ಅರಸೀಕೆರೆ,ಜ.6- ನಿದ್ದಾಯ ಮಂಪರಿಗೆ ಜಾರಿದ ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಗಾಡಿ ಹೆದ್ದಾರಿಗೆ ಅಡ್ಡಲಾಗಿ ಮಗುಚಿ ಬಿದ್ದಿದು, ಅದೃಷ್ಟವಶಾತ್ ಸಾವು-ನೋವು ಸಂಭವಿಸಿಲ್ಲ. ಅಕ್ಕಿ ತುಂಬಿಕೊಂಡು ಶಿವಮೊಗ್ಗದಿಂದ ಬೆಂಗಳೂರು ಕಡೆ ಸಾಗುತ್ತಿದ್ದ ಬುಲೆರೋ ಗೂಡ್ಸ್ ಗಾಡಿ ನಗರದ ಪಿಪಿ ವೃತ್ತದ ಸಮೀಪ ರಾಷ್ಟ್ರೀಯ ಹೆದ್ದಾರಿ 206ರ ರಸ್ತೆ ವಿಭಜಕದ ಮಧ್ಯೆ ಅಳವಡಿಸಿರುವ ವಿದ್ಯುತ್ ಕಂಬಕ್ಕೆ ಗುದ್ದಿ ಪಲ್ಟಿ ಹೊಡೆದಿದೆ.
ಸದಾ ವಾಹನ ದಟ್ಟಣೆಯಿಂದ ಕೂಡಿರುವ ಹೆದ್ದಾರಿಯಲ್ಲಿ ಈ ವೇಳೆ ಯಾವುದೇ ವಾಹನಗಳು ಸಾಗದೆ ಇದುದರಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಮುಂಜಾನೆ ಅನಿರೀಕ್ಷಿತವಾಗಿ ಸಂಭವಿಸಿದ ಘಟನೆಯಿಂದಾಗಿ ಹೆದ್ದಾರಿ ಮೂಲಕ ಬೆಂಗಳೂರು, ಮೈಸೂರು ಹಾಗೂ ಹಾಸನ ಸೇರಿದಂತೆ ಇತರೆ ಊರುಗಳಿಗೆ ಸಾಗುತ್ತಿದ್ದ ಪ್ರಯಾಣಿಕರು ಕೆಲಸಮಯ ತೊಂದರೆ ಅನುಭವಿಸುವಂತಾಯಿತು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
