ಬೆಂಗಳೂರು,ಜು.11- ಕಾರು ಕಳವು ಮಾಡಲು ಬಳಸುವ ಡಿವೈಸ್ ಬಗ್ಗೆ ಯೂಟೂಬ್ನಲ್ಲಿ ತಿಳಿದುಕೊಂಡು ಕಾರುಗಳನ್ನು ಕಳ್ಳತನ ಮಾಡುತ್ತಿದ್ದ ಬಿ.ಕಾಂ ಪದವೀಧರನನ್ನು ಆಗ್ನೇಯ ವಿಭಾಗದ ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿ 70 ಲಕ್ಷ ರೂ. ಬೆಲೆ ಬಾಳುವ 10 ಕಾರುಗಳು, ಒಂದು ಬೈಕ್ ಹಾಗೂ ಡಿವೈಎಸ್ನ್ನು ವಶಪಡಿಸಿಕೊಂಡಿದ್ದಾರೆ.
ಮುಳಬಾಗಿಲು ತಾಲ್ಲೂಕಿನ ಅರುಣ್ಕುಮಾರ್(32) ಬಂಧಿತ ಬಿ.ಕಾಂ ಪದವೀಧರ. ಅರುಣ್ ತಾಯಿ ಮುಳಬಾಗಿಲು ತಾಲ್ಲೂಕಿನವರು. ತಂದೆ ಆಂಧ್ರಪ್ರದೇಶದ ಪಲಮನೇರಿ ನಿವಾಸಿ. ಅರುಣ್ಕುಮಾರ್ ಹುಟ್ಟಿ ಬೆಳೆದಿದ್ದು ಅಂಧ್ರಪ್ರದೇಶದಲ್ಲಿ. ಇತ್ತಿಚೆಗೆ ಮುಳಬಾಗಿಲಿಗೆ ಬಂದು ಅಜ್ಜಿ ಮನೆಯಲ್ಲಿ ನೆಲೆಸಿದ್ದನು.
ಎಚ್ಎಸ್ಆರ್ ಲೇಔಟ್ ವ್ಯಾಪ್ತಿಯಲ್ಲಿ ಕಾರು ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲಾಗಿದ್ದವು. ಈ ಪ್ರಕರಣ ಸಂಬಂಧ ಕಾರು ಮತ್ತು ಆರೋಪಿಗಳನ್ನು ಪತ್ತೆ ಮಾಡಲು ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬಾ ಹಾಗೂ ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುೀಧಿರ್ ಎಂ. ಹೆಗಡೆ ಮಾರ್ಗದರ್ಶನದಲ್ಲಿ ಎಚ್ಎಸ್ಆರ್ ಲೇಔಟ್ ಇನ್ಸ್ಪೆಕ್ಟರ್ ಮುನಿರೆಡ್ಡಿ ಹಾಗೂ ಸಿಬ್ಬಂದಿ ಒಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡ ಬೆಳಗಿನ ಜಾವ ವಿಶೇಷ ಕಾರ್ಯಾಚರಣೆ ನಡೆಸುತ್ತಿತ್ತು. ಜೂ.9ರಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಎಚ್ಎಸ್ಆರ್ ಲೇಔಟ್ 5ನೇ ಸೆಕ್ಟರ್, ಟೀಚರ್ಸ್ ಕಾಲೋನಿ ಮುಖ್ಯರಸ್ತೆಯಲ್ಲಿ ಗಸ್ತು ಮಾಡುವಾಗ ಬಾತ್ಮೀದಾರರಿಂದ ಖಚಿತ ಮಾಹಿತಿ ಲಭಿಸಿದೆ.
ತಕ್ಷಣ ಕಾರ್ಯಪ್ರವೃತ್ತರಾದ ತಂಡ ಬೈಕ್ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ ಆರೋಪಿಯೊಬ್ಬನನ್ನು ಹಿಡಿದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಾರುಗಳ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆರೋಪಿ ಅರುಣ್ಕುಮಾರ್ನಿಂದ ಸುಮಾರು 70 ಲಕ್ಷ ರೂ. ಬೆಲೆ ಬಾಳುವ 10 ಕಾರುಗಳು, ಒಂದು ಬೈಕ್ ಹಾಗೂ ಕಾರು ಕಳವು ಮಾಡಲು ಬಳಸುತ್ತಿದ್ದ ಎಕ್ಸ್ಟೂಲ್ ಆಟೋ ಡಯಾಗ್ನಿಸ್ಟಿಕ್ ಟೂಲ್ಸ್ ಎಂಬ ಡಿವೈಎಸ್ ವಶಪಡಿಸಿಕೊಂಡು ಹಲವು ಪ್ರಕರಣಗಳನ್ನು ಪತ್ತೆಹಚ್ಚಿದ್ದಾರೆ.
ಆರೋಪಿ ವಿರುದ್ಧ ಹಲವು ಪ್ರಕರಣ:
ಈ ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈತನ ವಿರುದ್ಧ ಕೊಲೆ, ದರೋಡೆ, ದರೋಡೆ ಯತ್ನ, ಹಲ್ಲೆ ಪ್ರಕರಣಗಳು ಇದ್ದು, ಈತ ದರೋಡೆ ಪ್ರಕರಣದಲ್ಲಿ ಆಂಧ್ರಪ್ರದೇಶದ ಮದನಪಲ್ಲಿ ಸಬ್ ಜೈಲಿನಲ್ಲಿದ್ದನು.
