ದಸರಾ ಮಹೋತ್ಸವ: ಸೆ.20ರಂದು ಸಿಂಹಾಸನ ಜೋಡಿಸುವ ಕಾರ್ಯ ಆರಂಭ

Social Share

ಮೈಸೂರು, ಸೆ.13- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಗಳ ದಾದ ಖಾಸಗಿ ದರ್ಬಾರ್ಗೆ ರತ್ನ ಖಚಿತ ಸಿಂಹಾಸನವನ್ನು ಜೋಡಿಸುವ ಕಾರ್ಯ ಸೆ.20ರಂದು ಆರಂಭವಾಗಲಿದೆ. ನವರಾತ್ರಿ ವೇಳೆ ರಾಜವಂಶಸ್ಥರು ನಡೆಸುವ ಖಾಸಗಿ ದರ್ಬಾರ್‍ನ ಸಿಂಹಾಸನಾರೋಹಣಕ್ಕೆ ಬಳಸುವ ರತ್ನ ಖಚಿತ ಸ್ವರ್ಣ ಸಿಂಹಾಸನವನ್ನು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರಾಜವಂಶಸ್ಥರ ಸಮ್ಮುಖದಲ್ಲಿ ಅರಮನೆಯ ನೆಲಮಾಳಿಗೆಯಲ್ಲಿನ ಭದ್ರತಾ ಕೊಠಡಿಯಿಂದ ಹೊರ ತೆರೆಯಲಾಗುತ್ತದೆ.

ಅಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 1ಗಂಟೆವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಭದ್ರತಾ ಕೊಠಡಿಯಿಂದ ರತ್ನ ಖಚಿತ ಸಿಂಹಾಸನದ ಭಾಗಗಳನ್ನು ಹೊರತೆಗೆದು ನವಗ್ರಹ ಹೋಮ , ಇನ್ನಿತರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಂತರ ಅಂಬಾವಿಲಾಸ ಅರಮನೆಯಲ್ಲಿ ಸಿಂಹಾಸನ ಜೋಡಣಾ ಕಾರ್ಯ ಆರಂಭವಾಗಲಿದೆ. ಆ ಸಂದರ್ಭಕ್ಕೆ ಅರಮನೆ ಪಟ್ಟದ ಆನೆ, ಹಸು, ಕುದುರೆಗಳು ಸಾಕ್ಷಿಯಾಗಲಿವೆ.

ಇದನ್ನೂ ಓದಿ : ಮತ್ತೆ ಮುನ್ನೆಲೆಗೆ ಬಂದ ಸಿದ್ದು ಹೂಬ್ಲೆಟ್ ವಾಚ್ ವಿವಾದ

ರಾಜವಂಶಸ್ಥರು ಆಸೀನರಾಗುವ ಸ್ಥಳ, ಸಿಂಹಾಸನವನ್ನೇರಲು ಬಳಸುವ ಮೆಟ್ಟಿಲು, ಮೆರಗು ನೀಡುವ ಛತ್ರಿ ಸೇರಿದಂತೆ ಪ್ರಮುಖವಾಗಿ ವಿಂಗಡಿಸಿಟ್ಟಿರುವ 13 ಭಾಗಗಳನ್ನು ನಾಜೂಕಿನಿಂದ ಜೋಡಿಸಲಾಗುತ್ತದೆ.ಇದನ್ನು ಸ್ವರ್ಣಾಸನ ಜೋಡಣಾ ಕಾರ್ಯ ಅಂತಲೂ ಕರೆಯಲಾಗುತ್ತದೆ. ಈ ಸೂಕ್ಷ್ಮ ಕಾರ್ಯವನ್ನು ಮೈಸೂರು ಗೆಜ್ಜಹಳ್ಳಿ ಗ್ರಾಮಸ್ಥರು ನಿರ್ವಹಿಸಲಿದ್ದಾರೆ.

ನವರಾತ್ರಿ ಮೊದಲ ದಿನ ರಾಜವಂಶಸ್ಥರು ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಸಿಂಹದ ಆಕೃತಿಯನ್ನು ಜೋಡಿಸಿದ ನಂತರವಷ್ಟೇ ಪರಿಪೂರ್ಣ ಸಿಂಹಾಸನವಾಗಲಿದೆ. ಸಿಂಹಾಸನ ದಕ್ಷಿಣದಲ್ಲಿ ಬ್ರಹ್ಮ, ಉತ್ತರದಲ್ಲಿ ಶಿವ, ಮಧ್ಯಭಾಗದಲ್ಲಿ ವಿಷ್ಣುದೇವರ ಚಿತ್ರಗಳಿವೆ. ಸಿಂಹಾಸನದ ಕಲಶದಂತಿರುವ ಛತ್ರಿಯ ಮೇಲೆ ಸಂಸ್ಕøತದ ಶ್ಲೋಕಗಳಿವೆ. ಕುದುರೆ, ಹಂಸ, ಸ್ವಸ್ತಿಕ್, ನಾಗದೇವತೆಯ ಚಿತ್ರಗಳನ್ನು ಚಿತ್ರಿಸಲಾಗಿದೆ.

