ಲಂಚ ನೀಡಿದ್ದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ : ಸಿದ್ದರಾಮಯ್ಯ

Social Share

ಬೀದರ್,ಫೆ.4- ಯಾರಾದರೂ ನನಗೆ 5 ಪೈಸೆ ಲಂಚ ನೀಡಿದ್ದೆ ಎಂದು ಸಾಬೀತು ಪಡಿಸಿದರೆ ತಾವು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಜಿಲ್ಲೆಯ ಭಾಲ್ಕಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಬೇಕು, ಸಾಲ ಪಡೆಯುವುದನ್ನು ಕಡಿಮೆ ಮಾಡಬೇಕು, ಭ್ರಷ್ಟಾಚಾರವನ್ನು ನಿಲ್ಲಿಸಬೇಕು. 100 ರೂಪಾಯಿಯ ಒಂದು ಕಾಮಗಾರಿಯಲ್ಲಿ 40 ರೂ. ಕಮಿಷನ್ ನೀಡಿದರೆ ಉಳಿಯುವುದು 60 ರೂ. ಇದರಲ್ಲಿ 18 ರೂ. ಜಿಎಸ್‍ಟಿ ನೀಡಿದರೆ 42 ರೂ. ಉಳಿಯುತ್ತೆ.

ಹೀಗಾದರೆ ಯೋಜನೆ ಗುಣಮಟ್ಟದಿಂದ ಕೂಡಿರಲ್ಲ ಮತ್ತು ಶೀಘ್ರದಲ್ಲಿ ಕಾಮಗಾರಿ ಮುಗಿಯುವುದಿಲ್ಲ. ಹಿಂದೆ ಲಂಚವೇ ಇರಲಿಲ್ಲ ಎಂದು ಹೇಳಲ್ಲ, ಆದರೆ ಶೇ.40ರಷ್ಟು ಲಂಚ ಯಾವತ್ತೂ ಇರಲಿಲ್ಲ. ಬಿಲ್ ಬರಲಿಲ್ಲ ಎಂಬ ಕಾರಣಕ್ಕೆ ಗುತ್ತಿಗೆದಾರರು ಯಾವ ಕಾಲದಲ್ಲೂ ಆತ್ಮಹತ್ಯೆ ಮಾಡಿಕೊಂಡ ನಿದರ್ಶನ ಇಲ್ಲ.

ಮೈಸೂರು ನಗರದಲ್ಲಿ ಚಿರತೆ ಪ್ರತ್ಯಕ್ಷ, ಸಾರ್ವಜನಿಕರಲ್ಲಿ ಆತಂಕ

ಗುತ್ತಿಗೆದಾರರ ಸಂಘದವರು ನೇರವಾಗಿ ಪ್ರಧಾನಿಗಳಿಗೆ ಪತ್ರ ಬರೆದ ನಿದರ್ಶನ ಕೂಡ ಇರಲಿಲ್ಲ. ಎನ್‍ಒಸಿ ಗೆ ಶೇ.8 ರಿಂದ 10ರಷ್ಟು ಲಂಚ ನಿಗದಿ ಮಾಡಿದ್ದಾರೆ, ನಾನು 12 ವರ್ಷ ಹಣಕಾಸಿನ ಮಂತ್ರಿಯಾಗಿದ್ದೆ, ಯಾರಾದರೂ ಒಬ್ಬ ಸಿದ್ದರಾಮಯ್ಯರಿಗೆ 5 ಪೈಸೆ ಲಂಚ ನೀಡಿದ್ದೆ ಎಂದರೆ ರಾಜಕೀಯ ನಿವೃತ್ತಿಯಾಗುತ್ತೇನೆ.

ರಾಜ್ಯದ ಪ್ರಸ್ತುತ ಸಾಲದ ಪ್ರಮಾಣ 5 ಲಕ್ಷ 40 ಸಾವಿರ ಕೋಟಿಯಷ್ಟಾಗಿದೆ. ಈ ವರ್ಷ 29 ಸಾವಿರ ಕೋಟಿ ಬಡ್ಡಿಗೆ ಪಾವತಿ ಮಾಡಬೇಕು. 14 ಸಾವಿರ ಕೋಟಿ ಅಸಲಿಗೆ ಕಟ್ಟಬೇಕು. ಸಾಲ ಜಾಸ್ತಿಯಾದಷ್ಟು ಬಡ್ಡಿ ಕಟ್ಟಬೇಕಾದ ಹಣ ಮತ್ತು ಅಸಲಿನ ಕಂತು ಜಾಸ್ತಿಯಾಗುತ್ತದೆ.