ಆ ಸಂದರ್ಭದಲ್ಲಿ ಕಾರು ಕಳವು ಮಾಡುವ ಆರೋಪಿ ರಾಕೇಶ್ ಎಂಬಾತನ ಪರಿಚಯವಾಗಿದೆ. ಆತನಿಂದ ಕಾರು ಕಳವು ಮಾಡುವ ವಿಧಾನವನ್ನು ಆರೋಪಿ ಅರುಣ್ಕುಮಾರ್ ತಿಳಿದುಕೊಂಡಿದ್ದಾನೆ.
ಅದರಂತೆ ಜೈಲಿನಿಂದ ಹೊರಬಂದ ನಂತರ ಯೂಟೂಬ್ನಲ್ಲಿ ಕಾರು ಕಳವಿಗೆ ಬಳಸುವ ಎಕ್ಸ್ಟೂಲ್ ಆಟೋ ಡಯಾಗ್ನಿಸ್ಟಿಕ್ ಟೂಲ್ಸ್ ಡಿವೈಎಸ್ ಬಗ್ಗೆ ಮಾಹಿತಿ ಸಂಗ್ರಹಿಸಿ ಡಿವೈಸ್ ಖರೀದಿಸಿದ್ದಾನೆ.
ಕಳವು ಮಾಡುತ್ತಿದ್ದ ವಿಧಾನ: ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಿಗೆ ರಾತ್ರಿ ಸಮಯದಲ್ಲಿ ಹೋಗಿ ರಸ್ತೆಬದಿ ನಿಲ್ಲಿಸಲಾಗಿದ್ದ ಸ್ವಿಪ್ಟ್ ಕಾರು, ಸ್ವಿಪ್ಟ್ ಡಿಸೈರ್ ಕಾರು, ಹೊಂಡಾ ಇಟಿಯಸ್ ಕಾರು, ಮಾರುತಿ ಎರಿಟಿಗಾ ಕಾರುಗಳ ಗಾಜು ಒಡೆದು ಒಳಗೆ ಹೋಗಿ, ಡಿವೈಸ್ನ್ನು ಕಾರಿಗೆ ಅಳವಡಿಸಿ ಅದರ ಜೊತೆಯಲ್ಲಿ ಅದೇ ಕಾರಿನ ನಕಲಿ ಕೀಯನ್ನು ಡಿವೈಸರ್ಗೆ ಕನೆಕ್ಟ್ ಮಾಡಿ, ಡಿವೈಸರ್ನಲ್ಲಿರುವ ಕಾರ್ಲಾಕ್ನ ಆಪ್ ತೆಗೆದು ಸಿಸ್ಟಮ್ ಆಪರೇಟ್ ಮಾಡಿ ಕೆಲವೇ ನಿಮಿಷಗಳಲ್ಲಿ ಕಾರು ಚಾಲನೆ ಮಾಡಿಕೊಂಡು ಕಳ್ಳತನ ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ಕಳ್ಳತನ ಮಾಡಿದ ಕಾರುಗಳನ್ನು ತಮಿಳುನಾಡು ರಾಜ್ಯದ ತಿರುಚಿ, ತಿರುವಣ್ಣಾಮಲೈ, ವೇಲೂರು, ರಾಮನಾಉ, ಮೇಟಿಪಾಳ್ಯ, ತಿಪತ್ತೂರ್, ಚೆನ್ನೈ, ನಾಗಪಟ್ಟಣ, ನಾಮಕಲ್ಲು ಎಂಬ ಊರುಗಳಲ್ಲಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದನು.
ಗ್ರಾಹಕರಿಗೆ ಕಾರು ನೊಂದಣಿ ದಾಖಲಾತಿಗಳನ್ನು ನಂತರದಲ್ಲಿ ಕೊಡುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದುಕೊಂಡು ಅಕ್ರಮವಾಗಿ ಗಳಿಸಿದ ಹಣದಿಂದ ಸ್ನೇಹಿತರ ಜೊತೆ ಸೇರಿಕೊಂಡು ಮದ್ಯಪಾನ ಹಾಗೂ ಬೇರೆ ಸ್ಥಳಗಳಿಗೆ ಹೋಗಿ ಮೋಜುಮಸ್ತಿ, ಪಾರ್ಟಿ ಮಾಡಿ ಹಣ ಖರ್ಚು ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.
11 ಪ್ರಕರಣ ಪತ್ತೆ: ಆರೋಪಿಯ ಬಂಧನದಿಂದ ಕೋಣಕುಂಟೆ, ಮೈಕೋಲೇಔಟ್, ಬಾಣಸವಾಡಿ,ಬೇಗೂರು, ಬೆಳ್ಳಂದೂರು, ಬಿಡದೆ, ನಂದಗುಡಿ ಸೇರಿದಂತೆ ಒಟ್ಟು 11ಪ್ರಕರಣಗಳು ಪತ್ತೆಯಾಗಿವೆ.
ಅಭಿನಂದನೆ: ಆರೋಪಿಯನ್ನು ಬಂಸಿ ಬರೋಬ್ಬರು 70 ಲಕ್ಷ ಮೌಲ್ಯದ ಕಾರುಗಳನ್ನು ವಶಪಡಿಸಿಕೊಂಡಿರುವ ಎಚ್ಎಸ್ಆರ್ ಲೇಔಟ್ ಠಾಣೆಯ ಅಧಿಕಾರಿ ಮತತು ಸಿಬ್ಬಂದಿಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಅಭಿನಂದಿಸಿದ್ದಾರೆ.