ಶೃಂಗೇರಿ,ಫೆ.25- ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧ ಶಮನವಾಗಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವದ ಹಲವು ರಾಜ್ಯಗಳು ಯುದ್ಧ ಬೇಡವೆಂದು ಹೇಳುತ್ತಿದ್ದರೂ ರಷ್ಯಾ ಮಾತ್ರ ಹಠಕ್ಕೆ ಬಿದ್ದು ಯುದ್ದ ನಿಲ್ಲಿಸುವುದಿಲ್ಲ ಎಂದು ಹೇಳುತ್ತಿದೆ. ನಮ್ಮ ಪ್ರಧಾನಿಯವರು ಯುದ್ಧ ಶಮನವಾಗಬೇಕೆಂದು ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮುಂದೆ ಏನಾಗುತ್ತೋ ಕಾದು ನೋಡೋಣ. ನಾಲ್ಕು ದಿನದ ಹಿಂದಷ್ಟೇ ಯುದ್ದ ಮಾಡುವುದಾಗಿ ರಷ್ಯಾದ ಅಧ್ಯಕ್ಷರು ಘೋಷಿಸಿದ್ದರು. ತಕ್ಷಣವೇ ಉಕ್ರೇನ್ ಮೇಲೆ ಯುದ್ದ ಆರಂಭಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಯಿ ಜಗನ್ಮಾತೆ ಶಾರದಾಂಬೆಯ ದರ್ಶನ ಪಡೆಯಲು ಶೃಂಗೇರಿಗೆ ಬಂದಿದ್ದು, ಈಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಬೆಂಗಳೂರಿಗೆ ಮರಳುವುದಾಗಿ ಹೇಳಿದರು. ಪ್ರತಿದಿನವು ಪಕ್ಷ ಸಂಘಟನೆಯ ಕೆಲಸ ಮಾಡುತ್ತಿದ್ದು, ಶಾರದಾಂಬೆಯ ಆಶೀರ್ವಾದ ಪಡೆಯಲು ಬಂದಿರುವುದಾಗಿ ಗೌಡರು ತಿಳಿಸಿದರು.
