ಬೆಂಗಳೂರು, ಆ.6- ರಾಸಾಯನಿಕ ನೀರಿನ ಮಿಶ್ರಣದಿಂದಾಗಿ ಜಕ್ಕೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತುಹೋಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಗಬ್ಬುವಾಸನೆ ಹರಡಿದೆ. ಸಾಕಷ್ಟು ವರ್ಷಗಳ ಇತಿಹಾಸ ಇರುವ ಜಕ್ಕೂರು ಕೆರೆ ಕಲುಷಿತವಾಗಿದ್ದು, ಇಲ್ಲಿದ್ದ ಮೀನುಗಳು ಸಾವನ್ನಪ್ಪುತ್ತಿವೆ.
ಕೆರೆಯ ದಡದಲ್ಲೇ ರಾಶಿಗಟ್ಟಲೇ ಸತ್ತು ಬಿದ್ದಿರುವ ಮೀನುಗಳು ಕಂಡುಬಂದಿದ್ದು, ಇದರಿಂದ ದುರ್ವಾಸನೆ ಹರಡಿದೆ.
ಟೆಂಡರ್ ಪಡೆದು ಕೆಲವರು ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದು, ಇತ್ತೀಚೆಗೆ ಸುತ್ತಮುತ್ತಲ ಪ್ರದೇಶದಿಂದ ಕಲುಷಿತ ನೀರು ಕೆರೆ ಸೇರುತ್ತಿರುವ ಹಿನ್ನೆಲೆಯಲ್ಲಿ ಮೀನುಗಳಿಗೆ ಆಮ್ಲಜನಕದ ಕೊರತೆ ಉಂಟಾಗಿ ಸಾವನ್ನಪ್ಪುತ್ತಿವೆ ಎಂದು ಪರಿಸರ ವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಗೆ ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಕೆಲವರು ಆರೋಪಿಸಿದ್ದಾರೆ.
ಸತ್ತ ಮೀನುಗಳನ್ನು ಕಂಡ ಕೆಲವರು ಎತ್ತಿಕೊಂಡು ಹೋಗುತ್ತಿದ್ದು, ಇದನ್ನು ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೂಡಲೇ ಪಾಲಿಕೆ ಸಿಬ್ಬಂದಿ ಸತ್ತ ಮೀನುಗಳನ್ನು ತೆರವುಗೊಳಿಸಿ ಕೆರೆಯನ್ನು ಮತ್ತೆ ಸುಸ್ಥಿತಿಗೆ ತರಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಶಾಸಕರು ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.