ಬೆಂಗಳೂರು,ಮಾ.17- ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ಮೀಸಲಾತಿಯಿಂದಾಗಿ ಮೈಸೂರು, ಕಿತ್ತೂರು ಕರ್ನಾಟಕ ಹಾಗೂ ಕರಾವಳಿ ಭಾಗದ ಜನರಿಗೆ ಭಾರೀ ಅನ್ಯಾಯವಾಗುತ್ತಿದೆ ಎಂದು ಇತರೆ ಕರ್ನಾಟಕ ಭಾಗದ ಮುಖಂಡರು ಆರೋಪಿಸಿದ್ದಾರೆ.
ಸಂವಿಧಾನದ ಅನುಚ್ಛೇದ 371-ಜೆ ಅಡಿಯಲ್ಲಿ ಹೈದರಾ ಬಾದ್ ಕರ್ನಾಟಕದ ಭಾಗಕ್ಕೆ ನೀಡಿರುವ ಮೀಸಲಾತಿ ಇದೇ ರೀತಿ ಮುಂದುವರೆದರೆ ಮುಂದಿನ 20ರಿಂದ 30 ವರ್ಷಗಳಲ್ಲಿ ಸರ್ಕಾರದ ಎಲ್ಲಾ ಇಲಾಖೆಗಳಲ್ಲೂ ಉನ್ನತ ಹುದ್ದೆಗಳಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಜನರೇ ತುಂಬಿ ಹೋಗಿರುತ್ತಾರೆ ಇದರಿಂದ ನಮಗೆ ಭಾರಿ ಅನ್ಯಾಯವಾಗಲಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್, ಮುಖಂಡರಾದ ಶ್ರೀಕಂಠಯ್ಯ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳಲ್ಲಿ ಕೇವಲ ಹೈದರಾಬಾದ್ ಕರ್ನಾಟಕ ಭಾಗದ ಹುದ್ದೆಗಳಿಗೆ ಮಾತ್ರ ಪ್ರತ್ಯೇಕವಾಗಿ ನೇಮಕಾತಿ ಮಾಡಿ ಇತರೆ ಕರ್ನಾಟಕ ಭಾಗದ ಹುದ್ದೆಗಳನ್ನು ತುಂಬದೆ ಇರುವುದರಿಂದ ಮೈಸೂರು, ಕಿತ್ತೂರು ಕರ್ನಾಟಕ ಹಾಗೂ ಕರಾವಳಿ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಅವರುಗಳು ದೂರಿದ್ದಾರೆ.
ಹೈದರಾಬಾದ್ ಕರ್ನಾಟಕಕ್ಕೆ ನೀಡಿರುವ ವಿಶೇಷ ಮೀಸಲಾತಿ ಬಗ್ಗೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ, 371-ಜೆ ಅಡಿಯಲ್ಲಿ ಅವಕಾಶ ಇಲ್ಲದಿರುವ ಬಿಡಿಎ, ಬಿಬಿಎಂಪಿ, ಜಲಮಂಡಳಿ ಮತ್ತಿತರ ಇಲಾಖೆಗಳಲ್ಲೂ ಹೈದರಾಬಾದ್ ಕರ್ನಾಟಕ ಭಾಗದ ಜನರಿಗೆ ಶೇ.8ರಷ್ಟು ಮೀಸಲಾತಿ ಕಲ್ಪಿಸಿರುವುದರಿಂದ ಇತರ ಕರ್ನಾಟಕ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎನ್ನುವುದು ನಮ್ಮ ವಾದವಾಗಿದೆ ಅವರು ತಿಳಿಸಿದ್ದಾರೆ.
ಹೈದರಾಬಾದ್ ಕರ್ನಾಟಕ ಭಾಗದ ಹುದ್ದೆಗಳ ತಪ್ಪು ಲೆಕ್ಕ ಹಾಕಿ ಹೆಚ್ಚು ಹುದ್ದೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಇದರ ಜತೆಗೆ ಆ ಭಾಗದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಒಂದೇ ಬಾರಿಗೆ ಪ್ರತ್ಯೇಕವಾಗಿ ಭರ್ತಿ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.
ಇದೇ ರೀತಿ ಎಲ್ಲಾ ಇಲಾಖೆಗಳಲ್ಲಿ ಹೈದರಾಬಾದ್ ಕರ್ನಾಟಕದವರನ್ನೇ ನೇಮಕ ಮಾಡಿಕೊಂಡರೆ ಭವಿಷ್ಯದಲ್ಲಿ ಜೇಷ್ಠತೆ ಆಧಾರದ ಮೇಲೆ ಎಲ್ಲಾ ಉನ್ನತ ಹುದ್ದೆಗಳಿಗೆ ಅಲ್ಲಿನವರೇ ನೇಮಕಗೊಳ್ಳುವುದರಿಂದ ಇತರ ಭಾಗದವರಿಗೆ ಭಾರೀ ಅನ್ಯಾಯವಾಗುವುದು ಗ್ಯಾರಂಟಿ.
ಬಿಜೆಪಿ ನಾಯಕರ ಮುನಿಸು ಶಮನ, ಒಗ್ಗಟ್ಟಿನ ಜಪ
ಮಾತ್ರವಲ್ಲ, ಹೈದರಾಬಾದ್ ಕರ್ನಾಟಕ ಭಾಗಕ್ಕೆ ನೇಮಕಾತಿಯಾದವರನ್ನು ಇತರ ಕರ್ನಾಟಕ ಅಧಿಕಾರಿಗಳ ಜೇಷ್ಠತೆಯಲ್ಲಿ ಸೇರಿಸುವಂತಿಲ್ಲ. ಆದರೂ ಆ ಭಾಗದ ಕ್ಲಾಸ್ ಒನ್ ಜೂನಿಯರ್ ಹುದ್ದೆಗಳ ನಂತರ ಅವರನ್ನು ಕರ್ನಾಟಕ ಅಧಿಕಾರಿಗಳ ಜೇಷ್ಠತೆ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಿರುವುದು ಇನ್ನಿತರ ಹಲವಾರು ಅಧಿಕಾರಿಗಳಿಗೆ ಬಡ್ತಿಯಲ್ಲಿ ಅನ್ಯಾಯವಾಗಲಿದೆ.
ಹೀಗಾಗಿ ಈ ಕುರಿತಂತೆ ಕಾನೂನು ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲು ಇತರ ಕರ್ನಾಟಕ ಭಾಗದ ಅಕಾರಿಗಳನ್ನೊಳಗೊಂಡ ಉನ್ನತ ಮಟ್ಟದ
ಸಮಿತಿ ರಚನೆ ಮಾಡಬೇಕು. ಅಲ್ಲಿಯವರೆಗೆ ಹೈದರಾಬಾದ್ ಕರ್ನಾಟಕಕ್ಕೆ ಸಂಬಂಧಿಸಿದಂತೆ ನೀಡಲಾಗುತ್ತಿರುವ ಪ್ರತ್ಯೇಕ ನೇಮಕಾತಿ ಮತ್ತು ಬಡ್ತಿ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಬೇಕು ಎಂದು ಅವರುಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.