2018 ಮಾರ್ಚ್ ನಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯುವಾಗ ಈ ರಾಜ್ಯದ ಮೇಲೆ ಇದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಇದು ಸ್ವಾತಂತ್ರ್ಯ ನಂತರದಿಂದ ನಮ್ಮ ಸರ್ಕಾರದ ಕೊನೆಯವರೆಗಿದ್ದ ಸಾಲ, ಬಿಜೆಪಿ ಬಂದ ನಂತರ 4 ವರ್ಷಗಳಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ.

ಇದರಿಂದ ಅನಗತ್ಯ ಹೊರೆ ಜÁಸ್ತಿಯಾಗಿದೆ, ಹೀಗಾದಾಗ ಅಭಿವೃದ್ಧಿ ಕಾರ್ಯಗಳಿಗೆ ಹಣ ಸಿಗುವುದಿಲ್ಲ. ರಸ್ತೆ, ಸೇತುವೆ, ನೀರಾವರಿ, ಮನೆ ಕಟ್ಟಿಸಿಕೊಡಲು, ಶಿಕ್ಷಣ ಈ ಎಲ್ಲಾ ಕಾರ್ಯಗಳಿಗೆ ಹಣದ ಕೊರತೆ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಅದಾನಿಯಂತಹ ಬಂಡವಾಳಶಾಹಿಗಳ ಗುಂಪಿಗೆ ಮೋದಿ ಅವರು ಸಾಲ ಕೊಡಿಸಿದ್ದರು. ಈಗ ಅಂಥಾ ಕಂಪೆನಿಗಳು ನಷ್ಟದಲ್ಲಿವೆ. ಮುಂದೊಂದು ದಿನ ಇದನ್ನು ಎನ್‍ಪಿಎ ಮಾಡಿ ಸಾಲ ಮನ್ನಾ ಮಾಡಿಬಿಡುತ್ತಾರೆ. ಬರಬೇಕಾದ ಬ್ಯಾಂಕ್ ಹಣ ಮುಳುಗಿಹೋದರೆ ದೇಶದ ಮೇಲೆ ಖಂಡಿತಾ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು.

ನಮ್ಮಲ್ಲಿ ಈಗ 69 ಕಾಂಗ್ರೆಸ್ ಶಾಸಕರು ಇದ್ದಾರೆ ಮತ್ತು ಇಬ್ಬರು ಪಕ್ಷೇತರ ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ಒಟ್ಟು 71 ಶಾಸಕರಿದ್ದೇವೆ. ಈ 71 ಜನರೂ ಮುಂದಿನ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ನಾನು ಹೇಳಲ್ಲ, ಆದರೆ ಶೇ.99ರಷ್ಟು ಜನ ಗೆಲ್ಲುತ್ತಾರೆ. ಕಾಂಗ್ರೆಸ್ ಸೇರುವವರು ತುಂಬಾ ಜನ ಇದ್ದಾರೆ, ನಮ್ಮ ಪಕ್ಷದ ಸಿದ್ದಾಂತಗಳನ್ನು ಒಪ್ಪಿಕೊಂಡು ಬಂದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದರು.

ಸಿಟಿ ರವಿ ಒಬ್ಬ ಸುಳ್ಳು ಹೇಳುವ ರಾಜಕಾರಣಿ. ಪಕ್ಕಾ ಆರ್,ಎಸ್,ಎಸ್ ವ್ಯಕ್ತಿ. ಅಂಥವರ ಮಾತಿಗೆ ಬೆಲೆ ಕೊಡಬೇಕಾದ ಅಗತ್ಯವಿಲ್ಲ. ಡಿ.ಕೆ ಶಿವಕುಮಾರ್ ಮತ್ತು ಪಕ್ಷದಿಂದ ಸಮೀಕ್ಷೆ ನಡೆದಿದ್ದು ನಾವು ಬಹುಮತ ಪಡೆಯುವುದು ನಿಶ್ಚಯ ಎಂಬ ವರದಿ ಇದೆ, ಇಂತಿಷ್ಟೇ ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಇಲ್ಲಿ ಹೇಳುವುದಿಲ್ಲ ಎಂದರು.

