ಬೆಂಗಳೂರು,ಡಿ.9- ನಿರೀಕ್ಷೆಗೂ ಮೀರಿದ ಫಲಿತಾಂಶ ಗುಜರಾತ್ನಲ್ಲಿ ಬಂದಿರುವ ಕಾರಣ ಆಡಳಿತ ವಿರೋಧಿ ಅಲೆಯನ್ನು ಮರೆಮಾಚಲು ರಾಜ್ಯದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುವ ಮಾತುಗಳು ಕೇಳಿಬರುತ್ತಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಿನ ಲೆಕ್ಕಾಚಾರದ ಪ್ರಕಾರ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಚುನಾವಣಾ ಆಯೋಗ ದಿನಾಂಕ ಘೋಷಿಸಿದರೆ ಮೇ 2ನೇ ವಾರದಲ್ಲಿ ಮತದಾನ ನಡೆದು ಫಲಿತಾಂಶ ಪ್ರಕಟವಾಗಬೇಕು.
ಸದ್ಯ ಆಡಳಿತಾರೂಢ ಬಿಜೆಪಿಗೆ ರಾಜ್ಯದಲ್ಲಿ ಸಾಕಷ್ಟು ಆಡಳಿತ ವಿರೋಧಿ ಅಲೆ ಕೇಳಿಬರುತ್ತಿದೆ. ಸರ್ಕಾರದ ಮೇಲೆ 40% ಕಮೀಷನ್ ಅರೋಪ, ಹಗರಣಗಳು, ಪಿಎಸ್ಐ ನೇಮಕಾತಿ, ಮತದಾರರ ಗುರುತಿನ ಚೀಟಿ ಪರಿಷ್ಕರಣೆಯಲ್ಲಿ ನಡೆದ ಅಕ್ರಮಗಳು, ಸಚಿವರ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರ ಹೀಗೆ ಒಂದಿಲ್ಲೊಂದು ಹಗರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿವೆ.
ಪ್ರತಿಪಕ್ಷಗಳು ಇದನ್ನೇ ಮುಂದಿಟ್ಟುಕೊಂಡು ಸರ್ಕಾರದ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವುದರಿಂದ ಬಿಜೆಪಿಯ ಇಮೇಜ್ಗೆ ಡ್ಯಾಮೇಜ್ ಆಗಿದೆ. ಈ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಬೇಕಾದರೆ ಮಧ್ಯಂತರ ಚುನಾವಣೆಗೆ ಹೋಗಬೇಕೆ ಎಂಬುದರ ಬಗ್ಗೆ ಚಿಂತನ-ಮಂಥನ ನಡೆದಿದೆ.
ಆದರೆ 1999ರಲ್ಲಿ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಅವಧಿಗೂ ಮುನ್ನ 6 ತಿಂಗಳು ಮುಂಚಿತವಾಗಿಯೇ ಚುನಾವಣೆಗೆ ಹೋಗಿದ್ದರಿಂದ ಕಾಂಗ್ರೆಸ್ ಸೋತಿತ್ತು. ಈ ನಿದರ್ಶನ ಕಣ್ಣೆದುರಿಗೆ ಇರುವಾಗಲೇ ಮಧ್ಯಂತರ ಚುನಾವಣೆಗೆ ಹೋಗುವುದು ಸೂಕ್ತವೇ ಎಂಬುದರ ಬಗ್ಗೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ.
ಮಾರ್ಚ್ ತಿಂಗಳಿನಲ್ಲಿ ಮಧ್ಯಂತರ ಚುನಾವಣೆಗೆ ಹೋಗುವುದೇ ಸರಿಯಾದ ದಾರಿ ಎಂದು ಆರ್ಎಸ್ಎಸ್ನ ಒಂದು ವರ್ಗ ಸಲಹೆ ನೀಡಿದರೆ ಬಿಜೆಪಿಯೊಳಗಿನ ಇನ್ನೊಂದು ಗುಂಪು ನಿಗದಿತ ಅವಧಿಯಲ್ಲೇ ಚುನಾವಣೆ ನಡೆಯಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಫೆಬ್ರವರಿ ತಿಂಗಳಿನಲ್ಲಿ ಹಣಕಾಸು ಖಾತೆ ಸಚಿವರು ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೊನೆಯ ಬಜೆಟ್ ಮಂಡಿಸಿ ಬಳಿಕ ಅಧಿವೇಶನ ನಡೆದ ನಂತರ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗುವ ಲೆಕ್ಕಾಚಾರದಲ್ಲಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧೆಡೆ ಐಟಿ ದಾಳಿ
ಗುಜರಾತ್ನಲ್ಲಿ ಬಿಜೆಪಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಐತಿಹಾಸಿಕ ಗೆಲುವು ಸಾಧಿಸಿರುವುದರ ಹಿಂದೆ ಪ್ರಧಾನಿ ನರೇಂದ್ರಮೋದಿ ಅವರ ಅಲೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸಂಘಟನೆ ಮತ್ತು ಹಿಂದು ಫೈರ್ ಬ್ರಾಂಡ್ ಎಂದು ಕರೆಯುವ ಯೋಗಿ ಆದಿತ್ಯನಾಥ್ ಅವರೇ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.
ಹೇಗಿದ್ದರೂ ಇಂಥ ಸಂದರ್ಭದಲ್ಲೇ ಚುನಾವಣೆಗೆ ಹೋದರೆ ಆಡಳಿತಾ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲಬಹುದೆಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ. ಸರ್ಕಾರದ ಮೇಲೆ ಏನೇ ಆರೋಪಗಳು ಕೇಳಿಬಂದರೂ ಪ್ರತಿಪಕ್ಷಗಳು ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿಲ್ಲ.
