ಬೆಂಗಳೂರು,ಜ.19- ನಗರದ ಆರ್ಪಿ ರಸ್ತೆಯಲ್ಲಿ ನಿಲ್ಲಿಸಿದ್ದ 7 ಲಕ್ಷ ಮೌಲ್ಯದ ಜೆಸಿಬಿ ವಾಹನವನ್ನು ಕಳ್ಳತನ ಮಾಡಿರುವ ಘಟನೆ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಮಮೂರ್ತಿ ಎಂಬುವರು 2018ನೇ ಸಾಲಿನಲ್ಲಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪ್ರತಾಪ್ ರೆಡ್ಡಿ ಎಂಬುವರಿಂದ ಜೆಸಿಬಿ ವಾಹನ ಖರೀಸಿದ್ದರು.
ಚಾಲಕರಾದ ಈಶ್ವರ್ ಅನಂತ, ದೇವು ಮತ್ತು ಅಂಬರೀಶ್ ಎಂಬುವರು ಈ ಜೆಸಿಬಿ ವಾಹನವನ್ನು ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದರು. ಚಾಲಕನಾದ ಲಕ್ಷ್ಮಣ್ ಎಂಬುವರನ್ನು ಇಟ್ಟುಕೊಂಡು ರಾಮಮೂರ್ತಿ ಬಾಡಿಗೆಗೆ ಓಡಿಸಿಕೊಂಡಿದ್ದರು.
ಜ.11ರಂದು ರಾತ್ರಿ 10 ಗಂಟೆ ಸುಮಾರಿನಲ್ಲಿ ಮಿಲ್ಕ್ ಕಾಲೋನಿಯ ಬ್ಯಾಂಕ್ ಆಫ್ ಇಂಡಿಯಾ ಎದುರಿನ ಆರ್ಪಿ ರಸ್ತೆಯಲ್ಲಿ ಜೆಸಿಬಿ ವಾಹನವನ್ನು ಚಾಲಕ ಲಕ್ಷ್ಮಣ್ ಮತ್ತು ರಾಮಮೂರ್ತಿ ನಿಲ್ಲಿಸಿ ತೆರಳಿದ್ದರು. ಮಾರನೆಯ ದಿನ ರಾತ್ರಿ 10 ಗಂಟೆಗೆ ಬಂದು ನೋಡಿದಾಗಲೂ ವಾಹನ ಅಲ್ಲೇ ಇತ್ತು. ಆದರೆ 13ರಂದು ಬೆಳಗ್ಗೆ 4.30ರ ಸುಮಾರಿನಲ್ಲಿ ಬಂದು ನೋಡಿದಾಗ ವಾಹನ ಇರಲಿಲ್ಲ.
ತಕ್ಷಣ ರಾಮಮೂರ್ತಿ ಅವರು ಸುಬ್ರಹ್ಮಣ್ಯ ನಗರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
