ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗಧಿಪಡಿಸಿದ ದರವನ್ನೆ ಪಡೆಯಬೇಕು : ಡಿಸಿಎಂ ಸವದಿ
ರಾಯಚೂರು,ಮೇ.08. :- ಸಂಕಷ್ಟದ ಸಂದರ್ಭದಲ್ಲಿ ಕೋರೋನಾ ಚಿಕಿತ್ಸೆಗೆ ಸರ್ಕಾರ ನಿಗಧಿ ಪಡಿಸಿದ ದರವನ್ನೆ ಖಾಸಗಿ ಆಸ್ಪತ್ರೆಗಳು ಪಡೆಯುವ ಮೂಲಕ ಜನರು ಹಾಗೂ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ರಾಜ್ಯದ ಉಪ ಮುಖ್ಯಮಂತ್ರಿಗಳು, ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಕರೆ ನೀಡಿದರು.
ಅವರು ನಗರದ ಐಎಂಎ ಸಭಾಂಗಣದಲ್ಲಿ ಮೇ.8ರ ಶನಿವಾರ ಖಾಸಗಿ ವೈದ್ಯರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು ದೇಶ ಹಾಗೂ ರಾಜ್ಯಕ್ಕೆ ವೈದ್ಯಕೀಯ ತುರ್ತಿನ ಸಂಕಷ್ಟದ ಕಾಲ ಎದುರಾಗಿದೆ, ಇಂತಹ ಸನ್ನಿವೇಶದಲ್ಲಿ ಜನ ಸಾಮಾನ್ಯರ ಹಿತದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್-19ಗೆ ಚಿಕಿತ್ಸೆ ನೀಡಲು ದರ ನಿಗಧಿ ಪಡಿಸಿದೆ, ಕೆಲವು ಖಾಸಗಿ ಆಸ್ಪತ್ರೆಗಳು ಅದೇ ದರವನ್ನೇ ಪಡೆಯುತ್ತಿವೆ, ಉತ್ತಮ ಚಿಕಿತ್ಸೆ ನಿಡುತ್ತಿವೆ, ಆದರೆ ಕೆಲವು ಖಾಸಗಿ ಆಸ್ಪತ್ರೆಗಳು ಈ ಸಂದಿಗ್ದ ಪರಿಸ್ಥಿತಿಯ ಲಾಭ ಪಡೆಯುತ್ತಿವೆ ಎನ್ನುವುದು ಕೇಳಿಬಂದಿದ್ದು, ಕೋರೋನಾ ಸೋಂಕಿಗೆ ಚಿಕಿತ್ಸೆ ನೀಡುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಸರ್ಕಾರ ನಿಗದಿ ಪಡಿಸಿದ ಮೊತ್ತವನ್ನೇ ಪಡೆಯಬೇಕು, ಜನ ಜೀವ ಉಳಿಸುವ ವೈದ್ಯರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದಾರೆ, ಅದಕ್ಕೆ ಚ್ಯುತಿ ಬರಬಾರದು ಎಂದರು.
