ಹಾಸನ,ಸೆ.16- ದೇವರಿಗೆ ಪೂಜೆ ಸಲ್ಲಿಸುವ ಮುನ್ನ ಸ್ನಾನ ಮಾಡಲು ನದಿಗೆ ಇಳಿದಿದ್ದ ಸರ್ಕಾರಿ ವೈದ್ಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗೊರೂರು ಹೇಮಾವತಿ ನದಿಯ ಹಿನ್ನೀರಿನ ಖೋನಾಪುರದಲ್ಲಿ ನಡೆದಿದೆ.ಚಂದ್ರಶೇಖರ್ ಮೃತಪಟ್ಟ ವೈದ್ಯ.
ಹೊಳೆನರಸೀಪುರ ತಾಲೂಕಿನ ಕೆರೆಗೂಡಿನ ಪಿಎಚ್ಸಿ ಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಶೇಖರ್ ನಿನ್ನೆ ಕರ್ತವ್ಯಕ್ಕೂ ಮುನ್ನ ಹೇಮಾವತಿ ನದಿ ಹಿನ್ನೀರಿನ ಖೋನಾಪುರ ಐಲ್ಯಾಂಡ್ನಲ್ಲಿರುವ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಲು ತೆರಳಿದ್ದರು.
ಕಳೆದ ಹಲವು ವರ್ಷಗಳಿಂದ ನದಿಯಲ್ಲಿ ಸ್ನಾನ ಮಾಡಿ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಇಟ್ಟುಕೊಂಡಿದ್ದರು. ಇದರಂತೆ ನಿನ್ನೆ ಪೂಜೆಗೂ ಮುನ್ನ ಸ್ನಾನ ಮಾಡಲು ನದಿಗಿಳಿದಿದ್ದು, ನದಿಯಲ್ಲಿ ನೀರು ಕಡಿಮೆ ಇದ್ದರಿಂದ ನೀರಿನ ಆಳ ಅರಿಯದೆ ಮುಂದೆ ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2023)
ರಾತ್ರಿಯಾದರೂ ಚಂದ್ರಶೇಖರ್ ಮನೆಗೆ ಬಾರದಿದ್ದಾಗ ಗಾಬರಿಗೊಂಡ ಮನೆಯವರು ಫೋನ್ ಮಾಡಿದ್ದು, ಕರೆ ಸ್ವೀಕರಿಸದೇ ಇದ್ದಾಗ ಆತಂಕಗೊಂಡ ಅರಕಲಗೂಡು ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ಪೊಲೀಸರು ಹುಡುಕಾಟ ನಡೆಸಿದಾಗ ಹೇಮಾವತಿ ನದಿಯ ಸಮೀಪ ಚಂದ್ರಶೇಖರ್ ಅವರ ಕಾರು, ಬಟ್ಟೆ ಪತ್ತೆಯಾಗಿದ್ದು, ನದಿಯಲ್ಲಿ ಶವ ತೇಲುತ್ತಿರುವುದು ಕಂಡುಬಂದಿದೆ. ಕೂಡಲೇ ಸಿಬ್ಬಂದಿಗಳು ನೀರಿಗಿಳಿದು ಶವವನ್ನು ಹೊರತೆಗೆದು ನೋಡಿದಾಗ ಮೃತಪಟ್ಟಿರುವುದು ಚಂದ್ರಶೇಖರ್ ಎಂದು ತಿಳಿದುಬಂದಿದೆ. ಈ ಸಂಬಂಧ ಗೊರೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
#govtdoctor, #holenarasipura, #drowned, #hemavatiriver,