ಮಂಡ್ಯ, ಫೆ.16- ಜನತಾ ಶಿಕ್ಷಣ ಸಂಸ್ಥೆಯ (ಪಿಇಟಿ) ಮಾಜಿ ಅಧ್ಯಕ್ಷ, ಮಾಜಿ ಶಾಸಕ, ಹಿರಿಯ ಮುತ್ಸದ್ದಿ, ಎಚ್.ಡಿ. ಚೌಡಯ್ಯನವರು (94) ಮಂಗಳವಾರ ಮಧ್ಯರಾತ್ರಿ ನಿಧನರಾಗಿದ್ದಾರೆ. ಪತ್ನಿ ದೊಡ್ಡ ಲಿಂಗಮ್ಮನವರ ಅಗಲಿಕೆಯ ನಂತರ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು. ನಿನ್ನೆ ರಾತ್ರಿ 2.30 ರ ಸುಮಾರಿಗೆ ಸ್ವಗ್ರಾಮ ಹೊಳಲು ಗ್ರಾಮದಲ್ಲಿ ಕೊನೆಯುಸಿರೆಳೆದರು.
ಚೌಡಯ್ಯನವರಿಗೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು. ಅಪಾರ ಬಂಧು ಬಳU ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಇಂದು ಸಂಜೆ ಸ್ವಗ್ರಾಮವಾದ ಹೊಳಲು ಗ್ರಾಮದ ಅವರ ಅಲೆಮನೆ ಬಳಿ ಒಕ್ಕಲಿಗ ಸಂಪ್ರದಾಯದಂತೆ ಹಿರಿಯ ಮಗ ಮೋಹನ್ ವಿವಿದಾನಗಳನ್ನು ನಡೆಸಲಿದ್ದಾರೆ,
1928ರಲ್ಲಿ ಜನಿಸಿದ್ದಚೌಡಯ್ಯ ಬಿಎಸ್ಸಿ (ಅಗ್ರಿ) ಪದವೀಧರರಾಗಿದ್ದರು. ತಾಲೂಕು ಬೋರ್ಡ್ ಮೆಂಬರ್ ಹಾಗೂ ಅಧ್ಯಕ್ಷರಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿ, 4 ಬಾರಿ ಕೆರಗೋಡು ಕ್ಷೇತ್ರದ ಶಾಸಕರಾಗಿ, 2 ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
1989 ರಲ್ಲಿ ಮಂಡ್ಯದ ಪಿಎಸ್ಇ ಟ್ರ¸್ಟï ಅಧ್ಯಕ್ಷರಾಗಿ 31 ವರ್ಷಗಳ ಕಾಲ ಸುದೀರ್ಘ ಆಡಳಿತ ನಡೆಸಿ ಪಿಇಎಸ್ ಟ್ರಸ್ಟï ನ ಸಮಗ್ರ ಅಭಿವೃದ್ಧಿಗೆ ಕಾರಣರಾದರು.
ಆಡಳಿತದಲ್ಲಿ ದಕ್ಷತೆ, ಶಿಸ್ತು, ಬದ್ಧತೆ ರೂಢಿಸಿಕೊಂಡೇ ರಾಜಕಾರಣ ಮತ್ತು ಸಾಮಾಜಿಕ ಸೇವೆ ಮಾಡಿದ ಚೌಡಯ್ಯನವರಿಗೆ ಅಪಾರ ಅಭಿಮಾನಿ ಬಳಗವಿದೆ. ಸಚಿವ ದಿ.ಶಂಕರಗೌಡರು, ಜಿ.ಮಾದೇಗೌಡರು, ಕರಡಹಳ್ಳಿ ಶಿಂಗಾರಿ ಗೌಡರು, ಎಸ್.ಎಂ.ಕೃಷ್ಣ ಸೇರಿದಂತೆ ಮಂಡ್ಯದ ಅನೇಕ ರಾಜಕಾರಣಿಗಳ ಗರಡಿಯಲ್ಲಿ ಬೆಳೆದ ಚೌಡಯ್ಯನವರು ಮಂಡ್ಯದ ಪ್ರಗತಿಗೆ ಅಪಾರ ಕೊಡುಗೆ ನೀಡಿದ್ದಾರೆ.
