ಬೆಂಗಳೂರು,ಜ.10-ಇದುವರೆಗೂ ಕೊರೊನಾ ಲಸಿಕೆ ಪಡೆಯದಿದ್ದವರಿಗೆ ಸೋಂಕು ಕಾಣಿಸಿಕೊಂಡರೆ ಅವರು ನಿಶ್ಚಿತವಾಗಿ ಆಸ್ಪತ್ರೆ ಸೇರಲೆಬೇಕು ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಿಂದ ನೀವು ಪಾರಾಗಬೇಕಾದರೆ ಲಸಿಕೆ ಬಗ್ಗೆ ನಿಮಗಿರುವ ತಪ್ಪು ಅಭಿಪ್ರಾಯವನ್ನು ಬಿಟ್ಟು ಕೂಡಲೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ.
ಕೊರೊನಾ ಸೋಂಕು ಪತ್ತೆಯಾದವರ ಬಗ್ಗೆ ಕೋವಿಡ್ ವಾರ್ ರೂಮ್ ನೇತೃತ್ವ ವಹಿಸಿರುವ ಮನೀಶ್ ಮುದ್ಗಿಲ್ ಅವರ ತಂಡ ನಡೆಸಿರುವ ಸಮೀಕ್ಷೆಯಲ್ಲಿ ಲಸಿಕೆ ಪಡೆಯದವರಿಗೆ ಕೊರೊನಾ ಮಾರಕ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಜ.7ರವರೆಗೆ ರಾಜ್ಯದಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳು ಮತ್ತು ಅವರಲ್ಲಿ ಆಸ್ಪತ್ರೆಗೆ ದಾಖಲಾದ ಸೋಂಕಿತರ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಸೋಂಕು ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಶೇ.97 ಮಂದಿ ಲಸಿಕೆ ಪಡೆದವರಾಗಿದ್ದರೆ, ಕೇವಲ ಶೇ.3 ರಷ್ಟು ಮಂದಿ ಮಾತ್ರ ಇದುವರೆಗೂ ಲಸಿಕೆ ಪಡೆಯದವರಿದ್ದಾರೆ.
ಲಸಿಕೆ ಪಡೆದ ಶೇ.97 ಮಂದಿ ಸೋಂಕಿತರು ಆರೋಗ್ಯವಾಗಿದ್ದು, ಅವರು ತಮ್ಮ ಮನೆಗಳಲ್ಲೇ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ, ಲಸಿಕೆ ಪಡೆದವರಿಗಿಂತ 10 ಪಟ್ಟು ಹೆಚ್ಚು ಮಂದಿ ಲಸಿಕೆ ಪಡೆಯದವರು ಆಸ್ಪತ್ರೆಗಳಿಗೆ ದಾಖಲಾಗುವಂತಹ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಗೆ ಸೇರಿದ ನಂತರ ಲಸಿಕೆ ಪಡೆಯದವರ ಪರಿಸ್ಥಿತಿ ಬಿಗಡಾಯಿಸಿ ನಂತರ ಐಸಿಯು ಘಟಕಕ್ಕೆ ಸೇರುತ್ತಿರುವವರ ಪ್ರಮಾಣ ಶೇ.30 ರಷ್ಟಿದೆ ಎನ್ನುವುದು ವರದಿಯಲ್ಲಿ ಬಹಿರಂಗಗೊಂಡಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಕೊರೊನಾ ಸೋಂಕು ಲಸಿಕೆ ಪಡೆದವರ ಮೇಲೆ ಗಂಭೀರ ಪರಿಣಾಮ ಬೀರುತ್ತಿಲ್ಲ ಎನ್ನುವುದನ್ನು ದೃಢಪಡಿಸಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಕಾರಿಗಳು.
