ವಿಜಯಪುರ,ಸೆ.4- ಗಣೇಶೋತ್ಸವದ ಮಂಟಪ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿಂಧಗಿ ನಗರದಲ್ಲಿ ನಡೆದಿದೆ.ನಗರದ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಗಜಾನನ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಗಣೇಶೋತ್ಸವದಲ್ಲಿ ಗೋಲ್ಡಂನ್ ಟೆಂಪಲ್ ಮಾದರಿಯಲ್ಲಿ ವಿಶೇಷ ಮಂಟಪ ಮಾಡಲಾಗಿತ್ತು.
ಪೈಪರ್ಗಳನ್ನು ಬಳಸಿ ದೇವಾಲಯದ ಸೆಟನ್ನು ಅದ್ಧೂರಿಯಾಗಿ ನಿರ್ಮಿಸಿ ಎಲ್ಲರ ಗಮನ ಸೆಳೆಯುತ್ತಿತ್ತು. ಜನರ ನೂಕು ನುಗ್ಗಲು ಉಂಟಾಗಿ ಕಳೆದ ರಾತ್ರಿ ಒಂದು ಕಡೆಯ ಮಂಟಪ ಕುಸಿದು ಬಿದ್ದಿದ್ದು, ದರ್ಶನಕ್ಕೆ ತೆರಳುತ್ತಿದ್ದವರ ಮೇಲೆ ಅಲಂಕಾರಿಕ ವಸ್ತುಗಳು ಬಿದ್ದು ಗಾಯಗೊಂಡಿದ್ದಾರೆ.
ಇದನ್ನು ಲೆಕ್ಕೆಸದೆ ಜನರ ದಂಡು ಏಕಾಏಕಿ ನುಗ್ಗಿದಾಗ ಗಣೇಶ ವಿಗ್ರಹವಿದ್ದ ಮಂಟಪ ಬಿಟ್ಟು ಇನ್ನೆಲ್ಲಾವು ನೆಲಕ್ಕುರುಳಿ ಬಿದ್ದಿವೆ. ಸುದ್ದಿ ತಿಳಿದು ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಶಾಸಕ ರಮೇಶ್ ಬೂಸನೂರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಸಾಲಾಗಿ ಹೋಗುವ ಬದಲು ತಳ್ಳಾಟ ನೂಕಾಟದಿಂದ ನೂರಾರು ಮಂದಿ ಒಮ್ಮೆಲೆ ನುಗ್ಗಿದಾಗ ಮಂಟಪ ಕುಸಿದಿದೆ ಎಂದು ಹೇಳಲಾಗಿದೆ. ವಿಘ್ನ ನಿವಾರಕನ ಕೃಪೆಯಿಂದ ಯಾವುದೇ ದೊಡ್ಡ ಅವಘಡ ಸಂಭವಿಸಿಲ್ಲ. ಎಲ್ಲರೂ ಶಾಂತಿಯಿಂದ ನಡೆದುಕೊಳ್ಳಬೇಕೆಂದು ಮಂಡಳಿಯವರು ಮನವಿ ಮಾಡಿದ್ದಾರೆ.