ಸೆ.26ರಂದು ದಸರಾ ಮಹೋತ್ಸವಕ್ಕೆ ಚಾಲನೆ ದೊರಕುತ್ತಿದ್ದಂತೆಯೇ ಖಾಸಗಿ ದರ್ಬಾರ್ ಕೂಡ ಆರಂಭವಾಗಲಿದೆ. ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅರಮನೆಯ ದರ್ಬಾರ್ ಸಭಾಂಗಣದಲ್ಲಿ ರತ್ನ ಖಚಿತ ಸಿಂಹಾಸನಕ್ಕೆ ಸಿಂಹದ ಆಕೃತಿಯನ್ನು ಜೋಡಿಸಿ ಪೂಜೆ ಸಲ್ಲಿಸಿದ ಬಳಿಕ ಸಿಂಹಾಸನಾರೂಢರಾಗುವ ಮೂಲಕ ಖಾಸಗಿ ದಬಾರ್ರ ಗೆ ಚಾಲನೆ ಸಿಗಲಿದೆ.

ಬೆಳಿಗ್ಗೆಯಿಂದಲೇ ಅರಮನೆ ಪುರೋಹಿತರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ರಾಜಮಾತೆ ಪ್ರಮೋದಾದೇವಿ ಒಡೆಯರ್ ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಭಾಗಿಯಾಗಲಿದ್ದಾರೆ. ಅರಮನೆ ಚಾಮುಂಡಿತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಕಂಕಣ ಧಾರಣೆಯಾಗಿ ಸವಾರಿ ತೊಟ್ಟಿಯಿಂದ ಅವರನ್ನು ಬಿರುದು ಬಾವಲಿಗಳ ಬಹುಪರಾಕ್‍ನೊಂದಿಗೆ ದರ್ಬಾರ್ ಸಭಾಂಗಣಕ್ಕೆ ಕರೆತರಲಾಗುತ್ತದೆ.

ಸಿಂಹಾಸನದ ಬಳಿ ಕಳಶ ಪೂಜೆ, ಪ್ರದಕ್ಷಿಣೆ ಸೇರಿದಂತೆ ಹಲವು ವಿಧಿ-ವಿಧಾನಗಳ ಬಳಿಕ ನಿಗದಿತ ಶುಭ ಘಳಿಗೆಯಲ್ಲಿ ರತ್ನ ಖಚಿತ ಸಿಂಹಾಸನದಲ್ಲಿ ಯದುವೀರ್ ಅವರು ವಿರಾಜಮಾನರಾಗಲಿದ್ದು, ಈ ವೇಳೆ ತಾಯಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಾಲಯ, ಪರಕಾಲಮಠ, ಶ್ರೀರಂಗಪಟ್ಟಣದ ಶ್ರೀ ರಂಗನಾಥೇಶ್ವರ ದೇವಾಲಯ, ಮೇಲುಕೋಟೆ ಶ್ರೀ ಚಲುವನಾರಾಯಣ ಸ್ವಾಮಿ ದೇವಾಲಯ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯ, ಉತ್ತನಹಳ್ಳಿ ಜ್ಜಾಲಾಮುಖಿ ತ್ರಿಪುರ ಸುಂದರಿ ದೇವಾಲಯ, ಅರಮನೆಯ ಆವರಣದಲ್ಲಿರುವ ಎಲ್ಲಾ ದೇವಾಲಯಗಳ ಪ್ರಸಾದವನ್ನು ಒಡೆಯರ್ ಅವರಿಗೆ ಪುರೋಹಿತರು ನೀಡಲಿದ್ದು, ತೀರ್ಥ ಪ್ರೋಕ್ಷಣೆ ಮಾಡಲಿದ್ದಾರೆ.

ಖಾಸಗಿ ದರ್ಬಾರ್ ಪ್ರಯುಕ್ತ ಸೆ.26ರಂದು ಮಧ್ಯಾಹ್ನ 2ಗಂಟೆವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಯ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ.

Articles You Might Like

Share This Article