ಕೊರೋನಾ ನಿಯಂತ್ರಣಕ್ಕೆ ಇಂಜೆಕ್ಷನ್, ಆಕ್ಸಿಜನ್ ಸೇರಿದಂತೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲಾಗುವುದು, ರಾತ್ರಿ ಹನ್ನೆರಡಾದರೂ ಖಾಸಗಿ ಆಸ್ಪತ್ರೆಗಳ ಅಗತ್ಯತೆಗಳನ್ನು ಈಡೇರಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಸಿದ್ದವಿದೆ, ಈ ವಿಷಮ ಸನ್ನಿವೇಶದಲ್ಲಿ ಯುದ್ದೋಪಾದಿಯಲ್ಲಿ ರೋಗಿಗಳನ್ನು ಉಪಚರಿಸಿ, ರೋಗದಿಂದ ಗುಣಪಡಿಸಬೇಕು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆಗಳು ಈ ಸಂದರ್ಭದಲ್ಲಿ ಜನರ ವಿಶ್ವಾಸ ಹಾಗೂ ಪ್ರೀತಿ ಗಳಿಸಬೇಕು, ಸರ್ಕಾರ ನಿಗಧಿ ಪಡಿಸಿದ ದರದಂತೆ ರೋಗಿಗಳಿಂದ ಚಿಕಿತ್ಸೆಯ ವೆಚ್ಚ ಪಡೆಯಬೇಕು, ಮಾನವೀಯತೆಯೂ ಮುಖ್ಯ, ದಯಾಳುಗಳಾದ ವೈದ್ಯರು ಯಾರೇ ಬಡವರು ಬಂದರೂ ಅವರಿಗೆ ಚಿಕಿತ್ಸೆ ನಿಡಿದ್ದಲ್ಲೀ, ಜೀವನ ಪರ್ಯಾಂತ ಸ್ಮರಿಸುವರು, ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯ ತುಮಕೂರಿನ ತಿಪಟೂರಿನ ವೈದ್ಯರು, ರೋಗಿಗಳಿಗೆ ಉಪಚರಿಸುವ ಮೂಲಕ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಾರೆ, ಅವರು ರಾಜ್ಯದ ಜನರು ಅಭಿನಂಧನೆಗೆ ಪಾತ್ರರಾಗಿದ್ದಾರೆ, ಜಿಲ್ಲೆಯ ವೈದ್ಯರು ಕೂಡ ಅದೇ ಸಾಲಿಗೆ ಸೇರಬೇಕು ಎಂದು ತಿಳಿಸಿದರು.
ಮುಂದಿನ ಒಂದು ತಿಂಗಳು ಕಷ್ಟದಾಯಕವಾಗಲಿದ್ದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಹಕರಿಸಬೇಕು, ಅದರಲ್ಲಿ ಯಶಸ್ವಿಯಾಗೋಣ, ಶ್ರದ್ದೆಯಿಂದ ಸೇವೆ ಮಾಡುತ್ತಿದ್ದೀರಿ, ಇನ್ನೂ ಹೆಚ್ಚಿನ ಸೇವೆ ಮಾಡಿ. ಸಹಕಾರ ನೀಡಿ. ಜನರಿಗೆ ಸಕಾಲ ಚಿಕಿತ್ಸೆ ನೀಡಿ ಮಾದರಿಯಾಗುವಂತೆ ಅವರು ಮನವಿ ಮಾಡಿದರು.
ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕಾಗಿದೆ. ಬೇರೆ ಜಿಲ್ಲೆಗಳನ್ನು ಗಣನೆಗೆ ಪರಿಗಣಿಸಿದರೆ, ಇಲ್ಲಿನ ವೈದ್ಯರ ಸೇವೆ ಶ್ಲಾಘನೀಯವಾಗಿದೆ, ಬೇರೆ ಜಿಲ್ಲೆಗಳಲ್ಲಿಯೂ ಇಲ್ಲಿನ ಉತ್ತಮ ಚಿಕಿತ್ಸೆಯ ಕುರಿತು ಮಾತುಗಳು ಕೇಳಿಬಂದಿದ್ದು, ಆ ಬಗ್ಗೆ ಹೆಮ್ಮೆ ಇದೆ ಎಂದರು.
ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಾಸಿಗೆಗಳ ಕೊರತೆಯಿಲ್ಲ. ಬೇಡಿಕೆ ಹೆಚ್ಚಾದರೂ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಸಿದ್ದವಿದೆ. ರೆಮ್ಡಿಸಿವಿರ್ ಚುಚ್ಚುಮದ್ದಿನ ಕೊರತೆಯಿಲ್ಲ. ನಿತ್ಯವೂ ಪೂರೈಕೆಯಾಗುತ್ತಿದೆ. ಯಾರಿಗೆ ಅವಶ್ಯಕತೆಯಿದೆ ಎಂಬದನ್ನು ವೈದ್ಯರೇ ನಿರ್ಧರಿಸಿ ಬಳಕೆ ಮಾಡಿಕೊಳ್ಳಬೇಕು.
