ಬೆಂಗಳೂರು,ಮಾ.18- ಕರ್ನಾಟಕ ಏಕೀಕರಣದ ಹುತಾತ್ಮರಾದ ರಂಜಾನ್ ಸಾಬ್ ಹೆಸರಿನಲ್ಲಿ ಪ್ರತಿ ವರ್ಷ ಕಾರ್ಯಕ್ರಮ ನಡೆಸಲು ಒಂದು ಲಕ್ಷ ರೂ. ನೀಡುವುದಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಪ್ರಕಟಿಸಿದರು.
ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ವತಿಯಿಂದ ಹಿರಿಯ ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರಿಗೆ ಶ್ರೀ ರಂಜಾನ್ ಸಾಬ್ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ರಂಜಾನ್ ಸಾಬ್ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಈ ಹಣ ನೀಡಲಾಗುವುದು ಎಂದರು. ಶಾಲಾ ಮಕ್ಕಳನ್ನು ಒಳಗೊಂಡಂತೆ ರಂಜಾನ್ ಸಾಬ್ ಹೆಸರಿನಲ್ಲಿ ಕಾರ್ಯಕ್ರಮ ಮಾಡುವುದು ಒಳ್ಳೆಯದು. ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಉತ್ತಮ ಕೆಲಸ ಎಂದು ಹೇಳಿದರು.
ವಲಸೆ ಕಾರ್ಮಿಕರಲ್ಲಿ ಭಯ ಹುಟ್ಟಿಸಿದ್ದ ಯುಟ್ಯೂಬರ್ ಶರಣಾಗತಿ
ಗಡಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶಾಲೆಗಳಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಅಲ್ಲದೆ ಕರ್ನಾಟಕ ಏಕೀಕರಣಕ್ಕೆ ದುಡಿದ ಗಡಿ ರಕ್ಷಣೆ ಮಾಡಿದ ಮಹನೀಯರ ಹೆಸರಿನಲ್ಲಿ ಗಡಿನಾಡು ಚೇತನ ಎಂಬ ಪ್ರಶಸ್ತಿ ನೀಡಲಾಗುತ್ತಿದೆ ಎಂದರು.
ಗಡಿ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲು ಕನ್ನಡ ಪರ ಚಿಂತಕರಾದ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ಕಾರಣಕರ್ತರು. ಪತ್ರಕರ್ತ ಬೆಲಗೂರು ಸಮೀವುಲ್ಲಾ ಅವರು ಸುಂದರ ಸಮಾಜ ಕಟ್ಟುವ ನಿಟ್ಟಿನಲ್ಲಿ ಪತ್ರಕರ್ತರ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಕನ್ನಡಪರ ಚಿಂತಕ, ನಾಡೋಜ ಬರಗೂರು ರಾಮಚಂದ್ರಪ್ಪ ಮಾತನಾಡಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ನಿಜವಾದ ಅರ್ಥದಲ್ಲಿ ದೇಶ ಪ್ರೇಮ ಹಾಗೂ ಕನ್ನಡ ಪ್ರೇಮವನ್ನು ಮಾಡುತ್ತಿದೆ ಎಂದರು.
ಮದರಸ ಹಾಗೂ ಮಸೀದಿಗಳಲ್ಲೂ ಕನ್ನಡ ಕಲಿಕೆಯನ್ನು ವೇದಿಕೆ ವತಿಯಿಂದ ಆರಂಭಿಸಲಾಗಿದೆ. ಕನ್ನಡವನ್ನು ಕಟ್ಟಿದವರು ಒಂದು ಜಾತಿ, ಧರ್ಮಕ್ಕೆ ಸೇರಿದವರಲ್ಲ ಎಂಬ ಬಗ್ಗೆ ರಂಜಾನ್ ಸಾಬ್ ಸೂಕ್ತ ನಿದರ್ಶನವಾಗುತ್ತಾರೆ ಎಂದು ಹೇಳಿದರು.
ಜಾತಿ, ಧರ್ಮದ ಕಾರಣಕ್ಕಾಗಿ ಬೀದಿ ಜಗಳ ಉಂಟು ಮಾಡುತ್ತಿರುವ ಸಂದರ್ಭದಲ್ಲಿ ಅವರು ಹೆಚ್ಚು ಪ್ರಸ್ತುತರಾಗುತ್ತಾರೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಪತ್ರಕರ್ತ ಸಮೀವುಲ್ಲಾ ಅವರು ಸಮಾಜಮುಖಿ ಬದ್ದತೆಯುಳ್ಳ ಪತ್ರಕರ್ತ ಎಂದು ಶ್ಲಾಘಿಸಿದರು.
ಪ್ರಶಸ್ತಿ ಸ್ವೀಕರಿಸಿದ ಬೆಲಗೂರು ಸಮೀವುಲ್ಲಾ ಮಾತನಾಡಿ, ಕನ್ನಡ, ನೆಲ, ಭಾಷೆ ವಿಚಾರದಲ್ಲಿ ಹೋರಾಟ ಮಾಡಿದವರ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸಿರುವುದು ಹೆಮ್ಮೆ ತಂದಿದೆ. ಜಾತಿ, ಮತ ಮೀರಿದ ಪ್ರೀತಿಯಿಂದ ಬದುಕು ಕಟ್ಟಿಕೊಂಡಿದ್ದೇವೆ. ಇತಿಹಾಸದಲ್ಲಿಲ್ಲದ ಉರಿಗೌಡ, ನಂಜೇಗೌಡ ಎಂಬುವರು ರಾಜಕಾರಣದ ಭಾಗವಾಗುತ್ತಿರುವಾಗ ರಂಜಾನ್ ಸಾಬ್ ಹೆಚ್ಚು ಪ್ರಸ್ತುತರಾಗುತ್ತಾರೆ. ಬರಗೂರು ಅವರ ಪ್ರಭಾವ ತಮ್ಮ ಮೇಲೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಕೋಲ್ಡ್ ಸ್ಟೋರೇಜ್ ಕುಸಿದು 14 ಮಂದಿ ಸಾವಿನ ಪ್ರಕರಣ, ಇಬ್ಬರು ಮಾಲೀಕರ ಬಂಧನ
ಕನ್ನಡ ಅಭಿವೃದ್ಧಿ ಪ್ರಾಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ಅವರ ರಂಜಾನ್ ಸಾಬ್ ಕೃತಿಯನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಕನ್ನಡ ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೇ.ಪಾಶ್ರ್ವನಾಥ, ಲೇಖಕಿ ವಿಜಯಮ್ಮ, ವಚನಜ್ಯೋತಿ ಬಳಗದ ಅಧ್ಯಕ್ಷ ಎಸ್.ಪಿ.ಪಿನಾಕಪಾಣಿ, ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆ ಅಧ್ಯಕ್ಷರಾದ ಸಮೀವುಲ್ಲಾ ಖಾನ್ ಉಪಸ್ಥಿತರಿದ್ದರು.
Journalist, Belaguru Samiullah, Ramjan Saab, award,