ಮಳೆ ನಿಂತ ಮೇಲೆ ಪಂಚರತ್ನ ರಥಯಾತ್ರೆ ಆರಂಭ : ಹೆಚ್ಡಿಕೆ

Social Share

ಬೆಂಗಳೂರು, ಸೆ.1-ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಳೆ ನಿಂತ ಮೇಲೆ ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿತೃಪಕ್ಷ, ದಸರಾ ಇದೆ. ಒಮ್ಮೆ ಪ್ರಾರಂಭ ಮಾಡಿದರೆ 120-130 ಕ್ಷೇತ್ರದಲ್ಲಿ ಮಾಡುತ್ತೇವೆ. ಸರಿಯಾದ ಸಮಯ ನೋಡಿಕೊಂಡು ಪಂಚರತ್ನ ಪ್ರಾರಂಭಿಸುವುದಾಗಿ ತಿಳಿಸಿದರು.
ಪ್ರವಾಸದ ವೇಳೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಅಲ್ಲದೆ, ಗ್ರಾಮ ವಾಸ್ತವ್ಯದಲ್ಲಿ 14-15 ಕಾರ್ಯಕ್ರಮಗಳು ಇರಲಿವೆ ಎಂದರು.

ರಾಮನಗರ ಮಳೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳು ರಾಮನಗರಕ್ಕೆ ಭೇಟಿ ನೀಡಿದ್ದರು. ಅವರಿಗೆ ನಿಜವಾದ ಸಮಸ್ಯೆ ಅರಿವಾಗಿದೆ. ಎಲ್ಲವನ್ನು ಅರಿತಿದ್ದಾರೆ. ಎನ್‍ಡಿಆರ್‍ಎಫ್ ನಿಯಮದಂತೆ ಪರಿಹಾರ ಕೊಟ್ಟರೆ ಅಲ್ಲಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.

ರೇಷ್ಮೆ ನೂಲು ಸರ್ವನಾಶವಾಗಿದೆ. ಮೂಲಭೂತ ಸೌಕರ್ಯಗಳು ಹಾಳಾಗಿವೆ, ಮನೆಗಳು ಬಿದ್ದಿವೆ. ಅದಕ್ಕೆ ದೊಡ್ಡ ಪರಿಹಾರ ಕೊಡಬೇಕಾಗಿದೆ. ಮುಖ್ಯಮಂತ್ರಿ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಪರಿಹಾರ ಕೊಡಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಹಬ್ಬದ ಸಂದರ್ಭದಲ್ಲಿ ನಾಡಿಗೆ ಬಂದಿರುವ ದೊಡ್ಡಮಟ್ಟದ ಆಪತ್ತಿನಿಂದ. ದೊಡ್ಡಮಟ್ಟದ ಅನಾಹುತಗಳಾಗಿವೆ. ಮತ್ತೊಂದೆಡೆ ಸಮಾಜದಲ್ಲಿ ಸಂಘರ್ಷ ವಾತಾವರಣ ಉಂಟು ಮಾಡಲು ಕೆಲ ಶಕ್ತಿಗಳು ಪ್ರಯತ್ನ ಮಾಡುತ್ತಿರುವುದು ಕಂಡಿದ್ದೇವೆ. ಈ ಎರಡು ವಿಚಾರದಲ್ಲಿ ಭಗವಂತ ಸಮಾಜದಲ್ಲಿ ಶಾಂತಿ ನೆಲಿಸುವ ರೀತಿಯಲ್ಲಿ ಗಣೇಶನ ಅನುಗ್ರಹ ದೊರಕಲಿ ಎಂದು ಅವರು ಪ್ರಾರ್ಥಿಸಿದರು.

