ಬೆಂಗಳೂರು,ಫೆ.15- ಆಯಾಯ ಕಾಲೇಜಿನ ಆಡಳಿತ ಮಂಡಳಿ, ಪೋಷಕರು ಹಿಜಾಬ್ ಕುರಿತ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಮಂಡಳಿ ವಿವಾದವಾಗದಂತೆ ಬಗೆಹರಿಸಿಕೊಳ್ಳಬೇಕು. ಹೊರಗಿನವರು ಆ ವಿಚಾರದಲ್ಲಿ ಮಧ್ಯಪ್ರವೇಶಿಸಬಾರದು. ವಿದ್ಯಾರ್ಥಿಗಳ ಪೋಷಕರು ತಂದೆತಾಯಿಗಳು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದರು.
ಬಜೆಟ್ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಅಲ್ಪಸಂಖ್ಯಾತರ ನಿಯೋಗ ಮುಖ್ಯಮಂತ್ರಿಯನ್ನು ಭೇಟಿ ಮಾಡಲಾಗಿತ್ತು. ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಹಿಜಾಬ್ ವಿಚಾರದಲ್ಲಿ ಸರಿಯಾದ ನಿರ್ಣಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ಅದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ನಿಲುವು ಏನೆಂಬುದನ್ನು ಶಾಸಕಾಂಗ ಪಕ್ಷದ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ. ಸಚಿವ ಈಶ್ವರಪ್ಪ ಅವರ ಹೇಳಿಕೆ ಖಂಡಿಸುತ್ತೇವೆ. ಹಿರಿಯ ನಾಗರಿಕರಿಗೆ ಇದು ಶೋಭೆ ತರುವುದಿಲ್ಲ. ರಾಷ್ಟ್ರಧ್ವಜ ಈ ದೇಶದ ಮಣ್ಣಿನ ತ್ಯಾಗದ ಪ್ರತಿಫಲ. ಅದರ ಹಿಂದೆ ಹಲವು ಧ್ಯೇಯೋದ್ದೇಶಗಳಿವೆ.
ಇದು ಭಾರತ ಮಾತೆಗೆ ಮಾಡುವ ದ್ರೋಹ. ಈಶ್ವರಪ್ಪನವರ ಹಿರಿಯರಾಗಿ ಆ ರೀತಿ ಮಾತನಾಡಿರಬಹುದು. ಆದರೆ ಬಿಜೆಪಿ ನಾಯಕರು ಅದಕ್ಕೆ ಸಮರ್ಥಿಸಿರುವುದು ಸರಿಯಲ್ಲ. ಸರಿಯಾದ ದೇಶ ಪ್ರೇಮವಿದ್ದರೆ ಎಲ್ಲರನ್ನು ಅವರ ಹೇಳಿಕೆಯನ್ನು ಖಂಡಿಸಬೇಕು ಎಂದರು.
