ಬೆಂಗಳೂರು,ಮಾ.10- ದೇಶದಲ್ಲಿಯೇ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಕ್ಷೇತ್ರದಲ್ಲಿ ರಾಜ್ಯ ಸತತವಾಗಿ ಅಗ್ರಸ್ಥಾನ ಕಾಯ್ದುಕೊಂಡು ಬಂದಿದೆ ಎಂದು ಮಾಜಿ ಮುಖ್ಯ ಕಾರ್ಯದರ್ಶಿ ಕೆ ರತ್ನಪ್ರಭಾ ಹೇಳಿದರು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಎಸ್ಎಜೆ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್ನ ಆರನೇ ಬಿಸ್ಕೆಟ್ ಹಾಗೂ ಬೇಕರಿ ಉತ್ಪನ್ನಗಳ ಕಾರ್ಖಾನೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಅವರು ಮಾತನಾಡಿದರು.
2014-16ನೇ ಸಾಲಿನಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅಕಾರ ವಹಿಸಿಕೊಂಡಿದೆ. ಆಗ ಆ ಸ್ಥಾನಕ್ಕೆ ಬಂದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ನನ್ನದಾಗಿತ್ತು. ನಾನು ಅಧಿಕಾರ ವಹಿಸಿಕೊಂಡಾಗ ರಾಜ್ಯವು ದೇಶದಲ್ಲಿ 11ನೇ ಸ್ಥಾನದಲ್ಲಿತ್ತು, ನಂತರ ನಾವು ಒಂದು ತಂಡ ನಿರಂತರ ಶ್ರಮಿಸಿದ ಪರಿಣಾಮ ಮುಂದಿನ ವರ್ಷ, ಕರ್ನಾಟಕದ ಶ್ರೇಯಾಂಕಗಳು ಸುಧಾರಿಸಿ ಏಳನೇ ಸ್ಥಾನಕ್ಕೇರಿತು ಎಂದರು.
ನಂತರದ ವರ್ಷ ಕರ್ನಾಟಕವು ಮೊದಲ ಸ್ಥಾನ ತಲುಪಿತು. ಅಂದಿನಿಂದ ಕರ್ನಾಟಕವು ಅಗ್ರ ಸ್ಥಾನದಲ್ಲಿಯೇ ಉಳಿದುಕೊಂಡಿದೆ. ಭೂಮಿಯ ಬೆಲೆಗಳು ಏರುತ್ತಿವೆ ಎಂಬುದನ್ನು ನಾವು ಗಮನಿಸಬೇಕಾಗಿದೆ. ಕೆಐಎಡಿಬಿ ಭೂಸ್ವಾೀಧಿನಕ್ಕೆ ಮುಂದಾದಾಗ, ಸ್ವಾೀಧಿನ ಪಡಿಸಿಕೊಂಡ ಭೂಮಿಯಲ್ಲಿ ಕಾರ್ಖಾನೆಯಲ್ಲಿ ಭೂಮಿ ಕೊಟ್ಟವರ ಕುಟುಂಬದಿಂದ ಕನಿಷ್ಠ ಒಬ್ಬರಿಗೆ ಕೆಲಸ ನೀಡಲಾಗುತ್ತದೆ ಎಂದು ಹೇಳಲಾಗುತ್ತದೆ ಯಾದರೂ, ಬಹಳಷ್ಟು ಸಂದರ್ಭಗಳಲ್ಲಿ, ಅದು ಈಡೇರುವುದಿಲ್ಲ.
ಇದರಿಂದ ಗ್ರಾಮಸ್ಥರು ಅತೃಪ್ತ ರಾಗುತ್ತಾರೆ. ಹೀಗಾಗಿ ಕೈಗಾರಿಕೆಗಳಿಗೆ ಭೂಮಿ ನೀಡಿದ ಕುಟುಂಬಗಳನ್ನು ಗುರುತಿಸಿ ಆ ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವಂತೆ ನಾನು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇನೆ ಎಂದು ತಿಳಿಸಿದರು.
ಈ ಕಾರ್ಖಾನೆ ಅಸ್ತಿತ್ವಕ್ಕೆ ಬರಲು ಸುಮಾರು ಒಂದು ದಶಕ ಬೇಕಾಯಿತು, ಕಾರ್ಖಾನೆ ಸ್ಥಾಪಿಸುವುದು ಅತ್ಯಂತ ಸವಾಲಿನ ಸಂಗತಿ ಎಂಬುದು ನಮಗೆಲ್ಲರಿಗೂ ಗೊತ್ತಿರುವ ಕಾರಣ, ಕಾರ್ಖಾನೆಯನ್ನು ದೇಗುಲ ಅಥವಾ ಮನೆ ಎಂದು ಭಾವಿಸಿ ನೌಕರರು ಕಾರ್ಖಾನೆಯನ್ನು ನಡೆಸಬೇಕು.
ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡಿ, ನಿಮಗೆ ಯಾವುದೇ ಸಮಸ್ಯೆಗಳು ಅಥವಾ ಬೇಡಿಕೆಗಳಿದ್ದರೆ ಮುಷ್ಕರಗಳ ಮೊರೆ ಹೋಗುವುದಕ್ಕಿಂತ ಕಾರ್ಖಾನೆಯ ಆಢಳಿತ ಮಂಡಳಿಯ ಜೊತೆ ನೇರ ಸಂವಾದ ನಡೆಸುವುದು ಉತ್ತಮ ಎಂದರು.
ಮುಷ್ಕರದಿಂದ ಕಾರ್ಖಾನೆಗಳು ಮುಚ್ಚಲ್ಪಟ್ಟ ಹಲವಾರು ಉದಾಹರಣೆಗಳಿವೆ ಮತ್ತು ಅಂತಹ ಉದ್ಯೋಗಿಗಳಿಗೆ ಉದ್ಯೋಗ ನಷ್ಟವಾಗುತ್ತದೆ. ಕಾರ್ಖಾನೆಗಳು ಅತ್ಯುತ್ತಮವಾಗಿ ನಿರ್ವಹಿಸಲು ನೌಕರರು ಮತ್ತು ಆಡಳಿತ ಸಮಿತಿ ನಡುವೆ ಸಮನ್ವಯ ಅತ್ಯಗತ್ಯ ಎಂದು ರತ್ನಪ್ರಭಾ ಅವರು ಅಭಿಪ್ರಾಯಪಟ್ಟರು.