ಮಂಡ್ಯದ ತೂಬಿನಕೆರೆಯಲ್ಲಿ ಮೈಸೂರು ವಿಶ್ವ ವಿದ್ಯಾಲಯದ ಘಟಕ ಸ್ಥಾಪಿಸಲು, ಮಂಡ್ಯದ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶಿಕ್ಷಣ, ಕ್ರೀಡೆ, ರಂಗಭೂಮಿ ಕ್ಷೇತ್ರ ಸೇರಿ ಗ್ರಾಮೀಣ ಪ್ರದೇಶದ ನಾಟಕಗಳಿಗೆ ಪ್ರೋತ್ಸಾಹ ನೀಡಿ ಸೈ ಎನಿಸಿಕೊಂಡ ಚೌಡಯ್ಯ, ಕಾವೇರಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.
ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಅನ್ನದಾನಿ , ಕೆಪಿಸಿಸಿ ಅಧ್ಯಕ್ಷ ಡಿ.ಕೆ,ಶಿವಕುಮಾರ್ , ಸಚಿವರು, ಶಸಕರು ರಾಜಕೀಯ ಧುರೀಣರು ಸಂತಾಪ ಸೂಚಿಸಿದ್ದಾರೆ.
ಚೌಡಯ್ಯ ನಿಧನಕ್ಕೆ ಗಣ್ಯರ ಸಂತಾಪ
ಬೆಂಗಳೂರು, ಫೆ.16- ಮಾಜಿ ಶಾಸಕ, ಶಿಕ್ಷಣ ತಜ್ಞ ಎಚ್.ಡಿ.ಚೌಡಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಾಜಿ ಶಾಸಕರು, ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾಗಿದ್ದ ಮಂಡ್ಯದ ಹಿರಿಯ ಮುತ್ಸದ್ಧಿ ರಾಜಕಾರಣಿ ಎಚ್.ಡಿ.ಚೌಡಯ್ಯ ಅವರ ನಿಧನದ ವಿಷಯ ತಿಳಿದು ಮನಸ್ಸಿಗೆ ಅತೀವ ದುಃಖ ಉಂಟಾಗಿದೆ. ಅವರ ಅಗಲಿಕೆ ಸಹಿಸಿಕೊಳ್ಳುವ ಶಕ್ತಿಯನ್ನು ಕುಟುಂಬದವರಿಗೆ ಮತ್ತು ಬಂಧುಗಳಿಗೆ ನೀಡಲಿ ಎಂದು ಗೌಡರು ದೇವರಲ್ಲಿ ಪ್ರಾರ್ಥಿಸಿದ್ದಾರೆ.
ಚೌಡಯ್ಯ ಅವರ ನಿಧನ ಬಹಳ ನೋವನ್ನುಂಟುಮಾಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಎಣೆ ಇಲ್ಲದಷ್ಟು ಸೇವೆ ಸಲ್ಲಿಸಿದ್ದರು. ಸೇವಾ ತತ್ಪರತೆಯ ನಿಸ್ವಾರ್ಥ ರಾಜಕಾರಣದ ಕೊಂಡಿ ಕಳಚಿದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸಮಾಜಮುಖಿ, ಮುತ್ಸದ್ಧಿ ರಾಜಕಾರಣಿ ಚೌಡಯ್ಯ ಅವರ ನಿಧನ ತಮಗೆ ಅತೀವ ದುಃಖ ಉಂಟುಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನಪರ ಚಿಂತನೆ, ಕಾಳಜಿ ಹೊಂದಿದ್ದ ಹಿರಿಯ ನಾಯಕ ಚೌಡಯ್ಯ ಅವರ ನಿಧನ ದುಃಖವನ್ನುಂಟುಮಾಡಿದೆ. ಮಂಡ್ಯದ ಪ್ರತಿಷ್ಠಿತ ಪಿಇಎಸ್ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸಮಾಜ ಸೇವೆ ಮತ್ತು ರೈತರ ಹಕ್ಕುಗಳ ಪರವಾಗಿ ಸದಾ ದನಿ ಎತ್ತಿ ಹೋರಾಟ ಮಾಡುತ್ತಿದ್ದ ಜನಪರ ಕಾಳಜಿಯ ರಾಜಕೀಯ ಮುಖಂಡ ಎಚ್.ಡಿ.ಚೌಡಯ್ಯ ಅವರ ನಿಧನದಿಂದ ಸಮಾಜವು ಮುತ್ಸದ್ಧಿ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯರು ಚೌಡಯ್ಯ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
