ನವದೆಹಲಿ, ಜ.15- ಪದ್ಮಶ್ರೀ ಕಂಗಣಾ ರಾಣಾವತ್ ಅವರ ಕೆನ್ನೆಯಷ್ಟು ನುಣುಪಾದ ರಸ್ತೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳುವ ಮೂಲಕ ಜಾರ್ಖಾಂಡ್ನ ಕಾಂಗ್ರೆಸ್ ಶಾಸಕ ನೀಡಿರುವ ಹೇಳಿಕೆ ವಿವಾದಕ್ಕೆ ಗ್ರಾಸವಾಗಿದೆ.
ಜಂತಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಇಫ್ರಾನ್ ಅನ್ಸಾರಿ ಅವರು ಸ್ವಯಂ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ತಮ್ಮ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಗುಣಮಟ್ಟದಲ್ಲಿ 14 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಅವು ನಟಿ ಕಂಗಣಾ ರಾಣಾವತ್ ಅವರ ಕೆನ್ನೆಗಿಂತಲೂ ನುಣುಪಾಗಿರಲಿವೆ ಎಂದು ಹೇಳಿದ್ದಾರೆ.
ಶಾಸಕರ ಹೇಳಿಕೆ ತೀವ್ರ ಆಕ್ಷೇಪಗಳು ಕೇಳಿ ಬಂದಿವೆ. ನಟಿಯರ ಕೆನ್ನೆಗೆ ಮತ್ತು ರಸ್ತೆಗೆ ಹೋಲಿಕೆ ಮಾಡುವುದು ಹೊಸದಲ್ಲ. 2005ರಲ್ಲಿ ಆರ್.ಜೆ.ಡಿ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮ ಕ್ಷೇತ್ರದಲ್ಲಿನ ರಸ್ತೆಗಳನ್ನು ಹೇಮಮಾಲೀನಿ ಅವರ ಕೆನ್ನಯಷ್ಟು ನುಣುಪಾಗಿ ನಿರ್ಮಿಸುವುದಾಗಿ ಹೇಳಿದ್ದರು.
2021ರ ನವೆಂಬರ್ನಲ್ಲಿ ರಾಜಸ್ಥಾನದ ಸಚಿವ ರಾಜೇಂದ್ರ ಸಿಂಗ್ ಅವರು ಕತ್ರೀನಾ ಕೈಫ್ ಕೆನ್ನೆಗೆ ಹೋಲಿಕೆ ಮಾಡಿದ್ದರು. ಮಹಾರಾಷ್ಟ್ರದ ಸಚಿವ ಹಾಗೂ ಹಿರಿಯ ನಾಯಕ ಗುಲಬ್ರೌ ಪಾಟೀಲ್ ಅವರು ಹೇಮಮಾಲೀನಿ ಅವರ ಕೆನ್ನೆ ಕುರಿತು ಹೇಳಿಕೆ ನೀಡಿ ಕೊನೆಗೆ ಕ್ಷಮೆ ಕೇಳಿದರು.
