ವಾಷಿಂಗ್ಟನ್, ಸೆ.29- ಜಗತ್ತಿನಲ್ಲಿ ಆಶಾವಾದಿ ಸನ್ನಿವೇಶ ಇಲ್ಲದಿರುವ ಮತ್ತು ಆತಂಕದ ಸಮಯದಲ್ಲಿ ಭಾರತವು ಪರಿಸ್ಥಿತಿ ಸ್ಥಿರಗೊಳಿಸುವ ಮತ್ತು ಸೇತುವೆಯ ಪಾತ್ರವಹಿಸುತ್ತದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾಗತಿಕ ಆರ್ಥಿಕತೆಯ ಅಪಾಯವನ್ನು ನಿವಾರಿಸುವಲ್ಲಿ ಭಾರತ ಕೊಡುಗೆ ನೀಡಬಹುದು ಮತ್ತು ರಾಜಕೀಯ ಪರಿಭಾಷೆಯಲ್ಲಿ, ಕೆಲವು ರೀತಿಯಲ್ಲಿ ಜಗತ್ತನ್ನು ಅಭಿವೃದ್ದಿ ಮಾಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
ತುಂಬಾ ಚಿಂತಿತರಾಗಿರುವ ಅಂತರರಾಷ್ಟ್ರೀಯ ಸಮುದಾಯವನ್ನು ನೋಡುತ್ತಿದ್ದೇವೆ. ಬಹಳಷ್ಟು ಕಷ್ಟಕರ ಪರಿಸ್ಥಿತಿಯಲ್ಲಿ ಭಾರತ ಸಂಬಂಧ ಸೇತುವಾಗಿ ಕಾರ್ಯ ನಿರ್ವಹಿಸುವ ಹೆಚ್ಚಿನ ಅವಕಾಶಗಳಿವೆ ಎಂದು ಜೈಶಂಕರ್ ಅಭಿಪ್ರಾಯ ಪಟ್ಟರು.
ಜಗತ್ತಿಗೆ ಭಾರತ ನೀಡಬಹುದಾದ ಕೊಡುಗೆಗಳಿವೆ. ಈ ನಿಟ್ಟಿನಲ್ಲಿ ಸ್ಥಿರಗೊಳಿಸುವ ಪಾತ್ರವನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಮಗೆ ರಾಜತಾಂತ್ರಿಕ ಪಾತ್ರವಿದೆ. ನಾವು ನಿಜವಾಗಿಯೂ ಆರ್ಥಿಕ ಪರಿಭಾಷೆಯಡಿ ನೋಡಬೇಕು. ಜಾಗತಿಕ ಆರ್ಥಿಕತೆಯ ಅಪಾಯವನ್ನು ಕಡಿಮೆ ಮಾಡಲು ನಾವು ಹೇಗೆ ಕೊಡುಗೆ ನೀಡಬಹುದು? ಎಂಬುದನ್ನು ರಾಜಕೀಯ ಪರಿಭಾಷೆಯಲ್ಲಿ ಯೋಚಿಸುತ್ತೇನೆ ಎಂದು ಹೇಳಿದರು.
ವಿಶೇಷವಾಗಿ ಜಾಗತಿಕವಾಗಿ ದಕ್ಷಿಣದ ದೇಶಗಳು ನಮ್ಮಿಂದ ನಿರೀಕ್ಷೆ ಹೊಂದಿದೆ ಎಂದು ನಾನು ಭಾವಿಸುತ್ತೇನೆ. ಇದಕ್ಕಾಗಿ ನಿಸ್ಸಂಶಯವಾಗಿ, ನಾವು ಪ್ರಯತ್ನಿಸುತ್ತೇವೆ ಮತ್ತು ನಮ್ಮ ಕೈಲಾದಷ್ಟು ಮಾಡುತ್ತೇವೆ. ನಾವು ಪ್ರಪಂಚದ ಎಲ್ಲಾ ಕೆಳಗಿನ ದೇಶಗಳೊಂದಿಗೆ ಸಂಪರ್ಕದಲ್ಲಿರುತ್ತೇವೆ, ಎಂದು ಅವರು ಹೇಳಿದರು.
ಚೀನಾದೊಂದಿಗೂ ಉತ್ತಮ ಬಾಂಧವ್ಯ ಬಯಸುತ್ತೇವೆ ಭಾರತ ಶಾಂತಿಪ್ರಿಯ ಸ್ನೇಹ ಪರವಾಗಿದೆ. ನಮ್ಮ ಜೊತೆಗಿನ ಸಹಕಾರಕ್ಕೆ ಅನೇಕ ದೇಶಗಳು ಬಯಸಿವೆ ಅದಕ್ಕೆ ನಾವು ಸಿದ್ಧರಾಗಿದ್ದೇವೆ ಎಂದರು.
ವಿಶ್ವಸಂಸ್ಥೆ ವಾರ್ಷಿಕ ಅಧಿವೇಶನದಲ್ಲಿ ಭಾಗವಹಿಸಲು ನ್ಯೂಯಾಕ್ ್ಗೆ ಬಂದು ಭಾರತಕ್ಕೆ ತೆರಳುವ ಸಂದರ್ಭದಲ್ಲಿ ಆವರು ಮನಬಿಚ್ಚಿ ಮಾತನಾಡಿದ್ದಾರೆ. ಪ್ರವಾಸದ ವೇಳೆ ವಿಶ್ವ ನಾಯಕರು ಮತ್ತು ಪ್ರಪಂಚದಾದ್ಯಂತದ ಅವರ ಸಹವರ್ತಿಗಳೊಂದಿಗೆ ಸುಮಾರು 100 ಸಭೆಗಳನ್ನು ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.