ಬೆಂಗಳೂರು,ಜ.26- ನೂರಕ್ಕೆ ನೂರರಷ್ಟು ನಾನು ಹೇಳುತ್ತಿರುವುದು ಸತ್ಯ. ಕಾಂಗ್ರೆಸ್ನ ಅನೇಕ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಶಾಸಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ನ ಅನ್ಯಾಯ, ಗುಂಪುಗಾರಿಕೆಯಿಂದ ಬೇಸತ್ತು ಬಿಜೆಪಿಯತ್ತ ಅನೇಕರು ಮುಖ ಮಾಡಿದ್ದಾರೆ. ನಾನು 100ಕ್ಕೆ ನೂರರಷ್ಟು ಸತ್ಯವನ್ನೇ ಹೇಳುತ್ತೇನೆ. ಸ್ವಲ್ಪ ದಿನ ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು.
ನನ್ನ ಜೊತೆ ಅನೇಕ ಶಾಸಕರು ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚೆಯೂ ಆಗಿದೆ.ಅವರ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಹೆಸರು ಹೇಳುವುದಿಲ್ಲ. ಆದರೆ ನಮ್ಮ ಜೊತೆ ಸಂಪರ್ಕದಲ್ಲಿರುವುದು ದಿಟ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಒಡಕಿನಿಂದ ಅನೇಕ ಶಾಸಕರು ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ಬಿಜೆಪಿಯಲ್ಲಿ ಒಬ್ಬೇ ಒಬ್ಬ ಶಾಸಕನೂ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ನಮ್ಮಲ್ಲಿ ಸಣ್ಣಪುಟ್ಟ ಅಭಿಪ್ರಾಯ ಬೇಧ ಇರಬಹುದೇ ಹೊರತು ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ನವರು ಯತ್ನಿಸುತ್ತಿದ್ದಾರೆ. ಅವರ ಈ ಪ್ರಯತ್ನ ಯಾವುದೇ ಕಾರಣಕ್ಕೂ ಈಡೇರುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಅದನ್ನು ಯಾರಾದರೂ ಹತ್ತಲು ಪ್ರಯತ್ನಿಸುತ್ತಾರೆಯೇ ಎಂದು ಪ್ರಯತ್ನಿಸಿದರು.
