ಕೋಲ್ಕತ್ತಾ,ಜು.29- ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ದಿನೇ ದಿನೇ ಕುತೂಹಲ ಕೆರಳಿಸುತ್ತಿದ್ದು, ಬಂಧಿತ ಮಾಜಿ ಸಚಿವ ಪಾರ್ಥ ಚಟರ್ಜಿ ಅವರು ತಮ್ಮನ್ನು ಷಡ್ಯಂತ್ರದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಈ ನಡುವೆ ಪಾರ್ಥ ಅವರ ಆಪ್ತೆ ಅರ್ಪಿತ ಮುಖರ್ಜಿ ಅವರ ಮನೆಯಲ್ಲಿದ್ದ ಐಷರಾಮಿ ಕಾರುಗಳು ನಾಪತ್ತೆಯಾಗಿವೆ. ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಕೋಲ್ಕತ್ತಾದ ಡೈಮಂಡ್ ಸಿಟಿ ಕಾಂಪ್ಲೆಕ್ಸ್ನಲ್ಲಿರು ಅರ್ಪಿತ ಅವರ ಅಪಾರ್ಟ್ಮೆಂಟ್ನಲ್ಲಿ ಸುಮಾರು 28 ಕೋಟಿ ನಗದು, 5 ಕೆಜಿ ಚಿನ್ನ ವಶಪಡಿಸಿಕೊಂಡಿದ್ದು, 56 ಲಕ್ಷ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ.
ಇದರ ಬೆನ್ನಲ್ಲೇ ಅರ್ಪಿತ ಅವರಿಗೆ ಸೇರಿದ ಮತ್ತೊಂದು ಅಪಾರ್ಟ್ಮೆಂಟ್ ಮೇಲೂ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ತೃಣಮೂಲ ಕಾಂಗ್ರೆಸ್ ಪಾರ್ಥ ಚಟರ್ಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದೆ.
ಇಂದು ಪಾರ್ಥ ಹೇಳಿಕೆ ನೀಡಿದ್ದು, ತಮ್ಮನ್ನು ಷಡ್ಯಂತರದಲ್ಲಿ ಸಿಲುಕಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪಕ್ಷದಲ್ಲಿ ಪ್ರಭಾವಿ
ನಾಯಕರು, ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಪಾರ್ಥರವರ ಈ ಹೇಳಿಕೆ ಹೊಸ ಬೆಳವಣಿಗೆಗೆ ಕಾರಣವಾಗುವ ಸಾಧ್ಯತೆ ಇದೆ. ಹಗರಣದಲ್ಲಿ ಇತರರ ಹೆಸರುಗಳು ಹೊರಬರುವ ನಿರೀಕ್ಷೆ ಹುಟ್ಟು ಹಾಕಿದೆ.