ್ತಾರೆ. ಆ ಮೂಲಕ ತಾವೇನು ಮಾಡಿದರೂ ನಡೆಯುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕರಿಗಾಗುತ್ತಿರುವ ತೊಂದರೆಗಳ ಬಗ್ಗೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಹಲ ಬಾರಿ ಪ್ರಸ್ತಾಪಿಸಿದ್ದಾಯಿತು. ಹಿರಿಯ ನಾಯಕರಿಗೆ ಹೇಳಿದ್ದೂ ಆಯಿತು. ಆದರೆ, ಇದುವರೆಗೆ ಯಾವ ಬದಲಾವಣೆಯೂ ಆಗಿಲ್ಲ. ಅಂದ ಹಾಗೆ ಸರ್ಕಾರ ಅಸ್ತಿತ್ವಕ್ಕೆ ಬರುವುದರ ಹಿಂದೆ ನಮ್ಮ ಶ್ರಮವೂ ಇದೆ. ಆದರೆ, ಅದನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದೆ. ಇದು ಹೀಗೇ ಮುಂದುವರಿದರೆ ಪಕ್ಷ ಕಷ್ಟಕ್ಕೆ ಸಿಲುಕುತ್ತದೆ ಎಂದು ಅರುಣ್ ಸಿಂಗ್ ಅವರಿಗೆ ವಿವರಿಸಿದರು.
ವಲಸಿಗ ಸಚಿವರ ಪೈಕಿ ಕೆಲವರು ಈಗಾಗಲೇ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದು ಚುನಾವಣೆ ಹತ್ತಿರ ಬಂದಾಗ ಪುನಃ ಪಕ್ಷಾಂತರ ಮಾಡುತ್ತಾರೆ. ಇಂತಹವರ ಕ್ಷೇತ್ರದಲ್ಲಿ ಈಗಾಗಲೇ ಮೂಲ ಬಿಜೆಪಿಯವರ ಶಕ್ತಿಯೂ ಕುಗ್ಗಿದೆ. ಹೀಗಾಗಿ ಈ ವಿಷಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ರೇಣುಕಾಚಾರ್ಯ ವಿವರಿಸಿದಾಗ, ಇಂತಹ ಎಲ್ಲ ಮಾಹಿತಿಗಳೊಂದಿಗೆ ದಿಲ್ಲಿಗೆ ಬನ್ನಿ ಎಂದು ಸೂಚಿಸಿದರು.
ಅರುಣ್ ಸಿಂಗ್ ಅವರು ನೀಡಿದ ಸೂಚನೆ ಹಿನ್ನೆಲೆಯಲ್ಲಿ ಫೆ.7ರಂದು ದೆಹಲಿಗೆ ದೌಡಾಯಿಸಲು ರೇಣುಕಾಚಾರ್ಯ ನಿರ್ಧರಿಸಿದ್ದಾರೆ.ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅರುಣ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲ ನಾಯಕರನ್ನು ಭೇಟಿ ಮಾಡಿ ರಾಜ್ಯ ಬಿಜೆಪಿ ಸರ್ಕಾರದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ವಿವರ ನೀಡಲಿದ್ದಾರೆ.