ಸಂಸದ ಪ್ರತಾಪ್ ಸಿಂಹಗೆ ತಿರುಗೇಟು:

ರಾಮನಗರದಲ್ಲಿ ಭಕ್ಷಿ ಕೆರೆ ಒಡೆಯಲು ಕಾರಣ ಏನು? ಭಕ್ಷಿ ಕೆರೆ ಒಡೆದಿದ್ದಕ್ಕೆ ರಾಮನಗರದಲ್ಲಿ ನೀರಿನ ಪ್ರವಾಹ ಆಗಿದ್ದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಅವೈಜ್ಞಾನಿಕ ಕೆಲಸ ಆಗಿದೆ. ನೀರು ಎಲ್ಲೂ ಹೋಗಲು ಸಾಧ್ಯವಿಲ್ಲ. ಕೆಲಸ ಮಾಡಬೇಕಾದರೆ ಸಿಕ್ಕಸಿಕ್ಕ ಕಡೆ ಕ್ವಾರಿ ಮಾಡಿದ್ದಾರೆ. ಸಿಕ್ಕಸಿಕ್ಕ ಕಡೆ ಮಣ್ಣು ಎತ್ತಿದ್ದಾರೆ, ರಾಜಕಾಲುವೆಗಳಲ್ಲಿ ಸರಾಗವಾಗಿ ನೀರು ಹರಿಯಲು ಅವಕಾಶವಿಲ್ಲ. ಭಕ್ಷಿ ಕೆರೆಗೆ ನಿರೀಕ್ಷೆಗೂ ಮೀರಿ ನೀರು ಬರಲು ಹೆದ್ದಾರಿಯೇ ಕಾರಣ. ರಾಮನಗರದ ಬಲ ಭಾಗದಲ್ಲಿ ಬೋಳಪ್ಪನ ಕೆರೆ ಇದೆ.

ಅಲ್ಲಿಯೂ ಸಹ ನೀರು ನುಗ್ಗಲು ರಾಷ್ಟೀಯ ಹೆದ್ದಾರಿ ಅವೈಜ್ಞಾನಿಕ ಕೆಲಸವೇ ಕಾರಣ. ನೀರು ಹೋಗಲು ಜಾಗವಿಲ್ಲ, ಅದನ್ನು ನೋಡಿ ಹೇಳಿದ್ದೇನೆ. ಈ ಮಹಾನುಭಾವ ರಸ್ತೆ ಕೆಲಸಕ್ಕೆ ಶ್ರಮಪಟ್ಟು ನಿರ್ವಹಣೆ ಮಾಡಿದ್ದೇನೆ ಎಂದು ಪೋಸ್ ಕೊಟ್ಟರೇ , ಏನಾದರೂ ವೇಗವಾಗಿ ಕೆಲಸವಾಗಿದ್ದರೆ ನಾನು ಮುಖ್ಯಮಂತ್ರಿ ಆಗಿದ್ದಾಗ ಭೂ ಸ್ವಾೀನಕ್ಕಾಗಿ ಎಂಟು ಬಾರಿ ಸಭೆ ಮಾಡಿದ್ದು ಕಾರಣ.

ರೈತರ ಮನವೊಲಿಸಿದಕ್ಕೆ ಪರಿಹಾರ ಕಲ್ಪಿಸಿದಕ್ಕೆ ಕೆಲಸದಲ್ಲಿ ವೇಗ ಕಂಡಿದ್ದೇವೆ. ಇವರು ಹೋಗಿ ರಸ್ತೆಯಲ್ಲಿ ನಿಂತು ಫೋಟೋ ತೆಗಿಸಿದಕ್ಕೆ ಅಲ್ಲ. ಇವರಿಗೆ ಪರಿಜ್ಞಾನ ಇದ್ದರೆ, ನೀರು ಯಾಕೆ ನುಗ್ಗಿತು ಎಂದು ತಿಳಿದುಕೊಳ್ಳಲಿ ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದರು. ಮಂಡ್ಯ ಸಂಸದರಿಗೂ, ಪ್ರತಾಪ್ ಸಿಂಹ ಅವರಿಗೆ ಕ್ರೆಡಿಟ್ ವಾರ್ ನಡೆದಿತ್ತು. ಹಣೆಬರಹ ಎಲ್ಲಿಗೆ ಬಂದಿದೆ ನೋಡಿ, ಅದನ್ನು ಸರಿಪಡಿಸಿಕೊಳ್ಳಪ್ಪ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ದಾಖಲಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ಸರ್ಕಾರ ಎಚ್ಚರಿಕೆಯಿಂದ ಕ್ರಮ ತೆಗೆದುಕೊಳ್ಳಬೇಕು. ನಾನು ಮತ್ತು ಸಿದ್ದರಾಮಯ್ಯ ಮೌನಕ್ಕೆ ಶರಣನಾಗಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದ್ದಾರೆ.

