ಬೆಂಗಳೂರು,ಫೆ.25- ಅಜ್ಜಿ ಸಾವನ್ನಪ್ಪಿದ್ದರಿಂದ ಗಾಬರಿಗೊಂಡು ಮೊಮ್ಮಗಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರುತಿ ನಗರದ ಜಯಮ್ಮ(70) ಮತ್ತು ಕೊಟ್ಟಿಗೆಪಾಳ್ಯದ ಮಮತಾ(24) ಮೃತಪಟ್ಟವರು.
# ಘಟನೆ ವಿವರ:
ಮಾರುತಿನಗರದ 17ನೇ ಕ್ರಾಸ್ನಲ್ಲಿ ಜಯಮ್ಮ ಅವರು ಮಗಳು ಮಂಜುಳಾ ಮತ್ತು ಮೊಮ್ಮಗ ಚೇತನ್ನೊಂದಿಗೆ ವಾಸವಾಗಿದ್ದರು. ಜಯಮ್ಮ ಅವರ ಮೊಮ್ಮಗಳು ಮಮತಾ ಎಂಕಾಂ ಪದವೀಧರೆಯಾಗಿದ್ದು, ಕೊಟ್ಟಿಗೆಪಾಳ್ಯದ ಯುವಕನೊಂದಿಗೆ ವಿವಾಹ ಮಾಡಿದ್ದರು. ಸಂಬಂಕರಬ್ಬೊರ ಮದುವೆಗೆ ಮಂಡ್ಯಕ್ಕೆ ಹೊಗಬೇಕಾಗಿದ್ದರಿಂದ ಮಮತಾ ಕೊಟ್ಟಿಗೆ ಪಾಳ್ಯದಿಂದ ಮಾರುತಿನಗರದಲ್ಲಿನ ತವರು ಮನೆಗೆ ಬಂದಿದ್ದಾರೆ.
ಮಂಜುಳಾ, ಚೇತನ್, ಮಮತಾ ಒಟ್ಟಾಗಿ ಮದುವೆ ಹೋಗೋಣವೆಂದು ನಿರ್ಧರಿಸಿದ್ದರು. ಈ ನಡುವೆ ಮಮತಾಗೆ ಮಾಸಿಕ ಋತುಚಕ್ರವಾದ್ದರಿಂದ ಮದುವೆಗೆ ಹೋಗಿರಲಿಲ್ಲ. ತಾಯಿ-ಮಗ ಇಬ್ಬರೇ ನಿನ್ನೆ ಬೆಳಗ್ಗೆ ಮಂಡ್ಯಕ್ಕೆ ಹೋಗುತ್ತಾರೆ. ಹಾಗಾಗಿ ಮನೆಯಲ್ಲಿ ಅಜ್ಜಿ ಜಯಮ್ಮ ಮತ್ತು ಮೊಮ್ಮಗಳು ಮಮತಾ ಇಬ್ಬರೇ ಇದ್ದರು.
ಬೆಳಗ್ಗೆ 11.30ರಲ್ಲಿ ಹಾಗೂ 12.30ರಲ್ಲಿ ಮಮತಾಗೆ ಸಂಬಂಧಿಕರು ಕರೆ ಮಾಡಿದ್ದಾರೆ. ಮದುವೆಗೆ ಹೋಗಿದ್ದ ಅಣ್ಣ ಚೇತನ್ ಮಧ್ಯಾಹ್ನ 3.30ರಲ್ಲಿ ತಂಗಿ ಮಮತಾಗೆ ಮೊಬೈಲ್ಗೆ ಕರೆ ಮಾಡಿದಾಗ ತೆಗೆದಿಲ್ಲ, 2-3 ಬಾರಿ ಕರೆ ಮಾಡಿದರೂ ತೆಗೆಯದಿದ್ದಾಗ ಗಾಬರಿಯಾಗಿ ಪಕ್ಕದ ಮನೆಗೆ ಫೋನ್ ಮಾಡಿ, ಹೋಗಿ ನೋಡುವಂತೆ ಹೇಳಿದ್ದಾರೆ.
ನಂತರ ಮಮತಾ ಅವರ ಗಂಡನಿಗೂ ತಿಳಿಸಿದ್ದಾರೆ. ಅವರೂ ಸಹ ಮಮತಾಗೆ ಕರೆ ಮಾಡಿದರೂ ಮೊಬೈಲ್ ಕರೆ ಸ್ವೀಕರಿಸದಿದ್ದಾಗ ತಕ್ಷಣ ಮನೆ ಬಳಿ ಬಂದು ನೋಡಿದಾಗ ಜಯಮ್ಮ ರಕ್ತದ ಮಡುವಿನಲ್ಲಿ ಬಿದ್ದು ಮೃತಪಪಟ್ಟಿರುವುದು ಮತ್ತು ಮಮತಾ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಮಮತಾ ಅವರ ಮಗು ಮೂರು ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ನಿನ್ನೆ ಮನೆಯಲ್ಲಿದ್ದಾಗ ಅಜ್ಜಿ ಆಕಸ್ಮಿಕವಾಗಿ ಬಿದ್ದು ಸತ್ತಿರಬಹುದು. ಅದನ್ನು ನೋಡಿದ ಮಮತಾ ಗಾಬರಿಯಾಗಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ವ್ಯಕ್ತವಾಗಿದೆ. ಸುದ್ದಿ ತಿಳಿದ ಜ್ಞಾನಭಾರತಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
