ಬೆಂಗಳೂರು,ಫೆ.19- ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವರೆಗೂ ವಿಧಾನಮಂಡಲದಲ್ಲಿ ನಮ್ಮ ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದ ಕೆಂಗಲ್ ಹನುಮಂತಯ್ಯ ಗೇಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ನವರಿಗೆ ತ್ರಿವರ್ಣಧ್ವಜದ ಬಗ್ಗೆ ಗೌರವವಿಲ್ಲ. ಹೀಗಾಗಿ ಅವರು ಕೇಸರಿ ಧ್ವಜ ಹಾರಿಸುವ ಷಡ್ಯಂತರ ಹೊಂದಿದ್ದಾರೆ. ಅದನ್ನು ಈಶ್ವರಪ್ಪ ಸಭ್ಯತನದಿಂದ ಬಾಯಿಬಿಟ್ಟಿದ್ದಾರೆ ಎಂದು ಹೇಳಿದರು.
ಸರ್ಕಾರ ಮೊದಲು ಈಶ್ವರಪ್ಪನವರ ರಾಜೀನಾಮೆಯನ್ನು ತೆಗೆದುಕೊಳ್ಳಬೇಕು. ಉಳಿದ ವಿಚಾರಗಳನ್ನು ಚರ್ಚೆ ಮಾಡಬೇಕು. ರಾಷ್ಟ್ರಧ್ವಜ ಮತ್ತು ದೇಶಭಕ್ತಿಯ ವಿಷಯದಲ್ಲಿ ಯಾವುದೇ ರಿಯಾಯ್ತಿ ಇಲ್ಲ. ಇದು 130 ಕೋಟಿ ಜನರ ಭಾವನೆಗಳ ವಿಚಾರ.
ದೇಶದ ಸ್ವಾಭಿಮಾನಕ್ಕೆ ಸಂಬಂಸಿದ ಪ್ರಶ್ನೆ ಎಂದರು.
ದೇಶ ಧ್ವಜಕ್ಕೆ ಅವಮಾನ ಮಾಡಿದವರು ಸಂಪುಟದಲ್ಲಿ ಮುಂದುವರೆಯಲು ಯೋಗ್ಯರೇ ಎಂದು ಪ್ರಶ್ನಿಸಿದರು. ಸೋಮವಾಗ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
