ಬೆಂಗಳೂರು,ಮಾ.30-ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ವಿಚಾರಣಾಧೀನ ಖೈದಿಯನ್ನು ಭೇಟಿ ಮಾಡಲು ತನ್ನ ಖಾಸಗಿ ಅಂಗದಲ್ಲಿ ತಂಬಾಕು ಹಾಗೂ ಸಿಮ್ಕಾರ್ಡ್ಗಳನ್ನು ಅಡಗಿಸಿಟ್ಟುಕೊಂಡು ಬಂದಿದ್ದ ಯುವತಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾ.26 ರಂದು ಸಂಜೆ 4 ಗಂಟೆ ಸುಮಾರಿನಲ್ಲಿ ಅಸ್ಸಾಂ ಮೂಲದ ರಿತಿಕಾ ರೈ ಎಂಬ ಯುವತಿ ವಿಚಾರಣಾಧೀನ ಖೈದಿ ಫರ್ಹಾನ್ ಖಾನ್ ಎಂಬಾತನನ್ನು ಭೇಟಿ ಮಾಡಲು ಜೈಲು ಬಳಿ ಬಂದಿದ್ದಾರೆ.
ಕಾರಾಗೃಹದೊಳಗೆ ಹೋಗಲು ಪಾಸ್ ಪಡೆದು ಸಾಮಾನ್ಯ ತಪಾಸಣೆ ವೇಳೆ ಮಹಿಳಾ ಸಿಬ್ಬಂದಿಗೆ ಈ ಯುವತಿ ಮೇಲೆ ಅನುಮಾನ ಬಂದಿದೆ. ತಕ್ಷಣ ಪರಿಶೀಲನೆ ನಡೆಸಿದಾಗ ಆ ಯುವತಿ ಖಾಸಗಿ ಅಂಗದಲ್ಲಿ ತಂಬಾಕು ಪದಾರ್ಥಗಳ ಮೂರು ಪ್ಯಾಕೆಟ್ಗಳು ಹಾಗೂ 5ಜಿ ಮೊಬೈಲ್ ಸಿಮ್ಕಾರ್ಡ್ಗಳು ಇಟ್ಟುಕೊಂಡಿರುವುದು ಗೊತ್ತಾಗಿದೆ.
ಮಹಿಳಾ ಸಿಬ್ಬಂದಿ ಆ ವಸ್ತುಗಳನ್ನು ವಶಕ್ಕೆ ಪಡೆದು ಆಕೆಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಜೈಲು ಅಧೀಕ್ಷರು ಈ ಬಗ್ಗೆ ಠಾಣೆಗೆ ದೂರು ನೀಡಿದ್ದು, ಯುವತಿ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹ ಅವ್ಯವಸ್ಥೆಯಿಂದ ಕೂಡಿದೆ ಎಂಬ ಆರೋಪಗಳ ನಡುವೆಯೇ ಈಗ ಮತ್ತೊಂದು ಅವ್ಯವಹಾರ ಬೆಳಕಿಗೆ ಬಂದಿದೆ.
ಡಿಜಿಪಿ ಅಲೋಕ್ಕುಮಾರ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಸಹ ಕಾರಾಗೃಹದಲ್ಲಿ ಒಂದಲ್ಲಾ ಒಂದು ಅಕ್ರಮ ಗಳು ಬಯಲಾಗುತ್ತಿವೆ. ಈ ಕೇಂದ್ರ ಕಾರಾಗೃಹದೊಳಗೆ ಹೊರಗಿನಿಂದ ಯಾವುದೇ ಸಣ್ಣ ವಸ್ತು ಸಹ ಬಾರದಂತೆ ಹದ್ದಿನ ಕಣ್ಣಿಟ್ಟಿದ್ದರೂ ಸಹ ನಿಷೇಧಿತ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗುತ್ತಿರುವುದು ದುರ್ದೈವ.
