ನವದೆಹಲಿ, ಸೆ.29- ಖುದ್ದು ಪ್ರಧಾನಿಯೇ ಜೂಟ್ಜೀವಿ ಆಗಿರುವುದರಿಂದ ಅವರ ಸಚಿವಾಲಯ ಹಾಗೂ ಕಚೇರಿಯಿಂದ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಲೇವಡಿ ಮಾಡಿದ್ದಾರೆ.
ಗುಲಾಂ ಆಲಿ ಅವರು ಗುಜ್ಜಾರ್ ಮುಸ್ಲಿಂ ಸಮುದಾಯದ ಮೊದಲ ರಾಜ್ಯಸಭಾ ಸದಸ್ಯ ಎಂದು ಭಾರೀ ಪ್ರಚಾರ ನೀಡಲಾಗಿತ್ತು. ಅವರನ್ನು ಗುರುತಿಸಿ ನೇಮಕಾತಿ ಮಾಡಿದ ಪ್ರಧಾನಿಗೆ ವ್ಯಾಪಕ ಅಭಿನಂದನೆಗಳು ಸಲ್ಲಿಕೆಯಾಗಿದ್ದವು. ನಿನ್ನೆ ಗುಲಾಂ ಆಲಿ ಪ್ರಮಾಣ ವಚನ ಸ್ವೀಕರಿಸಿದರು. ಆ ವೇಳೆ ಪ್ರಕಟವಾದ ಸುದ್ದಿಗಳಲ್ಲಿಯೂ ಗುಜ್ಜಾರ್ ಸಮುದಾಯದ ಮೊದಲ ಜನ ಪ್ರತಿನಿಧಿ ಎಂದೇ ಬಿಂಬಿಸಲಾಗಿತ್ತು.
ಇದಕ್ಕೆ ತೀವ್ರ ಅಸಮದಾನ ವ್ಯಕ್ತ ಪಡಿಸಿರುವ ರಾಜಕೀಯ ವಿಶ್ಲೇಷಕ ಡಾ.ಜಹಂಝೈಬ್ ಸಿರ್ವಾಲ ಪ್ರಧಾನ ಮಂತ್ರಿ ಕಚೇರಿಯಿಂದಲೇ ಸುಳ್ಳನ್ನು ಬಿತ್ತಲಾಗುತ್ತಿದೆ. ಅದನ್ನು ಬೆಂಬಲಿಸಿ ಮಾಧ್ಯಮಗಳು ಸತ್ಯವನ್ನು ಪರಿಶೀಲನೆ ಮಾಡದೆ ಸುದ್ದಿ ಪ್ರಕಟಿಸುತ್ತವೆ.
ಮೊಹಮದ್ ಅಸ್ಲಾಂ ಗುಜ್ಜರ್ ಸಮುದಾಯದ ಮೊದಲ ರಾಜ್ಯಸಭಾ ಸದಸ್ಯ. 2005ರಲ್ಲಿ ಕಾಂಗ್ರೆಸ್ ಅವರನ್ನು ನೇಮಕ ಮಾಡಿತ್ತು. ಹಾಗಾಗಿ ಗುಲಾಂ ಆಲಿ ಮೊದಲ ಸಮುದಾಯದ ಮೊದಲ ರಾಜ್ಯಸಭಾ ಸದಸ್ಯ ಅಲ್ಲ ಎಂದು ಟ್ವೀಟ್ ಮಾಡಿದ್ದರು.
ಅದನ್ನು ರಿಟ್ವೀಟ್ ಮಾಡಿರುವ ಜೈರಾಮ್ ರಮೇಶ್, ಖುದ್ದು ಪ್ರಧಾನಿಯೇ ಜೂಟ್ಜೀವಿ (ಸುಳ್ಳುಜೀವಿ) ಆಗಿರುವುದರಿಂದ ಅವರ ಸಂಪುಟದ ಸದಸ್ಯರು ಮತ್ತು ಪ್ರಧಾನ ಮಂತ್ರಿ ಕಚೇರಿಯಿಂದ ಉತ್ತಮವಾದದ್ದನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.