23ರಿಂದ ಜೆಡಿಎಸ್‍ನಿಂದ ಜಲಧಾರೆಗೆ ಚಾಲನೆ

Social Share

ಬೆಂಗಳೂರು, ಜ.7- ರಾಜ್ಯದಲ್ಲಿ ವ್ಯರ್ಥವಾಗುವ ಮಳೆ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಜಲಧಾರೆ ಯೋಜನೆಯನ್ನು ಜೆಡಿಎಸ್ ರೂಪಿಸಲು ಮುಂದಾಗಿದೆ. ಗಂಗೆಯನ್ನು ಪರಮ ಪವಿತ್ರವೆಂದು ಭಾವಿಸುವ ನಮ್ಮ ಪರಂಪರೆ, ನಂಬಿಕೆಗೆ ಚ್ಯುತಿ ಬಾರದಂತೆ ಶ್ರದ್ಧಾಭಕ್ತಿಯಿಂದ ರಾಜ್ಯದ 15 ನದಿಗಳ ಪವಿತ್ರ ಜಲವನ್ನು ಕಲಶಗಳಲ್ಲಿ ಸಂಗ್ರಹ ಮಾಡಿ, ಆ ನೀರನ್ನು ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನಕ್ಕೆ ಬರಮಾಡಿಕೊಂಡು ಗಂಗಾಪೂಜೆ ನೆರವೇರಿಸುವ ಮೂಲಕ ಜಲಧಾರೆ ಯೋಜನೆಗೆ ಚಾಲನೆ ನೀಡಲಿದೆ.
ಜ.23ರಂದು ರಾಮನಗರದ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇಗುಲದಿಂದ ರಾಜ್ಯದ 15 ದಿಕ್ಕುಗಳಿಗೆ ಹೊರಡುವ ಗಂಗಾ ರಥಗಳಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
ಜ.26ರಂದು ಈ ರಥಗಳಿಗೆ ಅಳವಡಿಸಲಾಗಿರುವ ಕಲಶಗಳ ಮೂಲಕ ನಿಗದಿ ಮಾಡಲಾಗಿರುವ ಸ್ಥಳಗಳಲ್ಲಿ ಬೆಳಗ್ಗೆ 9 ಗಂಟೆಗೆ ಕಾವೇರಿ, ಕಬಿನಿ, ಮೇಕೆದಾಟು, ಹೇಮಾವತಿ, ನೇತ್ರಾವತಿ, ಕುಮಾರಧಾರ, ತುಂಗಭದ್ರಾ, ಶರಾವತಿ, ಅಘನಾಶಿನಿ, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ಭೀಮಾ, ಅರ್ಕಾವತಿ, ಉತ್ತರ ಪಿನಾಕಿನಿ, ಚಿತ್ರಾವತಿ ಸೇರಿ ಪೂರ್ವ ನಿಗದಿತ 15 ಸ್ಥಳಗಳಲ್ಲಿ ಮೊದಲ ಜಲ ಸಂಗ್ರಹ ಮಾಡಲು ಉದ್ದೇಶಿಸಲಾಗಿದೆ.
ಜಲ ಸಂಗ್ರಹ ಮಾಡುವ ದಿನ ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ನಾಯಕರಾದ ದೇವೇಗೌಡರು, ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಸಾ.ರಾ.ಮಹೇಶ್, ನಾಡಗೌಡರು, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿದಂತೆ ಹಲವರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಡೀ ಜಲಧಾರೆ ಕಾರ್ಯಕ್ರಮದಲ್ಲಿ ಒಟ್ಟು 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುತ್ತದೆ. ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲ್ಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿದ್ದು, ಎಲ್ಲಾÉಡೆ ಜಲ ತುಂಬಿದ ಕಲಶಗಳ ಮೆರೆವಣಿಗೆ, ಕಲಾ ತಂಡಗಳ ಮೆರಗು, ಮಂಗಳವಾದ್ಯಗಳ ಮೇಳ, ಕಲಶಗಳೊಂದಿಗೆ ಮಹಿಳೆಯರ ನಡಿಗೆ ನಡೆಯಲಿದೆ. ಪ್ರತಿದಿನ 15 ಕಡೆ ಇಂಥ ಕಾರ್ಯಕ್ರಮಗಳು ನಡೆಯಲಿವೆ.
ಹೀಗೆ ರಾಜ್ಯದ ಉದ್ದಗಲಕ್ಕೂ ಸಾಗಿ ಬರುವ ಈ 15 ವಾಹನಗಳು 15 ರಿಂದ 20 ದಿನಗಳ ಒಳಗಾಗಿ ಬೆಂಗಳೂರು ತಲುಪುತ್ತವೆ. ಅಂದು ಇಡೀ ಬೆಂಗಳೂರನ್ನು ಪ್ರದಕ್ಷಿಣೆ ಹಾಕುವ ಇಷ್ಟೂ ವಾಹಗಳು ಅದೇ ದಿನ ಸಂಜೆ ಅರಮನೆ ಮೈದಾನದಲ್ಲಿ ಸೇರಲಿವೆ. ಆ ನಂತರ ಎರಡು ದಿನಗಳಲ್ಲಿ ಒಂದು ಬೃಹತ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯದ ಉದ್ದಗಲಕ್ಕೂ ಸಂಗ್ರಹಿಸಲಾದ ಜಲವನ್ನು ದೊಡ್ಡ ಕಲಶಕ್ಕೆ ತುಂಬಿಸಿ ಗಂಗಾ ಪೂಜೆ, ಗಂಗಾ ಆರತಿ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು.
ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಪೂಜಿಸಲ್ಪಟ್ಟಿದ್ದ ಪವಿತ್ರ ಜಲವುಳ್ಳ ಕಲಶವನ್ನು ಬೆಂಗಳೂರಿನ ವಿಧಿವಿಧೆಡೆಗಳಿಂದ ಮೆರವಣಿಗೆ ಮೂಲಕ ಪಕ್ಷದ ರಾಜ್ಯ ಕಚೇರಿ ಜೆಪಿ ಭವನಕ್ಕೆ ವಿದ್ಯುಕ್ತವಾಗಿ ಬರಮಾಡಿಕೊಂಡು ಆ ಕಲಶ ಪ್ರತಿಷ್ಠಾಪನೆ ಮಾಡಲಾಗುವುದು. ಅಂದಿನಿಂದ ಮುಂದಿನ 391 ದಿನಗಳ ಕಾಲ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಯಲಿದೆ. ಆ ನಿತ್ಯ ಪೂಜೆಯಲ್ಲಿ ಪಕ್ಷದ ಎಲ್ಲ ಮುಖಂಡರು, ಕಾರ್ಯಕರ್ತರು ಹಾಗೂ ಮಹಿಳಾ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

Articles You Might Like

Share This Article