ಮನೆ, ನಿವೇಶನ ಖರೀದಿದಾರರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ ಕೊಟ್ಟ ರಾಜ್ಯ ಸರ್ಕಾರ

Social Share

ಬೆಂಗಳೂರು,ಜ.1- ಮನೆ, ಫ್ಲಾಟ್ ಮತ್ತು ನಿವೇಶನ ಖರೀದಿಸಲು ಎದುರು ನೋಡುತ್ತಿದ್ದ ರಾಜ್ಯದ ಜನತೆಗೆ ಕಂದಾಯ ಇಲಾಖೆ ಬಂಪರ್ ಕೊಡುಗೆ ನೀಡಿದೆ. ಫ್ಲಾಟ್‍ಗಳು ಮತ್ತು ಮನೆ ಹಾಗೂ ನಿವೇಶನ ಖರೀದಿ ಮಾಡುವವರಿಗೆ ಹಾಲಿ ಇರುವ ಮಾರ್ಗಸೂಚಿಯ ದರದಲ್ಲಿ ಶೇ.10ರಷ್ಟು ಕಡಿಮೆ ಮಾಡುವ ಮೂಲಕ ಸರ್ಕಾರ ರಾಜ್ಯದ ಜನತೆಗೆ ಹೊಸ ವರ್ಷದ ಉಡುಗೊರೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇಂದಿನಿಂದ ಮಾ.31ರವರೆಗೆ ಅನ್ವಯವಾಗುವಂತೆ ಕಂದಾಯ ಇಲಾಖೆ ವ್ಯಾಪ್ತಿಯಲ್ಲಿರುವ ಮನೆ ಮತ್ತು ಫ್ಲಾಟ್ ಮತ್ತು ನಿವೇಶನಗಳನ್ನು ಖರೀದಿ ಮಾಡುವವರಿಗೆ ಹಾಲಿ ಇರುವ ಮಾರ್ಗಸೂಚಿ ದರದಲ್ಲಿ ಶೇ.10ರಷ್ಟು ಕಡಿಮೆ ಮಾಡಲಿದ್ದೇವೆ ಎಂದು ಪ್ರಕಟಿಸಿದರು.
ಕಂದಾಯ ಇಲಾಖೆ ತೆಗೆದುಕೊಂಡಿರುವ ಈ ಐತಿಹಾಸಿಕ ನಿರ್ಧಾರದಿಂದ ರಾಜ್ಯದ ಲಕ್ಷಾಂತರ ಜನರಿಗೆ ಇದರಿಂದ ಲಾಭವಾಗಲಿದ್ದು, ಕಳೆದ ಎರಡು ವರ್ಷಗಳಿಂದ ಜಮೀನು ಮತ್ತು ಫ್ಲಾಟ್ ಖರೀದಿಸಲು ಎದುರು ನೋಡುತ್ತಿದ್ದ ಜನತೆಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಆಯಾ ಪ್ರದೇಶಗಳಲ್ಲಿರುವ ಮಾರ್ಗಸೂಚಿ ದರದ ಪ್ರಕಾರ ಸರ್ಕಾರದ ಈ ನಿಯಮ ಅನ್ವಯವಾಗಲಿದ್ದು, ಎಲ್ಲ ರೀತಿಯ ನೋಂದಣಿಗೂ ಸಹ ಇದೇ ನಿಯಮ ಒಳಪಡಲಿದೆ ಎಂದು ತಿಳಿಸಿದರು.
ನೋಂದಣಿ ಶುಲ್ಕವನ್ನು ಸಹ ಶೇ.10ರಷ್ಟು ಕಡಿತ ಮಾಡಲಾಗಿದ್ದು, ಮೂರು ತಿಂಗಳೊಳಗೆ ಸಾರ್ವಜನಿಕರು ಮನೆ ಮತ್ತು ಫ್ಲಾಟ್‍ಗಳನ್ನು ಮಾರ್ಗಸೂಚಿ ಪ್ರಕಾರ ಖರೀದಿಸಿ ನೋಂದಣಿ ಮಾಡಿಕೊಳ್ಳಬಹುದೆಂದು ಅವರು ಮನವಿ ಮಾಡಿದರು. ಕಳೆದೆರಡು ವರ್ಷಗಳಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ದರವನ್ನು ಶೇ.10ರಷ್ಟು ಕಡಿಮೆ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಕಾಂಗ್ರೆಸ್ ಸರ್ಕಾರ ಆರು ವರ್ಷ ಆಡಳಿತ ಮಾಡಿದೆ. ಆಗ ಮೇಕೆದಾಟಿಗೆ ಎಷ್ಟು ಹಣ ಮೀಸಲಿಟ್ಟಿದ್ದರು. ಅಕಾರ ಇದ್ದಾಗ ಏನೂ ಮಾಡಲಿಲ್ಲ. ಈಗ ಮಾಡಲು ಕೆಲಸವಿಲ್ಲ. ಹಾಗಾಗಿ ಗಿಮಿಕ್ ಮಾಡಲು ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆಯಿಂದ ಜನರಿಗೆ ಅನುಕೂಲ ಆಗುವುದಲ್ಲ. ಅವರ ಪಕ್ಷಕ್ಕೆ ಅನುಕೂಲವಾಗಲು ಮಾಡಿದ್ದಾರೆ ಅಷ್ಟೇ. ಇಷ್ಟು ದಿನ ಏನು ಕಡಲೆಕಾಯಿ ತಿನ್ನುತ್ತಿದ್ದರಾ ಎಂದು ತರಾಟೆಗೆ ತೆಗೆದುಕೊಂಡರು.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಅಕಾರದಲ್ಲಿತ್ತು. ಐದು ವರ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ನಯಾ ಪೈಸಾ ನೀರಾವರಿಗೆ ಮೀಸಲಿಡಲಿಲ್ಲ. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಏನೂ ಮಾಡದಿದ್ದಕ್ಕೆ ಒಅದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ ಎಂದು ಕುಹುಕವಾಡಿದರು.
ಕಾಂಗ್ರೆಸ್‍ನವರಿಗೆ ಜನರ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿ ಇಲ್ಲ. ಮೇಕೇದಾಟು ಬಗ್ಗೆ ಈಗ ಮೈ ಪರಚಿಕೊಳ್ಳುತ್ತಿದ್ದಾರೆ. ನನಗೆ ಮಸಾಲೆ ಬೇಕಿಲ್ಲ ತಿರುಗೇಟು ನೀಡಿದರು. ಇವರಿಗೆ ನಿಜವಾಗಿ ಕಾಳಜಿ ಇದ್ದರೆ ಅಕಾರದಲ್ಲಿ ಇದ್ದಾಗಲೇ ಮಾಡುತ್ತಿದ್ದರು. ಡಿಪಿಆರ್ ಮಾಡಲು ಆರು ವರ್ಷ ಬೇಕಿತ್ತಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಎಂದು ಪಾದಯಾತ್ರೆ ಮಾಡಿದ್ದರು. ಅಲ್ಲಿ ನೀರೇ ಬತ್ತಿ ಹೋಯಿತು. ಈಗ ಮೇಕೇದಾಟು ಕೂಡ ಅದೇ ಪರಿಸ್ಥಿತಿಗೆ ಬಂದಿದೆ ಎಂದು ಟೀಕಾ ಪ್ರಹಾರ ನಡೆಸಿದರು. ಹಣ ಬಿಡುಗಡೆ ಮಾಡಿಲ್ಲ,10 ಸಾವಿರ ಹಣ ಕೋಟಿ ಹಣ ಬಿಡುಗಡೆ ಮಾಡುತ್ತೀವಿ ಎಂದು ಹೇಳಿದ್ದರು. ಕಾಂಗ್ರೆಸ್ ನಾಟಕದ ಪಕ್ಷ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ದೇವಸ್ಥಾನಗಳ ಬಗ್ಗೆ ಕಾಂಗ್ರೆಸ್‍ನವರು ಮಾತನಾಡಿರುವ ಬುದ್ದಿಗೆ ಬುದ್ದಿಗೆ ಮೆಚ್ಚಲೇಬೇಕು. ಮುಸ್ಲಿಂ, ಕ್ರಿಶ್ಚಿಯನ್‍ಗೆ ಯಾಕಿಲ್ಲ ಹೀಗೆ ರಾಮ, ಕೃಷ್ಣಾ ಅಂದರೆ ಉರ್ಕೋತಾರೆ, ಬೆಂಕಿ ಇಟ್ಟುಕೊಳ್ಳುತ್ತಾರೆ ಕಾಂಗ್ರೆಸ್‍ನವರು ಎಂದು ಆಪಾದಿಸಿದರು.

Articles You Might Like

Share This Article