ಹುಬ್ಬಳ್ಳಿ,ಅ.2- ನಕಲಿ ಗಾಂಧಿ ಪರಿವಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ದುರಂತ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದರು. ಗಾಂೀಧಿಜಿ ಜಯಂತಿ ಅಂಗವಾಗಿ ಕಿಮ್ಸ್ ಆವರಣ ಮುಂಭಾಗದಲ್ಲಿ ಗಾಂೀಧಿಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವ ಪ್ರಶ್ನೆ ಇಲ್ಲ. ಅವರು ಭಾರತ ಜೋಡೋ ಯಾತ್ರೆ ಮುಗಿದ ತಕ್ಷಣ ವಿಶ್ರಾಂತಿಗೆ ವಿದೇಶಕ್ಕೆ ಹೋಗುತ್ತಾರೆ.
ಈಗಾಗಲೇ ಈ ಹಿಂದಿನ ಚುನಾವಣೆಯಲ್ಲಿ ಜನರು ಯಾರು ಯಾರ ಪರ ಇದ್ದಾರೆ ಎಂಬ ತೀರ್ಮಾನ ಕೊಟ್ಟಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೇಂದ್ರದಲ್ಲಿ 10 ವರ್ಷ ನಿರಂತರವಾಗಿ ಭ್ರಷ್ಟಾಚಾರ ಹಗರಣದ್ದೆ ಸುದ್ದಿ ಇತ್ತು ಎಂದರು.
ಇನ್ನು ಮೋದಿ ಆಡಳಿತದಲ್ಲಿ ದೇಶದ ಸಾಲ ಮೂರು ಪಟ್ಟು ಹೆಚ್ಚಾಗಿದೆ ಎಂಬ ರಾಹುಲ್ ಮಾತಿಗೆ ಪ್ರತಿಕ್ರಿಯಿಸಿದ ಅವರು, ಯಾರ ಕಾಲದಲ್ಲಿ ಹೆಚ್ಚು ಸಾಲ ಆಗಿದೆ ಎಂಬ ಅಂಕಿ ಅಂಶಗಳಿವೆ. ಕೋವಿಡ್ ಸಮಯದಂತಹ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಭಾರತ ಅಭಿವೃದ್ಧಿ ಹೊಂದುತ್ತಿದೆ. ಪ್ರಪಂಚವೇ ಭಾರತವನ್ನು ಗುರುತಿಸುವಂತಾಗಿದೆ. ಹೀಗಾಗಿ ಭಾರತದ ಹಿರಿಮೆ ಗರಿಮೆ ಬಗ್ಗೆ ಸುಳ್ಳು ಅಪಪ್ರಚಾರ ಮಾಡಬಾರದು ಎಂದು ತಿರುಗೇಟು ಕೊಟ್ಟರು.
ಗಾಂಧಿ ಕುಟುಂಬವನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್ ಗಾಂಧಿಯೇ ಸ್ಪಷ್ಟಪಡಿಸಲಿ ಎಂದ ಅವರು, ಈಗಾಗಲೇ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ 398 ಜನರ ಪೈಕಿ ಅತಿ ಹೆಚ್ಚು ಡಿಪಾಸಿಟ್ ಕಳೆದು ಕೊಂಡಿದೆ. ಇದೀಗ ರಾಹುಲ್ ಗಾಂಧಿ ಇನ್ನೊಬ್ಬರು ಬರೆದು ಕೊಟ್ಟಿದ್ದನ್ನು ಓದುತ್ತಾರೆ. ಚೀಟಿ ವಾಪಾಸ್ ಪಡೆದ ನಂತರ ಅದರಲ್ಲಿನ ವಿಷಯ ಗೊತ್ತಿರುವುದಿಲ್ಲ ಎಂದು ವ್ಯಂಗ್ಯವಾಡಿದರು.