ಬೆಂಗಳೂರು, ಫೆ.25- ಆಭರಣ ಮಾಡಿಕೊಡುವುದಾಗಿ ನಂಬಿಸಿ ಚಿನ್ನದ ಗಟ್ಟಿ ಪಡೆದು ವಂಚಿಸಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿ 50 ಲಕ್ಷ ರೂ. ಮೌಲ್ಯದ 1 ಕೆಜಿ ಚಿನ್ನದ ಆಭರಣಗಳನ್ನುವಶಪಡಿಸಿಕೊಂಡಿದ್ದಾರೆ. ಕೊಲ್ಕತ್ತಾ ಮೂಲದ ಅಮರ್ ಮೊಹಂತ್(33) ಬಂಧಿತ ಆರೋಪಿ. ಈತ ಚಿನ್ನದ ಗಟ್ಟಿಯನ್ನು ಮಾರಿ ಮನೆ ಖರೀದಿಸಿ ಮಗಳ ಮದುವೆ ಮಾಡಿ ಮೋಜಿನ ಜೀವನ ನಡೆಸುತ್ತಿದ್ದನು.
ಜಯನಗರ 3ನೆ ಬ್ಲಾಕ್, 8ನೆ ಮುಖ್ಯರಸ್ತೆಯಲ್ಲಿನ ತಿರುಮಲ ಜ್ಯುವೆಲ್ಸ್ನಲ್ಲಿ ಆಭರಣ ತಯಾರಕ ನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಅಮರ್ ಮೊಹಂತ್ ಚಿನ್ನಾಭರಣ ಮಾಲೀಕರೊಬ್ಬರಿಂದ 1,304 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ತೆಗೆದುಕೊಂಡು ಹೋಗಿ ಆಭರಣ ಮಾಡಿಕೊಡದೆ ಮೋಸ ಮಾಡಿದ್ದನು.
ಈ ಬಗ್ಗೆ ಮನೀಶ್ಕುಮಾರ್ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆಹಾಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಸಂದರ್ಭದಲ್ಲಿ ಆರೋಪಿ ನೀಡಿದ ಹೇಳಿಕೆ ಮೇರೆಗೆ 50 ಲಕ್ಷ ರೂ. ಬೆಲೆ ಬಾಳುವ 1 ಕೆಜಿ ತೂಕದ ಒಡವೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್, ಸಬ್ ಇನ್ಸ್ಪೆಕ್ಟರ್ ಪದ್ಮನಾಭ, ಎಎಸ್ಐ ಲಕ್ಷ್ಮಣಾಚಾರ್ಅವರನ್ನೊಳಗೊಂಡ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