ಇಂಥ ಪ್ರಕರಣಕ್ಕೆ ನಾನು ಮೌನಕ್ಕೆ ಶರಣಾಗುವ ಪ್ರಶ್ನೆಯೇ ಇಲ್ಲ. ಇದು ಸರ್ಕಾರದ ಜವಾಬ್ದಾರಿ, ಅವರ ವಿರುದ್ಧ ಇರುವ ಆರೋಪಗಳ ಬಗ್ಗೆ ಮನಗಂಡು ಸಂಬಂಧಪಟ್ಟ ಇಲಾಖೆಗಳು ತೀರ್ಮಾನ ಮಾಡಬೇಕು, ಅದು ಅವರ ಕರ್ತವ್ಯ. ಇದನ್ನು ರಾಜಕೀಯವಾಗಿ ಯಾರು ಬಳಕೆ ಮಾಡಿಕೊಳ್ಳಬಾರದು ಎಂದು ಮಾರ್ಮಿಕವಾಗಿ ನುಡಿದರು.

ಪ್ರಕರಣಗಳಿಂದ ಧಾರ್ಮಿಕ ಕ್ಷೇತ್ರದ ಮೇಲೆ ಇರುವ ನಂಬಿಕೆಗೆ ಅಪಚಾರ ಆಗಬಾರದು. ಕಾನೂನು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗೊಂದಲ ಆಗದಂತೆ ಸರ್ಕಾರ ತೀರ್ಮಾನ ಮಾಡಬೇಕು. ಇಲ್ಲಿ ಸಮುದಾಯದ ಪ್ರಶ್ನೆ ಅಲ್ಲ, ದೇಶದಲ್ಲಿ ನಾವು ಕಾನೂನು ರಚನೆ ಮಾಡಕೊಂಡಿದ್ದೇವೆ.

ಯಾರು ಯಾವ ಸ್ಥಾನದಲ್ಲಿ ಇದ್ದಾರೆ, ಅವರು ಇಲ್ಲಿ ಉತ್ತರ ಕೊಡಬೇಕು ಎಂದರು. ಬಳಿಕ ಪದ್ಮನಾಭ ನಗರದಲ್ಲಿರುವ ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡ ನಂತರ ಕುಮಾರಸ್ವಾಮಿ ಅವರು ತಂದೆ ತಾಯಿಯವರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ನಾಡಿನ ಜನರಿಗೆ ಗಣೇಶೋತ್ಸವದ ಶುಭಾಶಯ ಕೋರಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, 13-14 ವರ್ಷಗಳಿಂದ ಈ ಮನೆಯಲ್ಲಿ ವಿಶೇಷ ಪೂಜೆ ಮಾಡಿಕೊಂಡು ಬರುತ್ತಿದ್ದೇವೆ. ದೇವರ ಅನುಗ್ರಹದಿಂದ ನಾನು ಇವತ್ತು ಪೂಜೆ ಮಾಡುವ ಹಾಗೆ ಹಾಗಿದೆ. ಇಷ್ಟು ಸುಧಾರಣೆ ಆಗುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ನಾನು ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಹೋರಾಟಕ್ಕೆ ಗಣಪತಿ ಶಕ್ತಿ ಕೊಡುವ ನಂಬಿಕೆ ಇದೆ ಎಂದು ಗೌಡರು ಆಶಾಭಾವನೆ ವ್ಯಕ್ತಪಡಿಸಿದರು.

Articles You Might Like

Share This Article