ಶಿವಮೊಗ್ಗ,ಜ.5- ಕೊರೊನಾ ಟಫ್ ರೂಲ್ಸ್ ಜನ ಸಾಮಾನ್ಯರಿಗೆ ಅನ್ವಯವಾಗುವಂತೆ ಕಾಂಗ್ರೆಸ್ ಪಕ್ಷಕ್ಕೂ ಅನ್ವಯವಾಗುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಬೆಂಗಳೂರಿನಲ್ಲಿ ಸಹ ಪ್ರತಿ ದಿನ ಸಾವಿರಾರ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿವೆ. ರಾಜ್ಯ ಸರ್ಕಾರ ತಜ್ಞರ ಸಲಹೆ ಪಡೆದು ಕಠಿಣ ನಿಯಮ ಜಾರಿ ಮಾಡಲಾಗಿದೆ. ನೈಟ್ ಕಫ್ರ್ಯೂ ಜತೆಗೆ ಈಗ ವೀಕ್ ಎಂಡ್ ಕಫ್ರ್ಯೂ ಜಾರಿಯಾಗಿದೆ ಎಂದು ಸಮರ್ಥಿಸಿಕೊಂಡರು.
ಸರ್ಕಾರ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಹರಿಸುತ್ತದೆ. ಕಾನೂನು ಕ್ರಮ ಕುರಿತಂತೆ ಪೊಲೀಸರು ನೋಡಿಕೊಳ್ಳುತ್ತಾರೆ, ಕಾಂಗ್ರೆಸ್ನವರಿಗಾಗಿ ನಾವು ಈ ನಿಯಮಗಳನ್ನು ಜಾರಿ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಎಲ್ಲಾ ಕ್ರಮಗಳನ್ನು ತಜ್ಞರೊಂದಿಗೆ ಸೇರಿ ಚರ್ಚಿಸಿ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿರ್ಧಾರವನ್ನು ಎಲ್ಲರೂ ಪಾಲಿಸಬೇಕು. ಸಭೆ, ಸಮಾರಂಭ ಮಾಡದಂತೆ ನಿರ್ಬಂಧ ಹೇರಲಾಗಿದೆ. ಹಾಗಾಗಿ, ಕಾಂಗ್ರೆಸ್ನವರಿಗಾಗಿಯೇ ಪ್ರತ್ಯೇಕ ನಿಯಮ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
