ಬೆಂಗಳೂರು, ಜ.17- ಅತಿ ವೇಗವಾಗಿ ಮುನ್ನುಗ್ಗಿ ಬಂದ ಕ್ಯಾಂಟರ್ ವಾಹನವೊಂದು ಬೈಕ್ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಸವಾರರ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಸಂಭವಿಸಿದೆ.
ಮಾಗಡಿ ತಾಲೂಕಿನ ತೂಬಿನಗೆರೆಯ ನಿವಾಸಿಗಳಾದ ರವಿ(22) ಮತ್ತು ವಿಕಾಸ್(20) ಮೃತಪಟ್ಟ ಸವಾರರು.
ಇವರಿಬ್ಬರು ಸ್ನೇಹಿತರಾಗಿದ್ದು, ಸುಂಕದಕಟ್ಟೆಯಲ್ಲಿ ವಾಸವಾಗಿದ್ದುಕೊಂಡು ಕಾರು ಶೋ ರೂಂವೊಂದರಲ್ಲಿ ಕೆಲಸ ಮಾಡುತ್ತಿದ್ದರು.
ರಾತ್ರಿ ಇವರಿಬ್ಬರು ದೊಡ್ಡ ಗೊಲ್ಲರಹಟ್ಟಿ ಕಡೆಗೆ ಹೋಗಿ ವಾಪಸ್ ಬೈಕ್ಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಹಿಂದಿರುಗುತ್ತಿದ್ದಾಗ ಮಾಗಡಿ ರಸ್ತೆಯ ಅಂಜನಾನಗರ ಬಸ್ ನಿಲ್ದಾಣದ ಬಳಿ ಅತಿ ವೇಗವಾಗಿ ಬಂದ ಕ್ಯಾಂಟರ್ ವಾಹನವೊಂದು ಹಿಂದಿನಿಂದ ಇವರ ಬೈಕ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಇವರಿಬ್ಬರ ಮೇಲೂ ಕ್ಯಾಂಟರ್ ಚಕ್ರ ಹರಿದ ಪರಿಣಾಮ ತೀವ್ರ ರಕ್ತ ಸ್ರಾವವಾಗಿದೆ. ತಕ್ಷಣ ಇವರಿಬ್ಬರನ್ನು ಸಾರ್ವಜನಿಕರು ನಾಗರಬಾವಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದು ಬ್ಯಾಡರಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಇಬ್ಬರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
Canter, bike, collision, friends, death,