ನವದೆಹಲಿ, ಜ.31-ಮುಂದಿನ ಆರ್ಥಿಕ ವರ್ಷದ ಸಮೀಕ್ಷೆ ವರದಿಯನ್ನು ಸಂಸತ್ ನಲ್ಲಿಂದು ಮಂಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರು, ದೇಶದ ಜಿಡಿಪಿ ಶೇ.8.5ಕ್ಕೆ ವೃದ್ಧಿಯಾಗುವ ಮುನ್ಸೂಚನೆ ನೀಡಿದ್ದಾರೆ. ಕೋವಿಡ್ ಕಾರಣದಿಂದ ಆರ್ಥಿಕ ಹಿಂಜರಿತ ಅನುಭವಿಸುತ್ತಿರುವ ದೇಶಕ್ಕೆ ಹೊಸ ಸಮೀಕ್ಷೆ ಆಶಾದಾಯಕವಾಗಿದೆ. ದೇಶಿಯ ಉತ್ಪಾದನಾ ವಲಯದ ಜಿಡಿಪಿ ಶೇ.8 ರಿಂದ 8.5ಕ್ಕೆ ಹೆಚ್ಚಳವಾಗುವ ಅಂದಾಜಿದೆ. ಪ್ರಸಕ್ತ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ಶೇ.9.2ರಷ್ಟಾಗಬಹುದು ಎಂದು ವಿಶ್ಲೇಷಿಸಿದ್ದಾರೆ.
2022ರ ಏಪ್ರಿಲ್ ಒಂದರಿಂದ ಆರಂಭವಾಗುವ ಆರ್ಥಿಕ ವರ್ಷದ ಸಮೀಕ್ಷೆಯ ವರದಿಯ ಅಂಕಿ ಅಂಶಗಳ ವರದಿಯನ್ನು ಕೇಂದ್ರ ಸಚಿವರು ಬಜೆಟ್ ಮುನ್ನಾ ದಿನವಾದ ಇಂದು ಸಂಸತ್ ನಲ್ಲಿ ಮಂಡಿಸಿದರು.
2022ರ ಏಪ್ರಿಲ್ ನಿಂದ 2023ರ ಮಾರ್ಚ್ ನಡುವೆ ಜಿಡಿಪಿ ಶೇ. 8ರಿಂದ 8.5ರಷ್ಟಾಗಲಿದೆ. ಚಾಲ್ತಿಯಲ್ಲಿರುವ ಆರ್ಥಿಕ ವರ್ಷ2021-22ನೇ ಸಾಲಿನ ಜಿಡಿಪಿ ಶೇ.9.2ರಷ್ಟಾಗಬಹುದು. ವಿವಿಧ ಕ್ಷೇತ್ರಗಳ ಆರ್ಥಿಕತೆ ಸುಧಾರಣೆಯಾಗುತ್ತಿದೆ ಎಂದಿದ್ದಾರೆ. 2020-21ರಲ್ಲಿ ಜಿಡಿಪಿ ಶೇ.7.3ರಷ್ಟಿತ್ತು. ಅದು ಈಗ ಮಹತ್ವದ ಬೆಳವಣಿಗೆ ಸಾಧಿಸಲಿದೆ ಎಂದು ಅಭಿಪ್ರಾಯ ಮಂಡಿಸಿದ್ದಾರೆ.
ಸಾಮಾನ್ಯವಾಗಿ ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರರು (ಸಿಇಎ) ತಯಾರು ಮಾಡುತ್ತಾರೆ. ಆದರೆ ಈ ಬಾರಿ ಪ್ರಧಾನ ಆರ್ಥಿಕ ಸಲಹೆಗಾರರು ವರದಿ ಸಿದ್ಧಪಡಿಸಿದ್ದಾರೆ. ಮುಖ್ಯ ಆರ್ಥಿಕ ಸಲಹೆಗಾರರ ಹುದ್ದೆಗೆ ಕಳೆದ ವಾರವಷ್ಟೆ ಆ ಹುದ್ದೆಗೆ ವಿ.ಅನಂತ ನಾಗೇಶ್ವರನ್ರನ್ನು ನೇಮಿಸಲಾಗಿದೆ. ಈ ಮೊದಲು ಈ ಹುದ್ದೆಯಲ್ಲಿದ್ದ ಕೆ.ವಿ.ಸುಬ್ರಮಣ್ಯಂ ಅವರು 2021ರ ಡಿಸೆಂಬರ್್ ನಲ್ಲಿ ಮೂರು ವರ್ಷಗಳ ಅವಧಿ ಪೂರ್ಣಗೊಳಿಸಿ ನಿವೃತ್ತರಾಗಿದ್ದರು.
