ಹಳ್ಳಿಗಳಲ್ಲೂ ಜೋರಾಗಿದೆ ಕೊರೊನಾ ಅಬ್ಬರ

Social Share

ಬೆಂಗಳೂರು,ಜ.15- ಕೊರೋನಾ ಮೂರನೇ ಅಲೆ ಆರ್ಭಟ ಆರಂಭವಾಗಿದ್ದರೂ, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಬೇಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಈ ಬೆಳವಣಿಗೆಯು ಇದೀಗ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹರಡುವ ಕುರಿತು ಆತಂಕ ಹೆಚ್ಚಾಗುವಂತೆ ಮಾಡಿದೆ.
ಜನರು ಕೋವಿಡ್ ಮುಂಜಾಗ್ರತಾ ಕ್ರಮ ಅನುಸರಿಸುತ್ತಿರುವುದನ್ನು ಪರಿಶೀಲಿಸಲು ಈಗಾಗಲೇ ಹಲವೆಡೆ , ಪೊಲೀಸರನ್ನು ನಿಯೋಜಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಆದರೂ, ಕೆಲವರು ನಿಯಮ ಪಾಲಿಸದೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವುದು ಕಂಡು ಬರುತ್ತಿದೆ. ರಸ್ತೆಗಳಲ್ಲಿ ಓಡಾಡುವ ಜನರು, ನಾನು ಮಾಸ್ಕ್ ಮರೆತು ಬಂದು ಬಿಟ್ಟೆ…
ನಾನಿರುವ ಸ್ಥಳದಲ್ಲಿ ಮಾಸ್ಕ್ ಕಡ್ಡಾಯವಿಲ್ಲ, ಈಗಷ್ಟೇ ಮಾಸ್ಕ್ ತೆಗೆದಿದ್ದೆ, ಉಗುಳು ಉಗಿಯುವ ಸಲುವಾಗಿ ಮಾಸ್ಕ್‍ತೆಗೆದಿದ್ದೆ, ಸಿಗರೇಟ್ ಸೇದುವ ಸಲುವಾಗಿ ಮಾಸ್ಕ್ ತೆಗೆದಿದ್ದೆ, ನಾನು ಧರಿಸಿರುವ ಬಟ್ಟೆಗೆ ಮಾಸ್ಕ್ ಸೂಟ್ ಆಗುವುದಿಲ್ಲ, ಚೆನ್ನಾಗಿ ಕಾಣುವುದಿಲ್ಲ ಎಂದು ತೆಗೆದಿದ್ದೆ ಎಂದು ಹೇಳುತ್ತಿರುವುದು ಕಂಡು ಬಂದಿದೆ.
ನಗರದಂತೆ ಇತ್ತೀಚೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಸೋಂಕು ಹೆಚ್ಚಾಗುತ್ತಿದ್ದು, ಮಾಸ್ಕ್ ಪ್ರಾಮುಖ್ಯತೆ ಜನರಲ್ಲಿ ಅರಿವು ಮೂಡಿಸುವುದು ಹಾಗೂ ಕೋವಿಡ್ ವಿರುದ್ಧ ದಿಟ್ಟ ಹೋರಾಟ ಮಾಡಲು ಪ್ರತೀಯೊಬ್ಬರೂ ಮಾಸ್ಕ್‍ಧರಿಸುವುದು ಅತ್ಯಗತ್ಯವಾಗಿದೆ ಎಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು ಹೇಳಿದ್ದಾರೆ.
ಕೋವಿಡ್ ನಡವಳಿಕೆಯನ್ನೂ ಪಾಲನೆ ಮಾಡದ ನಾಗರಿಕರಿಂದ ಈವರೆಗೂ ರೂ 2,41,250 ದಂಡವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಮಾಸ್ಕ್ ಧರಿಸದಿದ್ದಕ್ಕಾಗಿ ರೂ 2,34,000 ಸಂಗ್ರಹಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಈ ಪೈಕಿ ಗರಿಷ್ಠ ಪ್ರಕರಣಗಳು ಪಶ್ಚಿಮ ವಲಯ(383)ದಲ್ಲಿ ಕಂಡು ಬಂದಿದೆ. ನಂತರದ ಸ್ಥಾನ ದಕ್ಷಿಣ ವಲಯ (188) ಮತ್ತು ಪೂರ್ವ ವಲಯ (147) ಪಡೆದುಕೊಂಡಿದೆ. ಯಲಹಂಕದಲ್ಲಿ (25) ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ.
2020 ರ ಡಿಸೆಂಬರ್ನಲ್ಲಿ ಮಾರ್ಷಲ್ಗಳು ಮತ್ತು ಪೊಲೀಸರು ಗರಿಷ್ಠ 1,78,03,125 ರೂ. ದಂಡವನ್ನು ಸಂಗ್ರಹಿಸಿದ್ದರೆ, ಡಿಸೆಂಬರ್2021 ರಲ್ಲಿ 59,39,768 ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಹೆಚ್ಚು ಜನನಿಬಿಡ ಪ್ರದೇಶಗಳಾದ ಚಿಕ್ಕಪೇಟೆ, ಕೆಆರ್‍ಮಾರುಕಟ್ಟೆ, ಶಾಪಿಂಗ್ ಸ್ಥಳಗಳು, ಮಾಲ್‍ಗಳು, ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ದಂಡ ವಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Articles You Might Like

Share This Article