ಸರ್ಕಾರ ಸಿಟಿ ಸ್ಕ್ಯಾನ್ ಗೆ-1500 ರೂ.ಗಳನ್ನು, ಎಕ್ಸ್ರೇಗೆ-150 ರೂ.ಗಳನ್ನು ನಿಗದಿ ಪಡಿಸಿದೆ, ಅದೇ ದರವನ್ನೇ ಪಡೆಯಬೇಕು, ಆ ಮೂಲಕ ಜನರಿಗೆ ಸಹಕಾರ ನೀಡಿ, ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿ ಕೇವಲ ನಾಲ್ಕು ಆಸ್ಪತ್ರೆಗಳ ಸಹಕಾರ ಪಡೆಯಲಾಗಿತ್ತು, ಇದೀಗ ಯಾರು ಬೇಡಿಕೆ ಸಲ್ಲಿಸಿದರು ಅನುಮತಿ ನೀಡಲಾಗುತ್ತದೆ. ಯಾವುದೇ ಸಮಸ್ಯೆಗಳಾಗದಂತೆ ಎಚ್ಚರ ವಹಿಸಬೇಕು, ಯಾವುದೇ ಕೊರತೆಗಳಿದ್ದರೂ ಜಿಲ್ಲಾಡಳಿತದಿಂದ ಚರ್ಚಿಸಬೇಕು, ಎಲ್ಲಾ ರೀತಿಯ ನೆರವು ನೀಡಲು ಜಿಲ್ಲಾಡಳಿತ ಸಿದ್ದವಿದೆ ಎಂದರು.
ಸ್ಥಳೀಯ ಶಾಸಕರಾದ ಡಾ. ಶಿವರಾಜ ಪಾಟೀಲ್ ಮಾತನಾಡಿ, ಜಿಲ್ಲೆಗೆ 17 ಸಾವಿರ ರೆಮ್ಡಿಸಿವಿರ್ ಚುಚುಮದ್ದು ಸರಬರಾಜು ಮಾಡಲಾಗುತ್ತದೆ. ನಿನ್ನೆ 200 ರೆಮ್ಮಡಿಸಿವಿರ್ ಚುಚುಮದ್ದು ಬಂದಿದೆ, ಇಂದು 150 ಬರಲಿದೆ. ಮುಂಬರುವ ದಿನಗಳಲ್ಲಿ ಕೊರತೆ ಆಗುವುದಿಲ್ಲ. ಅತಿ ಅವಶ್ಯಕತೆ ಇದ್ದವರಿಗೆ ಮಾತ್ರ ರೆಮ್ಡಿಸಿವಿರ್ ಬಳಸಬೇಕು ಎಂದರು.
ಮುಂದಿನ ಎರಡು ದಿನಕ್ಕೆ ಆಗುವ 24 ಟನ್ ಅಕ್ಸಿಜಿನ್ ನಮ್ಮಲ್ಲಿ ಲಭ್ಯವಿದೆ. ಆಕ್ಸಿಜಿನ್, ಬೆಡ್, ರೆಮ್ಮಡಿಸಿವಿರ್ ಕೊರತೆಯಿಲ್ಲ. ಜಿಲ್ಲೆಯಲ್ಲಿ 26 ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆ ನೀಡಲು ಮುಂದೇ ಬಂದಿರುವುದು ಶ್ಲಾಘನೀಯ. ರಾಯಚೂರು ನಗರವೊಂದರಲ್ಲಿಯೇ 17 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತದೆ.
ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಇಷ್ಟು ಸಂಖ್ಯೆಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡಲು ಮುಂದೆ ಬಂದಿವೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಐಎಂಎ ಅಧ್ಯಕ್ಷ ಡಾ.ರಾಮಪ್ಪ, ಡಾ. ನಾಗರಾಜ ಬಾಲ್ಕಿ
ಹಾಗೂ ನಗರದ ಖಾಸಗಿ ಆಸ್ಪತ್ರೆಗಳ ವೈದ್ಯರು ಇದ್ದರು.