ಬೆಂಗಳೂರು,ಆ.16- ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವತಿಯಿಂದ 2 ಕೋಟಿ ರೂ. ಮೊತ್ತದ ಶಿಕ್ಷಣ ನಿಧಿಯ ಚೆಕ್ನ್ನು ರಾಜ್ಯ ಸಹಕಾರ ಮಹಾಮಂಡಳಕ್ಕೆ ಹಸ್ತಾಂತರಿಸಲಾಯಿತು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು, ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಹಸ್ತಾಂತರಿಸಿದರು.
ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡರು, ಭಿನ್ನಾಭಿಪ್ರಾಯ ರಾಜಕೀಯವನ್ನು ಬಿಟ್ಟು, ಸಹಕಾರ ಕ್ಷೇತ್ರ ಉಳಿಸುವ ಕೆಲಸವನ್ನು ಮಾಡಬೇಕು. ಸಹಕಾರ ಕ್ಷೇತ್ರವನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯಕ್ಕೆ ಬರುತ್ತಾರೆ. ಶಾಸಕರು, ಸಚಿವರಾದ ಮೇಲೆ ಆ ಕ್ಷೇತ್ರವನ್ನು ಕಡೆಗಣಿಸಬಾರದು. ಎಲ್ಲರೂ ಒಟ್ಟಾಗಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ನಮಿಸಬೇಕು. ರಾಜಕೀಯ ಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಬೇಕು. ಸಹಕಾರ ಕ್ಷೇತ್ರವನ್ನು ಉಳಿಸುವ ಕೆಲಸ ಮಾಡಬೇಕು. ಕೆಲವು ಸಹಕಾರ ಸಂಸ್ಥೆಗಳಲ್ಲಿ ಅವಿರೋಧವಾಗಿ ಆಯ್ಕೆಯಾಗುತ್ತಿರುವುದು ಸ್ವಾಗತಾರ್ಹ ಎಂದರು.
ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಮಾತನಾಡಿ, ಸಹಕಾರ ಕ್ಷೇತ್ರ ಪವಿತ್ರವಾದದ್ದು, ಇದರಲ್ಲಿ ರಾಜಕೀಯ ಬೆರೆಸಬಾರದು. ಶಿಕ್ಷಣ ನಿಧಿಗೆ 2 ಕೋಟಿ ರೂ.ಗಳನ್ನು ಮಹಾಮಂಡಳದಿಂದ ನೀಡಲಾಗಿದೆ. 50 ಕಡೆಗಳಲ್ಲಿ ಚಿಲ್ಲರೆ ರೂಪದಲ್ಲಿ ರಸಗೊಬ್ಬರ, ಕೃಷಿ ಉತ್ಪನ್ನ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು. ಜನರಿಕ್ ಔಷಧದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು.
ಮಹಾಮಂಡಳದ ಸಿಬ್ಬಂದಿಗೆ ನಿವೃತ್ತಿ ಪಿಂಚಣಿ ಯೋಜನೆಯನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಕಮೀಷನ್ ಆಧಾರದ ಮೇಲೆ ಇತರೆ ಸಂಸ್ಥೆಗಳೊಂದಿಗೆ ವ್ಯವಹರಿಸುವುದು, ಇ-ಮಾರ್ಕೆಟ್ ಘಟಕಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಮಹಾಮಂಡಳದಲ್ಲಿ ಎ ಮತ್ತು ಬಿ ವರ್ಗದ 504 ಷೇರುದಾರರು ಇದ್ದು 9.02 ಕೋಟಿ ಷೇರು ಬಂಡವಾಳವಿದೆ. 417.42 ಲಕ್ಷದ ಗೊಬ್ಬರ ಮಾರಾಟ ಮಾಡಲಾಗಿದೆ. ಆಡಿಟ್ನಲ್ಲಿ ಬಿ ಗ್ರೇಡ್ ದೊರೆತಿದೆ ಎಂದು ಹೇಳಿದರು. ಸಹಕಾರ ಮಾರಾಟ ಮಹಾಮಂಡಳದ ಉಪಾಧಕ್ಷ ಪಾಟೀಲ್ ಉಪಸ್ಥಿತರಿದ್ದರು.