ನಿಗದಿತ ಸಮಯಕ್ಕಿಂತ ಮೊದಲೇ ವಿಧಾನಮಂಡಲ ಕಲಾಪ ಮೊಟಕು

Social Share

ಬೆಂಗಳೂರು,ಫೆ.22- ಕಾಂಗ್ರೆಸ್ ಶಾಸಕರ ಅಹೋರಾತ್ರಿ ಧರಣಿಯಿಂದಾಗಿ ವಿಧಾನಸಭೆ ಅಧಿವೇಶನ ಪೂರ್ವ ನಿಗದಿತ ಸಮಯಕ್ಕಿಂತ ಮೊದಲೇ ಮುಕ್ತಾಯಗೊಂಡಿತು. ಕಳೆದ ಗುರುವಾರದಿಂದ ಕಾಂಗ್ರೆಸ್ ಶಾಸಕರು ವಿಧಾನಸಭೆಯಲ್ಲಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಅಥವಾ ರಾಜೀನಾಮೆ ಪಡೆಯುವಂತೆ ಆಗ್ರಹಿಸಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು ಸಹ ಮುಂದುವರೆಯಿತು.
ರಾಷ್ಟ್ರಧ್ವಜಕ್ಕೆ ಸಚಿವ ಈಶ್ವರಪ್ಪ ಅವರು ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಸಂಪುಟದಿಂದ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ವಿಧಾನಸಭೆಯಲ್ಲಿ ನಿರಂತರವಾಗಿ ಧರಣಿ ಮಾಡುತ್ತಿದೆ. ಇಂದು ಬೆಳಗ್ಗೆಯೂ ಸದನ ಅರಂಭಗೊಂಡಾಗ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಘೋಷಣೆ ಕೂಗುತ್ತಾ ಧರಣಿ ಮುಂದುವರೆಸಿದರು.
ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಧರಣಿ ಕೈಬಿಟ್ಟು ನಿಮ್ಮ ನಿಮ್ಮ ಸ್ಥಾನಗಳಿಗೆ ತೆರಳಿ ಸದನದ ಕಾರ್ಯ ಕಲಾಪ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡಿದರು. ಆದರೆ ಮನವಿಗೆ ಮಣಿಯದೆ ಘೋಷಣೆ ಕೂಗುತ್ತಾ ಕಾಂಗ್ರೆಸ್ ಸದಸ್ಯರು ಗದ್ದಲ ಎಬ್ಬಿಸಿದರು. ಸಭಾಧ್ಯಕ್ಷರು ಪದೇ ಪದೇ ಮನವಿ ಮಾಡಿ ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಹೇಳಿದರೂ ಅವರ ಮನವಿ ಫಲ ನೀಡಲಿಲ್ಲ.
ಧರಣಿ ಕೈ ಬಿಡುವಂತೆ ಸದನದ ಹೊರಗೂ ಸಹ ಸಭಾಧ್ಯಕ್ಷರು ಕಾಂಗ್ರೆಸಿಗರಿಗೆ ಮನವಿ ಮಾಡಿದ್ದರು. ಅದು ಸಹ ಫಲಿಸಲಿಲ್ಲ. ಇದರ ನಡುವೆ ಜೆಡಿಎಸ್ ಶಾಸಕರು ಧರಣಿ ನಿರತರನ್ನು ಅಮಾನತು ಮಾಡಿ ಹೊರಗೆ ಹಾಕಿ ಎಂದು ಆಗ್ರಹಿಸಿದರು. ಆದರೆ, ಈ ಎಲ್ಲದರ ನಡುವೆ ಇಂದು ಸಹ ಧರಣಿ ನಡೆಯಿತು.
ಈ ಧರಣಿ ನಡುವೆಯೇ ಸಭಾಧ್ಯಕ್ಷರು ಪ್ರಶ್ನೋತ್ತರ ಕಲಾಪ, ಶಾಸನ ರಚನಾ ಕಲಾಪಕ್ಕೆ ಅನುವು ಮಾಡಿಕೊಟ್ಟರು. ಆನಂತರ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೂ ಪ್ರತಿಭಟನಾಕಾರರು ಕಿವಿಗೊಡಲಿಲ್ಲ. ಕಾಂಗ್ರೆಸ್ ಶಾಸಕರು ಗೊಂದಲದ ನಡುವೆ ಶಾಸಕರು ಪ್ರಶ್ನೆಗಳನ್ನು ಕೇಳಿ ಸಂಬಂತ ಸಚಿವರಿಂದ ಉತ್ತರವನ್ನು ಪಡೆದರು. ಆದರೆ ಕಾಂಗ್ರೆಸ್ ಶಾಸಕರು ತಮ್ಮ ಪಟ್ಟನ್ನು ಸಡಿಲಿಸದೆ ನಿರಂತರವಾಗಿ ಘೋಷಣೆ ಕೂಗುತ್ತಿದ್ದರು. ಇದರಿಂದಾಗಿ ಸದನದಲ್ಲಿ ಗದ್ದಲ ಹೆಚ್ಚಾಗಿತ್ತು. ನಂತರ ರಾಜ್ಯಪಾಲರ ಭಾಷಣದ ಚರ್ಚೆಗೆ ಸಿಎಂ ಉತ್ತರ ನೀಡಿದರು.
ಸಭಾಧ್ಯಕ್ಷರು ಕಾರ್ಯ-ಕಲಾಪವನ್ನು ಮಾರ್ಚ್ 4ರ ಬಜೆಟ್ ಅಧಿವೇಶನದವರೆಗೂ ಮುಂದೂಡಿದರು. ರಾಷ್ಟ್ರಗೀತೆಯೊಂದಿಗೆ ಪ್ರಸಕ್ತ ಅಧಿವೇಶನವನ್ನು ಮುಕ್ತಾಯಗೊಳಿಸಲಾಯಿತು. ಫೆ.14ರಂದು ಉಭಯ ಸದನಗಳಲ್ಲಿ ರಾಜ್ಯಪಾಲರು ಮಾಡಿದ್ದ ಭಾಷಣದೊಂದಿಗೆ ಆರಂಭಗೊಂಡಿದ್ದ ಜಂಟಿ ಅಧಿವೇಶನ ಇಂದು ಮುಕ್ತಾಯಗೊಂಡಿತು.

Articles You Might Like

Share This Article