ಬೆಂಗಳೂರು,ಜ.13- ಕೋವಿಡ್ ಮೂರನೆ ಅಲೆ ಎರಡರಿಂದ ಎರಡೂವರೆ ದಿನದಲ್ಲೇ ದ್ವಿಗುಣವಾಗುತ್ತಿದ್ದು, ಲಸಿಕೆ ಪಡೆಯದವರು ಮತ್ತು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಅಲೆಯಲ್ಲಿ 10ರಿಂದ 12 ದಿನಕ್ಕೆ ಹಾಗೂ ಎರಡನೇ ಅಲೆಯಲ್ಲಿ 8ದಿನಕ್ಕೆ ಕೋವಿಡ್ ಸೋಂಕಿನ ಪ್ರಮಾಣ ದ್ವಿಗುಣವಾಗತ್ತಿತ್ತು. ಆದರೆ, ಇದೀಗ ಮೂರನೆ ಅಲೆ ಎರಡರಿಂದ ಎರಡೂವರೆ ದಿನದಲ್ಲೇ ದ್ವಿಗುಣವಾಗುತ್ತಿದೆ ಎಂದರು.
15ರಿಂದ 18 ವರ್ಷದ ಮಕ್ಕಳು, ಲಸಿಕೆ ಪಡೆಯದವರು ಹಾಗೂ 60 ವರ್ಷ ಮೇಲ್ಪಟ್ಟ ಮಧುಮೇಹ, ರಕ್ತದೊತ್ತಡ ಇತರೆ ಆರೋಗ್ಯ ಸಮಸ್ಯೆ ಉಳ್ಳವರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು. ರಾಜ್ಯದಲ್ಲಿ 45 ಲಕ್ಷ ಜನರು ಎರಡನೇ ಡೋಸ್ ಪಡೆದಿಲ್ಲ. ಎರಡನೇ ಲಸಿಕೆ ಪಡೆಯದವರು ಶೀಘ್ರವಾಗಿ ಪಡೆಯಬೇಕು. ಕೊರೊನಾ ವಾರಿಯರ್ಸ್ ಹಾಗೂ ಆರೋಗ್ಯ ಸಮಸ್ಯೆ ಉಳ್ಳವರಿಗಾಗಿಯೇ ಬೂಸ್ಟರ್ ಲಸಿಕೆ ಆರಂಭ ಮಾಡಲಾಗಿದೆ.
15ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಒಂದು ತಿಂಗಳ ಅವಯಲ್ಲೇ ಎರಡನೇ ಲಸಿಕೆ ನೀಡಲಾಗುತ್ತದೆ. ಮೂರನೆ ಅಲೆ ಇಡೀ ವಿಶ್ವದಲ್ಲೇ ಲಸಿಕೆ ಪಡೆಯದವರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದೆ ಎಂದರು.
ವೇಗವಾಗಿ ಹರಡುವ ಈ ಸಾಂಕ್ರಾಮಿಕ ರೋಗವನ್ನು ಯಾರೂ ಕೂಡ ಮೈಂಡ್ ರೋಗವೆಂದು ಕರೆಯಬಾರದು ಎಂದು ವಿಶ್ವಸಂಸ್ಥೆ ಸೂಚನೆ ಕೊಟ್ಟಿದೆ. ರಾಜ್ಯದಲ್ಲಿ ಡಿಸೆಂಬರ್ ಮೂರನೆ ವಾರದಲ್ಲಿ ಕೋವಿಡ್ ಪ್ರಮಾಣ ಇತ್ತು. ಜ.11ರ ವೇಳೆಗೆ ಶೇ.10.3ರಷ್ಟು ಕಂಡು ಬಂದಿದೆ. ಜ.5ರಂದು ಬೆಂಗಳೂರಿನಲ್ಲಿ 3605 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ 4246 ಕೋವಿಡ್ ಪ್ರಕರಣಗಳು ಒಂದೇ ವಾರದಲ್ಲಿ ಪತ್ತೆಯಾದವು. ಜ.11ರಂದು ಬೆಂಗಳೂರಿನಲ್ಲಿ 10,800 ಪ್ರಕರಣ ಕಂಡು ಬಂದರೆ, ರಾಜ್ಯದಲ್ಲಿ 15,473 ಪ್ರಕರಣಗಳು ಪತ್ತೆಯಾದವು ಎಂದು ಸಚಿವರು ವಿವರಿಸಿದರು.
ಬೆಂಗಳೂರಿನಲ್ಲಿ ಶೇ.32.64ರಷ್ಟು ಸೋಂಕಿನ ಪ್ರಮಾಣ ವೃದ್ಧಿಯಾಗಿದೆ. ರಾಜ್ಯದಲ್ಲಿ ಸರಾಸರಿ ಕೋವಿಡ್ ಸೋಂಕಿನ ವೃದ್ಧಿ ಪ್ರಮಾಣ 36.44ರಷ್ಟಿದೆ ಎಂದು ಸುಧಾಕರ್ ಮಾಹಿತಿ ನೀಡಿದರು.
