ಬೆಂಗಳೂರು, ಮಾ.29- ಕೃಷಿಹೊಂಡದಲ್ಲಿ ಮುಳುಗಿ ನಾಲ್ವರು ಮಕ್ಕಳು ಮೃತಪಟ್ಟಿರುವ ಮನಕಲಕುವ ಘಟನೆ ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ನಗನೂರು ಗ್ರಾಮದ ಶರತ್ (6) ಮತ್ತು ಹನುಮೇಶ್ (7) ಸಹೋದರರು ಹಾಗೂ ಕಿರಣ್(6), ಬಸಮ (10) ಮೃತಪಟ್ಟ ಮಕ್ಕಳು. ಶಾಲೆಗೆ ರಜೆ ಇದ್ದ ಕಾರಣ ಒಂದೇ ಗ್ರಾಮದ ಈ ನಾಲ್ವರು ಮಕ್ಕಳು ಬೆಳಗ್ಗೆ 10.30ರ ಸುಮಾರಿನಲ್ಲಿ ಆಟವಾಡಿಕೊಂಡು ನಂತರ ಈಜಲು ಕೃಷಿಹೊಂಡದ ಬಳಿ ಹೋಗಿದ್ದಾರೆ.
ಈ ನಾಲ್ವರು ಮಕ್ಕಳು ಕೃಷಿಹೊಂಡಕ್ಕೆ ಇಳಿದಿದ್ದು, ಆಯತಪ್ಪಿ ಹೊಂಡದಲ್ಲಿ ಮುಳುಗುತ್ತಿದ್ದುದ್ದನ್ನು ದಾರಿಯಲ್ಲಿ ಹೋಗುತ್ತಿದ್ದ ಗ್ರಾಮದ ವ್ಯಕ್ತಿಯೊಬ್ಬರು ಗಮನಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಸುತ್ತಮತ್ತಲಿನಲ್ಲಿದ್ದ ಗ್ರಾಮಸ್ಥರು ಓಡಿ ಬಂದು ಮಕ್ಕಳನ್ನು ರಕ್ಷಿಸಲು ಮುಂದಾದರಾದರೂ ಸಾಧ್ಯವಾಗಲಿಲ್ಲ, ಅಷ್ಟರಲ್ಲಿ ನಾಲ್ವರ ಪ್ರಾಣಪಕ್ಷಿ ಹಾರಿಹೋಗಿದೆ.
ಸುದ್ದಿ ತಿಳಿದು ಕೆಂಭಾವಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೃಷಿಹೊಂಡದಿಂದ ನಾಲ್ವರು ಮಕ್ಕಳ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಮಕ್ಕಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಗನೂರು ಗ್ರಾಮದಲ್ಲಿ ನೀರವಮೌನ ಆವರಿಸಿದೆ.
ಈ ಬಗ್ಗೆ ಕೆಂಭಾವಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಮಕ್ಕಳ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
