ಬೆಂಗಳೂರು,ಆ.25- ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸರಳ ಬಹುಮತ ಪಡೆದು ಮತ್ತೆ ಅಧಿಕಾರಕ್ಕೆ ಬರಬೇಕೆಂಬ ಗುರಿ ಹಾಕಿಕೊಂಡಿರುವ ಬಿಜೆಪಿ, ಜೆಡಿಎಸ್ನ 10ರಿಂದ 12 ಶಾಸಕರನ್ನು ಸೆಳೆಯಲು ಮುಂದಾಗಿದೆ. ಎರಡು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಇನ್ನು ಖಾತೆಯನ್ನೇ ತೆರೆದಿಲ್ಲ. ಅಂತಹ ಕ್ಷೇತ್ರಗಳನ್ನು ಗುರುತಿಸಿ ಆ ಕ್ಷೇತ್ರಗಳಲ್ಲೂ ಬಿಜೆಪಿಯನ್ನು ಬಲಗೊಳಿಸಲು ಉದ್ದೇಶಿಸಲಾಗಿದೆ.
ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಕ್ಷೇತ್ರಗಳಿದ್ದು, ಆ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ಕಾರ್ಯ ತಂತ್ರ ರೂಪಿಸಿದೆ.
ಇದಕ್ಕಾಗಿ ವೈಯಕ್ತಿಕ ವರ್ಚಸ್ಸುವುಳ್ಳ ಪ್ರಭಾವಿ ಜೆಡಿಎಸ್ನ ಮುಖಂಡರು ಹಾಗೂ ಶಾಸಕರಿಗೆ ಗಾಳ ಹಾಕಲಾಗುತ್ತಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ತೊರೆದು ಬಿಜೆಪಿಯಿಂದ ಸ್ರ್ಪಧಿಸುವ ಖಾತ್ರಿ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಈ ಕಾರ್ಯವನ್ನು ಪ್ರಭಾವಿ ಸಚಿವರು ಹಾಗೂ ಪಕ್ಷದ ಮುಖಂಡರು ನಿರಂತರವಾಗಿ ಮಾಡುತ್ತಿದ್ದಾರೆ.
ಬಿಜೆಪಿಗೆ ಬಂದಿದ್ದೇ ಆದರೆ ಚುನಾವಣಾ ವೆಚ್ಚವನ್ನು ಪಕ್ಷವೇ ಭರಿಸಲಿದೆ. ಜೊತೆಗೆ ಅವರ ಕ್ಷೇತ್ರಗಳ ಅಭಿವೃದ್ಧಿಗೂ ಸರ್ಕಾರದಿಂದ ಸಾಕಷ್ಟು ಅನುದಾನ ದೊರೆಯಲಿದೆ ಎಂಬ ಭರವಸೆಯನ್ನು ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಬ್ಬರು ಹಾಗೂ ಹಳೆ ಮೈಸೂರು ಭಾಗದಲ್ಲಿ 10 ಶಾಸಕರನ್ನು ಸಂಪರ್ಕಿಸಿ ಮತ್ತೊಮ್ಮೆ ಚುನಾವಣೆಗೂ ಮುನ್ನ ಆಪರೇಷನ್ ಕಮಲ ನಡೆಸುವ ತಯಾರಿಯನ್ನು ಮಾಡಲಾಗುತ್ತಿದೆ.
ಬಿಜೆಪಿ ನಾಯಕರು ಸಂಪರ್ಕಿಸಿ ನೀಡಿರುವ ಆಹ್ವಾನ ಮತ್ತು ಭರವಸೆಗಳನ್ನು ಜೆಡಿಎಸ್ನ ಕೆಲ ಶಾಸಕರು ತಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಗಮನಕ್ಕೂ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.