ದೇವೇಗೌಡರು, ಕುಮಾರಸ್ವಾಮಿ ಅವರು ಕಣ್ಣೀರು ಹಾಕುವುದು ಯಾಕೆ ಎಂದು ಜನರಿಗೆ ಈಗ ಅರ್ಥವಾಗಿದೆ. ಕಣ್ಣೀರು ಹಾಕುವುದರಿಂದ ಜನರ ಸಿಂಪತಿ ಸಿಗುತ್ತೆ ಅಂದುಕೊಂಡರೆ ಅದು ತಪ್ಪುಕಲ್ಪನೆ. ಅವರಿಗೆ ತೊಂದರೆ ಆದಾಗಲೆಲ್ಲ ಕಣ್ಣೀರು ಹಾಕುವುದು ಮಾತ್ರ ನಿಜ ಎಂದರು.

ಎಂ.ಬಿ ಪಾಟೀಲರಿಗೆ ಅಸಮಾಧಾನ ಇದ್ದರೆ ಅವರು ಇಂದು ನನ್ನ ಜೊತೆ ಹೀಗೆ ಕೂತುಕೊಳ್ತಿದ್ದರಾ? ಅಂಥಾ ಯಾವ ಅಸಮಾಧಾನಗಳು ಇಲ್ಲ ಎಂದು ಸಿದ್ದರಾಮಯ್ಯ ಹೇಳಿದಾಗ, ಅಲ್ಲೆ ಇದ್ದ ಎಂ.ಬಿ.ಪಾಟೀಲ್ ತಾವು ಅಸಮಧಾನ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರಿ ಅಧಿಕಾರಿಗಳು ಆಸ್ತಿ ದಾಖಲೆ ಸಲ್ಲಿಸಲು ಮಾ. 31 ಕೊನೆ ದಿನ

ನನಗೆ 75 ವರ್ಷ ತುಂಬಿದ್ದರ ಪ್ರಯುಕ್ತ ನಮ್ಮ ಪಕ್ಷದ ನಾಯಕರು ಎಲ್ಲರೂ ಸೇರಿಕೊಂಡು ನಿಮಗೆ 75 ವರ್ಷ ತುಂಬಿದೆ, ಇದು ಜೀವನದ ಒಂದು ಮೈಲಿಗಲ್ಲು, ಹಾಗಾಗಿ ಜನ್ಮದಿನದ ಆಚರಣೆ ಮಾಡೋಣ ಎಂದರು. ಅದಕ್ಕೆ ನಾನು ಒಪ್ಪಿಗೆ ಕೊಟ್ಟಿದ್ದೆ, ಕಾರ್ಯಕ್ರಮವೂ ಬಹಳಾ ಚೆನ್ನಾಗಿ ನಡೆಯಿತು. ಬಿಜೆಪಿಯವರು ಇದೇ ರೀತಿ ಕಾರ್ಯಕ್ರಮ ಮಾಡುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

2018ರಲ್ಲಿ ಬಿಜೆಪಿಯವರು ಜನರಿಗೆ ತಮ್ಮ ಪ್ರಣಾಳಿಕೆಯ ಮೂಲಕ 600 ಭರವಸೆಗಳನ್ನು ನೀಡಿದ್ದರು, ಅದರಲ್ಲಿ 50 ಭರವಸೆಗಳನ್ನು ಕೂಡ ಈಡೇರಿಸಿಲ್ಲ. ಅಂದರೆ ಅವರು ತಮ್ಮ ಶೇ.10ರಷ್ಟು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದಾರೆ ಎಂದರ್ಥ.

ನಾವು 165 ಭರವಸೆಗಳನ್ನು ನೀಡಿ ನಮ್ಮ ಸರ್ಕಾರದ ಅವಯಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು, ಇದರ ಜೊತೆಗೆ 30 ಹೊಸ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದೆವು. ಈಗ ಮತ್ತೆ ನಾವು ಜನರಿಗೆ ಯಾವೆಲ್ಲಾ ಭರವಸೆ ನೀಡುತ್ತಿದ್ದೇವೆ ಅವೆಲ್ಲವನ್ನೂ ಜಾರಿ ಮಾಡುತ್ತೇವೆ, ನಮ್ಮ ಪ್ರತಿ ಬಜೆಟ್ ಮಂಡಿಸುವ ಮೊದಲು ಬಜೆಟ್ ಪೂರ್ವ ಸಭೆಗಳಲ್ಲಿ ಒಂದು ಕಡೆ ನಮ್ಮ ಪ್ರಣಾಳಿಕೆ ಇನ್ನೊಂದು ಕಡೆ ಜನರ ಅಗತ್ಯತೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಿ ಕಾರ್ಯಕ್ರಮ ರೂಪಿಸುತ್ತಿದ್ದೆವು ಎಂದರು.

corruption, Siddaramaiah, Political, retirement,

Articles You Might Like

Share This Article