ವಾಷಿಂಗ್ಟನ್, ಅ. 12- ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹಣಕಾಸು ನೀತಿಯನ್ನು ಬಿಗಿಗೊಳಿಸಿ ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಮತ್ತು ತಗ್ಗಿಸವ ಪ್ರಯತ್ನವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಶ್ಲಾಘಿಸಿದೆ.
ಅಗತ್ಯ ಬೆಲೆ ಏರಿಕೆ ವಿರುದ್ಧ ಹೋರಾಡಲು ಆರ್ಬಿಐ ನೀತಿ ಸೂಕ್ತವಾಗಿದೆ ಮತ್ತಷ್ಟು ಬಿಗಿಗೊಳಿಸುವುದು ಅಗತ್ಯವಿದೆ ಎಂದು ಐಎಂಎಫ್ನ ವಿತ್ತೀಯ ಮತ್ತು ಬಂಡವಾಳ ಮಾರುಕಟ್ಟೆ ವಿಭಾಗದ ಉಪ ವಿಭಾಗದ ಮುಖ್ಯಸ್ಥ ಗಾರ್ಸಿಯಾ ಪಾಸ್ಕುವಲ್ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದಲ್ಲದೆ ಹಣಕಾಸಿನ ಸ್ಥಿರತೆಗೆ ಸಂಬಂಧಿಸಿದಂತೆ, ಭಾರತದಲ್ಲಿ ಬ್ಯಾಂಕುಗಳು ಮತ್ತು ಬ್ಯಾಂಕಿಂಗ್ ಅಲ್ಲದ ವ್ಯವಸ್ಥೆಯಲ್ಲಿ ಕೆಲವು ದುರ್ಬಲತೆಗಳು ನಿಸ್ಸಂಶಯವಾಗಿ ಇನ್ನೂ ಇವೆ ಮತ್ತು ಇದು ಕಳವಳಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.
ಕೆಲ ದಿನಗಳ ಹಿಂದೆ ನಾವು ನಡೆಸಿದ ಹಣಕಾಸು ವಲಯದ ಮೌಲ್ಯಮಾಪನ ಕಾರ್ಯಕ್ರಮದಲ್ಲಿ ಕೆಲ ನ್ಯೂನ್ಯತೆ ಪಟ್ಟಿ ಮಾಡಿದ್ದೇವೆ ಎಂದು ಹಣಕಾಸು ಸಲಹೆಗಾರ ಮತ್ತು ನಿರ್ದೇಶಕ ಟೋಬಿಯಾಸ್ ಅಡ್ರಿಯನ್ ಹೇಳಿದ್ದಾರೆ. ಇದನ್ನು ಎಷ್ಟು ಬೇಗ ನಿವಾರಿಸಿದರೆ ಬಾಂಕ್ಗಳು ಇನ್ನಷ್ಟು ಸುಸ್ಥಿತಿಗೆ ಬರಲಿದೆ ಎಂದರು