ಉತ್ತರಪ್ರದೇಶ, ಸೆ. 20- ಇತ್ತೀಚೆಗೆ ಕಬಡ್ಡಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಂದಿದ್ದ ಕ್ರೀಡಾಪಟುಗಳಿಗೆ ಶೌಚಾಲಯದಲ್ಲೇ ಊಟದ ವ್ಯವಸ್ಥೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕ್ರೀಡಾ ಅಧಿಕಾರಿಯೊಬ್ಬರನ್ನು ಯೋಗಿ ಸರ್ಕಾರ ಅಮಾನತುಗೊಳಿಸಿದೆ.
ಉತ್ತರಪ್ರದೇಶದ ಶಹರಾನ್ಪುರ್ನಲ್ಲಿ ಹಮ್ಮಿಕೊಂಡಿದ್ದ ಅಂಡರ್ 17 ಬಾಲಕಿಯ ಕ್ರೀಡಾಕೂಟದ ವೇಳೆ ಶೌಚಾಲಯದಲ್ಲೇ ಅಡುಗೆ ಮಾಡಿ ಬಡಿಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ವಿಡಿಯೋವನ್ನು ವೀಕ್ಷಿಸಿದ ಕ್ರೀಡಾ ಸಚಿವರು ಹಾಗೂ ಅಧಿಕಾರಿಗಳು ಶೌಚಾಲಯದಲ್ಲೇ ಕಬಡ್ಡಿ ಆಟಗಾರ್ತಿ ಯರಿಗೆ ಊಟದ ವ್ಯವಸ್ಥೆ ಮಾಡಿರುವುದು ದುರದೃಷ್ಟದ ಸಂಗತಿಯಾಗಿರುವುದರಿಂದ ಸ್ಥಳೀಯ ಕ್ರೀಡಾ ಅಧಿಕಾರಿಯ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ
ಶಹರಾನ್ಪುರದ ಜಿಲ್ಲಾಧಿಕಾರಿ ಅಖಿಲೇಶ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಬಡ್ಡಿ ಆಟಗಾರರಿಗೆ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಿರುವ ಸುದ್ದಿಯು ನಮಗೆ ತಡವಾಗಿ ತಿಳಿದಿದ್ದು, ಜಿಲ್ಲಾ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾರ ಅವರನ್ನು ಕರ್ತವ್ಯ ಲೋಪದ ಆಧಾರದ ಮೇಲೆ ಸಸ್ಪೆಂಡ್ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 2-3 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದ್ದೇವೆ ಎಂದು ತಿಳಿಸಿದರು.
ಅನಿಮೇಶ್ ಸಕ್ಸೇನಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಭಾರೀ ಮಳೆ ಬೀಳುತ್ತಿದ್ದರಿಂದ ಹಾಗೂ ಕ್ರೀಡಾಂಗಣದ ನಿರ್ಮಾಣ ಕಾರ್ಯ ನಡೆಯುತ್ತಿದ್ದರಿಂದ ಈಜುಕೊಳಕ್ಕೆ ಹೊಂದಿಕೊಂಡಂತಿರುವ ಬಟ್ಟೆ ಬದಲಾಯಿಸುವ ಕೊಠಡಿ ಆಹಾರ ಪದಾರ್ಥಗಳನ್ನು ಇರಿಸಲಾಗಿದ್ದರಿಂದ ಶೌಚಾಲಯದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಏನೇ ಆಗಲಿ ದೇಶದ ಘನತೆಯನ್ನು ಎತ್ತಿ ಹಿಡಿಯುವ ಕ್ರೀಡಾಪಟುಗಳ ಬಗ್ಗೆ ನಿರ್ಲಕ್ಷ್ಯತೆ ವಹಿಸಬಾರದಿತ್ತಲ್ಲವೆ..?