ಕೇವಲ ಆರೋಪ ಮಾಡಿವೆ ಎಂಬುದನ್ನು ಸಮರ್ಥಿಸಿಕೊಳ್ಳಬೇಕೆಂದು ಬಿಜೆಪಿ ಶಾಸಕರು ಮತ್ತು ಸಚಿವರಿಗೆ ಸೂಚನೆ ಕೊಟ್ಟಿದೆ. ಬಿಜೆಪಿಯೇ ನಡೆಸಿರುವ ಎರಡು ಆಂತರಿಕ ಸಮೀಕ್ಷೆಗಳಲ್ಲಿ ಸರ್ಕಾರದ ಪರ ಜನರಿಂದ ಅಂತಹ ಒಲವು ವ್ಯಕ್ತವಾಗಿಲ್ಲ.
ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರ, ಗುಂಪುಗಾರಿಕೆ ಪಕ್ಷದ ವರ್ಚಸ್ಸನ್ನು ಕುಂದಿಸಿದೆ. ಆಡಳಿತ ವಿರೋ ಅಲೆ ಪ್ರಬಲವಾಗಿದೆ. ಹೀಗಾಗಿ ಯಾವುದೇ ಹೊಸ ಪ್ರಯೋಗಕ್ಕೆ ಮುಂದಾಗುವ ಮುನ್ನ ಎಚ್ಚರದ ಹೆಜ್ಜೆ ಇಡುವ ನಿರ್ಧಾರಕ್ಕೆ ಬಿಜೆಪಿ ವರಿಷ್ಠರು ಬಂದಿದ್ದು, ಬೆಳಗಾವಿ ಅಧಿವೇಶನ ಮುಗಿದ ನಂತರ ಇದಕ್ಕೊಂದು ಸ್ಪಷ್ಟ ರೂಪ ಸಿಗಲಿದೆ.
ಫೆಬ್ರವರಿ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಲಿರುವ ಬಜೆಟ್ನಲ್ಲಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಒಂದಷ್ಟು ಹೊಸ ಜನಾಕರ್ಷಕ ಕಾರ್ಯಕ್ರಮಗಳನ್ನು ಘೋಷಿಸಲಿದ್ದು, ಚುನಾವಣೆ ಗೆಲ್ಲಲು ಮೋದಿ ವರ್ಚಸ್ಸನ್ನೂ ಬಿಜೆಪಿ ನಂಬಿಕೊಂಡಿದೆ.
ವಲಸೆ ಬಂದು ಬಿಜೆಪಿಯಲ್ಲಿ ಮಂತ್ರಿಗಳಾದ ಹೆಚ್ಚು ಮಂದಿಗೆ ಚುನಾವಣೆಯಲ್ಲಿ ತಮಗೆ ಪಕ್ಷ ಟಿಕೆಟ್ ನೀಡದಿದ್ದರೆ ಮುಂದೇನು ಎಂಬ ಅಭದ್ರತೆ ಕಾಡುತ್ತಿದೆ. ಕೆಲವರಿಗೆ ತಮ್ಮ ಮಕ್ಕಳ ರಾಜಕೀಯ ಭವಿಷ್ಯದ ಚಿಂತೆಯೂ ಇದೆ. ನಾಲ್ಕೈದು ಮಂದಿ ಕಾಂಗ್ರೆಸ್ ನಾಯಕತ್ವದ ಜತೆಗೂ ಸಮಾಲೋಚನೆ ನಡೆಸಿದ್ದಾರೆ.
ಹಿಮಾಚಲ ಗೆದ್ದ ಕಾಂಗ್ರೆಸ್ : ಸಿಎಂ ಆಯ್ಕೆ ಗೊಂದಲದ ನಡುವೆ ಆಪರೇಷನ್ ಭಯ
ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಮಾಸಾಂತ್ಯದಲ್ಲಿ ತನ್ನ ವರದಿ ನೀಡಲಿದೆ. ಒಂದು ಮೂಲದ ಪ್ರಕಾರ ರಾಜಕೀಯವಾಗಿ ಪ್ರಬಲವಾಗಿರುವ ಜನಾಂಗಗಳಿಗೆ ಅನುಕೂಲವಾಗುವ ಅಂಶ ವರದಿಯಲ್ಲಿರಲಿದೆ ಎಂದು ಹೇಳಲಾಗುತ್ತಿದೆ, ಪಂಚಮಸಾಲಿ ಲಿಂಗಾಯಿತರು, ಒಕ್ಕಲಿಗರು ಸೇರಿದಂತೆ ಹಲವು ಸಮುದಾಯಗಳ ಮೀಸಲಾತಿ ಬೇಡಿಕೆಯ ಕುರಿತು ಆಯೋಗ ನೀಡುವ ವರದಿಯತ್ತ ಎಲ್ಲರ ದೃಷ್ಟಿ ನೆಟ್ಟಿದೆ.
ಸರ್ಕಾರದ ಹಗರಣಗಳು ದಿನಕ್ಕೊಂದರಂತೆ ಬಯಲಾಗುತ್ತಿರುವ ಸನ್ನಿವೇಶದಲ್ಲಿ ಆಡಳಿತ ವಿರೋಧಿ ಅಲೆಯ ಜತೆಗೇ ಆಂತರಿಕ ಭಿನ್ನಮತ, ಅತೃಪ್ತಿಯನ್ನು ಸಂಬಾಳಿಸಿ ಗೆಲ್ಲುವುದೇ ಸದ್ಯಕ್ಕೆ ಬಿಜೆಪಿ ಮುಂದಿರುವ ಸವಾಲು.
Karnataka assembly election, BJP plan,