ಜಮ್ಮು,ಸೆ.4- ಕಾಂಗ್ರೆಸ್ ತೊರೆದು ಹೊಸ ಪಕ್ಷ ಸ್ಥಾಪಿಸಲು ಮುಂದಾಗಿರುವ ಮಾಜಿ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಇಂದು ತವರು ನೆಲ ಜಮ್ಮುಕಾಶ್ಮೀರದಲ್ಲಿ ಪ್ರಥಮ ರ್ಯಾಲಿ ನಡೆಸುತ್ತಿದ್ದಾರೆ. ಇದೇ ದಿನ ತವರು ನೆಲದಲ್ಲಿ ಹೊಸ ಪಕ್ಷವನ್ನು ಘೋಷಿಸುವ ಸಾಧ್ಯತೆ ಇದೆ. ಜಮ್ಮುಕಾಶ್ಮೀರದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಇಂದು ಬೆಳಗ್ಗೆ ದೆಹಲಿಯಿಂದ ಪ್ರಯಾಣ ಆರಂಭಿಸಿದರು.
ಹಲವು ಕಾರ್ಯಕ್ರಮಗಳು, ಸಾರ್ವಜನಿಕ ಸಭೆಗಳು ನಿಗದಿಯಾಗಿದ್ದು, ಅದರಲ್ಲಿ ಗುಲಾಂನಬಿ ಅಜಾದ್ ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಜೊತೆಗಿನ 5 ದಶಕಗಳ ಸಂಬಂಧವನ್ನು ಕಡಿದುಕೊಂಡಿರುವ ಅವರು ಆ.26ರಂದು ಪಕ್ಷದ ಎಲ್ಲ ಸ್ಥಾನಗಳಿಗೂ ರಾಜೀನಾಮೆ ನೀಡಿದರು.
ರಾಹುಲ್ ಗಾಂಧಿ ಅಪ್ರಬುದ್ಧರು ಮತ್ತು ರಾಜಕಾರಣಕ್ಕೆ ಯೋಗ್ಯರಲ್ಲ ಎಂಬ ಆಕ್ಷೇಪಣೆಗಳೊಂದಿಗೆ ಬಹಿರಂಗ ವಾಗ್ದಾಳಿಯನ್ನು ನಡೆಸಿದರು. ಇದೇ ವರ್ಷ ಜಮ್ಮುಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಹೊಸ ಪಕ್ಷ ಸ್ಥಾಪನೆಯೊಂದಿಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಹೊಸ ಪಕ್ಷವನ್ನು ರಾಷ್ಟ್ರೀಯ ಮಟ್ಟದಲ್ಲಿ ಘೋಷಣೆ ಮಾಡುವುದಾಗಿ ಹೇಳಿರುವ ಆಜಾದ್ ಇಂದು ಅದರ ಹೆಸರನ್ನು ಬಹಿರಂಗಪಡಿಸುವ ಸಾಧ್ಯತೆ ಇದೆ. ಅಜಾದ್ ಅವರನ್ನು ಅನುಸರಿಸಿ ಸುಮಾರು 150ಕ್ಕೂ ಹೆಚ್ಚು ಕಾಂಗ್ರೆಸ್ ಅಲ್ಪಸಂಖ್ಯಾತ ಮುಖಂಡರು ಜಮ್ಮುಕಾಶ್ಮೀರದಲ್ಲಿ ಪಕ್ಷ ತೊರೆದಿದ್ದಾರೆ. ಇಂದು ಸುಮಾರು 20 ಸಾವಿರ ಜನರ ಸಮಾವೇಶ ನಡೆಯಲಿದೆ.
ಜಿ-23 ಬಂಡಾಯ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಅಜಾದ್ರಂತೆ ಕಾಂಗ್ರೆಸ್ನ ಕಪೀಲ್ ಸಿಬಾಲ್ ಸೇರಿ ಹಲವಾರು ಮಂದಿ ಪಕ್ಷ ತೊರೆದಿದ್ದಾರೆ. ಪಕ್ಷದಲ್ಲಿ ಇರುವವರೆಗೂ ಅಜಾದ್ ಯಾವುದೇ ಟೀಕೆಟಿಪ್ಪಣಿಗಳನ್ನು ಮಾಡಿರಲಿಲ್ಲ. ಆದರೆ ಪಕ್ಷದಿಂದ ಹೊರ ಹೋಗುತ್ತಿದ್ದಂತೆ ಕಾಂಗ್ರೆಸ್ನ್ನು ಹೀನಮಾನವಾಗಿ ಟೀಕಿಸುತ್ತಿದ್ದಾರೆ.