ತುಮಕೂರು,ಫೆ.26- ರಾಷ್ಟ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶವನ್ನು ಮತ್ತೊಂದು ತಾಲಿಬಾನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ನಗರದ ಟೌನ್ಹಾಲ್ ವೃತ್ತದಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನು ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ, ಬಿಜೆಪಿ ಪಕ್ಷದವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಈಗಾಗಲೇ ಇಂತಹ ಹಲವು ಉದಾಹರಣೆಗಳು ನಮ್ಮ ಕಣ್ಣಮುಂದಿವೆ.ಹರ್ಷ ಕೊಲೆ ಇದರಲ್ಲಿ ಒಂದು ಎಂದರು.
ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ರಾಜ್ಯದಲ್ಲಿ ಸುಮಾರು 27 ಹಿಂದೂ ಕಾರ್ಯಕರ್ತರ ಕಗ್ಗೊಲೆಯಾಗಿದೆ. ಇದುವರೆಗೂ ಯಾರಿಗೂ ಸರಿಯಾದ ಶಿಕ್ಷೆಯಾಗಿಲ್ಲ. ಹಿಜಾಬ್ ಗಲಭೆಯೇ ಹರ್ಷನ ಕೊಲೆಗೆ ಮೂಲ ಕಾರಣ. ಇದರ ವಿರುದ್ದ 27ರವರೆಗೆ ಬಿಜೆಪಿ ಎಲ್ಲಾ ತಾಲೂಕುಗಳಲ್ಲಿಯೂ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರಿಗೆ ಸದನಕ್ಕಿಂತ ಈಶ್ವರಪ್ಪನವರ ಹೇಳಿಕೆಯೇ ಮುಖ್ಯವಾಯಿತು. ನೂರಾರು ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಾಗಿದ್ದ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುವ ಅಧಿವೇಶವನ್ನು ಹಾಳು ಮಾಡಿದರು. ತಾಲಿಬಾನ್ ಸಂಸ್ಕøತಿಯನ್ನು ಪ್ರೋತ್ಸಾಹಿಸುತ್ತಿರುವ ಕಾಂಗ್ರೆಸ್ನಿಂದ ನಾವು ದೇಶಪ್ರೇಮವನ್ನು ಕಲಿಯುವ ಅಗತ್ಯವಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಲಕ್ಷ್ಮೀಶ್ ಮಾತನಾಡಿ, ವಿರೋಧಪಕ್ಷವಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಬಿ.ಎಸ್.ಯಡಿಯೂರಪ್ಪ ಅವರನ್ನು ನೋಡಿ ಕಲಿಯಬೇಕಾಗಿದೆ. ನರೇಂದ್ರಮೋದಿ ಅವರು ಪ್ರಧಾನಿಯಾಗುವ ಮೊದಲು ಕಾಶ್ಮೀರದ ಬೀದಿ ಬೀದಿಗಳಲ್ಲಿ ರಾಷ್ಟ್ರದ್ವಜಕ್ಕೆ ಅಪಮಾನವಾಗುವ ವೇಳೆ ಕಾಂಗ್ರೆಸ್ ಏನು ಮಾಡುತ್ತಿತ್ತು. ಮಿಲಿಟರಿಯವರಿಗೆ ಕಲ್ಲು ತೂರುವಾಗ ಎಲ್ಲಿದ್ದರೂ ಎಂದು ಪ್ರಶ್ನಿಸಿದ ಅವರು, ಹಿಜಾಬ್ ವಿಚಾರ ನ್ಯಾಯಾಲಯದಲ್ಲಿರುವಾಗ, ಒಂದು ಪಕ್ಷದ ಪರ ಮಾತನಾಡುವುದು ಶೋಭೆಯಲ್ಲ ಎಂದರು.
ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್ , ಜಿಲ್ಲಾ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಟೂಡಾ ಅಧ್ಯಕ್ಷ ಬಿ.ಎಸ್.ನಾಗಣ್ಣ, ರವಿ ಹೆಬ್ಬಾಕ, ಹನುಮಂತರಾಜು, ಮೇಯುರ್ ಬಿ.ಜಿ.ಕೃಷ್ಣಪ್ಪ, ಟಿ.ಆರ್.ಸದಾಶಿವಯ್ಯ, ಕೊಪ್ಪಲ್ ನಾಗರಾಜು, ಮಲ್ಲಿಕಾರ್ಜುನ್,ವೇದಮೂರ್ತಿ, ರುದ್ರೇಶ್, ರಾಜೀವ್,ಚಂದ್ರಶೇಖರ್, ಕೆ.ಪಿ.ಮಹೇಶ್, ಶಬ್ಬೀರ್,ಜಗ್ಗಣ್ಣ ಪಾಲಿಕೆಯ ಎಲ್ಲಾ ಬಿಜೆಪಿ ಸದಸ್ಯರು.ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
