ಬೆಂಗಳೂರು,ಡಿ.16- ಕಾಂಗ್ರೆಸ್ ದೇಶ ಭಕ್ತರ ಪರವಾಗಿದೆಯೋ ಇಲ್ಲವೆ ಉಗ್ರರ ಪರವಾಗಿ ಇದೆಯೇ ಎಂಬುದನ್ನು ಜನತೆಯ ಮುಂದೆ ಬಹಿರಂಗಪಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಐಸಿಸಿಗೆ ನೇರ ಸವಾಲು ಹಾಕಿದ್ದಾರೆ.
ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾಗಾಂಧಿ, ರಾಹುಲ್ಗಾಂಧಿ ಅವರುಗಳು ಕಾಂಗ್ರೆಸ್ ದೇಶ ಭಕ್ತರ ಪರವಾಗಿ ಇದೆಯೋ ಇಲ್ಲವೆ ಭಯೋತ್ಪಾ ದಕರ ಪರವಾಗಿದೆಯೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.
ನಗರದ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ವಿಜಯ್ ದಿವಸ್ ಆಚರಣೆ ಅಂಗವಾಗಿ ಹುತಾತ್ಮ ಯೋಧ ರಿಗೆ ಗೌರವಾರ್ಪಣೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಖಾಸುಮ್ಮನೆ ಅಥವಾ ಏನೂ ಗೊತ್ತಿಲ್ಲದವರಂತೆ ಈ ಹೇಳಿಕೆ ಕೊಟ್ಟಿಲ್ಲ. ಭಯೋತ್ಪಾದಕನ ಬಗ್ಗೆ ಅನುಕಂಪ ತೋರಿಸಿದರೆ ಅಲ್ಪಸಂಖ್ಯಾತ ಸಮುದಾಯದ ಮತಗಳು ಬರಬಹುದೆಂಬ ಲೆಕ್ಕಾಚಾರದಿಂದಲೇ ಹೇಳಿದ್ದಾರೆ ಎಂದು ಆರೋಪಿಸಿದರು.
ನೇಕಾರ ಸಮ್ಮಾನ್ ಯೋಜನೆ ಜಾರಿ: 5000ರೂ. ನೇರ ನಗದು ವರ್ಗಾವಣೆ..
ಸಾಕ್ಷಿ ಸಮೇತ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಆತನ ಬಂಧನದಿಂದ ರಾಜ್ಯದಲ್ಲಿ ಉಂಟಾಗಬಹುದಿದ್ದ ದೊಡ್ಡ ಅನಾಹುತವೇ ತಪ್ಪಿದೆ. ಸಂಭವಿಸಬಹುದಾದ ಬಹು ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ. ಭಯೋತ್ಪಾದನೆ ವಿಷಯದಲ್ಲಿ ಕಾಂಗ್ರೆಸ್ನ ನಿಲುವೇನು ಎಂದು ಸಿಎಂ ಪ್ರಶ್ನಿಸಿದರು.
ಸಾಕ್ಷಿ ಸಮೇತ ಪೊಲೀಸರು ಆರೋಪಿಯನ್ನು ಬಂಧಿಸಿದ್ದರೂ ಕಾಂಗ್ರೆಸ್ನವರಿಗೆ ಟೀಕೆ ಮಾಡುವುದೇ ಕಾಯಕವಾಗಿದೆ. ಈ ಮೂಲಕ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಮಾತು ನಂಬಲು ಜನ ಮೂರ್ಖರಲ್ಲ ಎಂದು ತಿರುಗೇಟು ನೀಡಿದರು.
ಬಂಧಿತ ಉಗ್ರನಿಗೆ ಭಯೋತ್ಪಾದನೆ ಸಂಘಟನೆ ಮತ್ತು ಕೆಲ ಉಗ್ರರ ಸಂಪರ್ಕವಿರುವುದು ತನಿಖೆಯಿಂದ ತಿಳಿದು ಬಂದಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಓರ್ವ ಹಿರಿಯ ರಾಜಕಾರಣಿ. ಏನೇ ಮಾತನಾಡಬೇಕಾದರೂ ಮೊದಲು ವಿಷಯ ತಿಳಿದುಕೊಂಡು ಮಾತನಾಡಲಿ. ಅಲ್ಪಸಂಖ್ಯಾತರ ಓಲೈಕೆಗಾಗಿ ಭಯೋತ್ಪಾದಕನ ಬಗ್ಗೆ ಅನುಕಂಪ ಬೇಡ. ಅವರ ಹೇಳಿಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಭಯೋತ್ಪಾದಕರಿಗೆ ಬೆಂಬಲ ಕೊಟ್ಟು ಚುನಾವಣೆಯಲ್ಲಿ ಹೆಚ್ಚಿನ ಮತ ಪಡೆಯಬಹುದೆಂಬ ನಿಮ್ಮ ಲೆಕ್ಕಾಚಾರ ಈಡೇರುವುದಿಲ್ಲ. ಇನ್ನು ಎಷ್ಟು ದಿನ ಈ ರೀತಿ ಓಲೈಕೆ ರಾಜಕಾರಣ ಮಾಡುತ್ತೀರಿ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.
ಮತದಾರರ ಪಟ್ಟಿ ಅಕ್ರಮವನ್ನು ಮರೆಮಾಚಲು ಕುಕ್ಕರ್ಬಾಂಬ್ ಸೃಷ್ಟಿಸಿದೆ ಎಂಬ ಡಿಕೆಶಿ ಹೇಳಿಕೆಗೆ ತಿರುಗೇಟ್ಟು ಕೊಟ್ಟ ಸಿಎಂ, 2017ರಲ್ಲಿ ಆ ಸಂಸ್ಥೆಗೆ ಕೊಟ್ಟವರು ಯಾರು ಎಂದು ತರಾಟೆಗೆ ತೆಗೆದುಕೊಂಡರು.
ಚಿಲುಮೆ ಸಂಸ್ಥೆಗೆ ಕೊಟ್ಟಿದ್ದು ಇದೇ ಕಾಂಗ್ರೆಸ್ ಸರ್ಕಾರ. ಅಕ್ರಮವಾಗಿ ನೀಡಿದ್ದೇ ಇವರು. ಈಗ ನಾವು ತನಿಖೆಗೆ ವಹಿಸಿದ್ದೇವೆ. ಎಲ್ಲಾ ಸತ್ಯಾಂಶವೂ ಹೊರ ಬರಲಿದೆ. ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಪ್ರಕರಣದಲ್ಲಿ ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತನಿಖೆಯಿಂದ ಎಲ್ಲವೂ ಬಹಿರಂಗಗೊಳ್ಳಲಿದೆ. ನಮ್ಮ ನಿಲುವು ಇದರಲ್ಲಿ ಸ್ಪಷ್ಟವಾಗಿದೆ ಎಂದರು.
ದೇಶದ ಗಡಿ ರಕ್ಷಣೆ ಮಾಡುವ ವಿಷಯದಲ್ಲಿ ಹಲವಾರು ಯುದ್ಧಗಳು ನಡೆದಾಗ ಕರ್ನಾಟಕದ ಅನೇಕ ಯೋಧರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಇನ್ನು ಕೆಲವು ಯೋಧರು ಗಾಯಗೊಂಡಿದ್ದಾರೆ. ಅವರ ಪರಿಶ್ರಮದ ಫಲದಿಂದಲೇ ನಮಗೆ ಜಯ ಸಿಕ್ಕಿದೆ ಎಂದು ಯೋಧರ ಗುಣಗಾನ ಮಾಡಿದರು.
ಕುಕ್ಕರ್ ಬಾಂಬ್ ಪ್ರಕರಣ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆ ಶಿವಕುಮಾರ್
ರಕ್ಷಣಾ ಸೇವೆ ಶ್ರೇಷ್ಠವಾದ ಕಾಯಕವಾಗಿದೆ. ಬೇರೆ ಯಾವುದೇ ಸೇವೆಯೂ ಈ ರೀತಿ ಇರುವುದಿಲ್ಲ. ದೇಶ ರಕ್ಷಣೆಗಾಗಿಯೇ ಇರುವುದು ಈ ಪಡೆ. ದೇಶಕ್ಕೋಸ್ಕರ ಎಲ್ಲವನ್ನು ತ್ಯಾಗ ಮಾಡಿ ಹೋರಾಡಿದ್ದಾರೆ. ವಿಜಯಕ್ಕಾಗಿ ಯಾರು ಹೋರಾಟ ಮಾಡಿರುತ್ತಾರೋ ಗೆದ್ದನಂತರ ಅವರೇ ಇರುವುದಿಲ್ಲ. ಕೊರೆಯುವ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ಸೈನಿಕರು ಹೋರಾಟ ಮಾಡುತ್ತಾರೆ. ಅಂತಹ ವೀರ ಯೋಧರಿಗೆ ನನ್ನದೊಂದು ಸಲಾಮ್ ಎಂದು ಭಾವುಕವಾಗಿ ನುಡಿದರು.
ನಮ್ಮ ಭಾರತೀಯ ಸೈನಿಕರು ಶಿಸ್ತಿನ ಸಿಪಾಯಿಗಳು. ಹಲವಾರು ಸವಾಲುಗಳ ನಡುವೆಯೇ ಹೋರಾಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಮುನ್ನುಗ್ಗುತ್ತಿದೆ. ಅದಕ್ಕೆ ಪೂರಕವಾಗಿ ನಾಗರಿಕರು ಕೂಡ ಕೈ ಜೋಡಿಸುತ್ತಿದ್ದಾರೆ. ಸೈನಿಕ ಪರಿವಾರಕ್ಕೆ ಎಲ್ಲಾ ರೀತಿಯ ಸಹಾಯವನ್ನು ಸರ್ಕಾರ ನೀಡಲಿದೆ ಎಂದು ಸಿಎಂ ಭರವಸೆ ನೀಡಿದರು.
ಸಮಾರಂಭದಲ್ಲಿ ಗೃಹ ಸಚಿವ ಆರಗ ಜ್ಞಾನೆಂದ್ರ, ಸೇನಾಪಡೆಯ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
CM Bommai, AICC, Congress, dk shivakumar, terrorists,