ಬೆಂಗಳೂರು,ಫೆ.22- ಮುಂಬರುವ ಬಜೆಟ್ನಲ್ಲಿ ರಾಜ್ಯದ ಪ್ರಗತಿಗೆ ಪೂರಕವಾದ ಹಾಗೂ ಎಲ್ಲ ವರ್ಗದವರಿಗೆ ನ್ಯಾಯ ಒದಗಿಸುವ, ರಾಜ್ಯದ ಅಭಿವೃದ್ಧಿಯನ್ನು ಬಿಂಬಿ ಸುವ ಮುನ್ನೋಟದ ಬಜೆಟ್ನ್ನು ಮಂಡಿಸಲಿದ್ದೇವೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ಘೋಷಿಸಿದರು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ಪ್ರಸ್ತಾವದ ಮೇಲೆ ಮಾತನಾಡಿದ ಬೊಮ್ಮಾಯಿ ಅವರು, ಕೋವಿಡ್, ಪ್ರವಾಹದಂತಹ ಸಂಕಷ್ಟದ ಸ್ಥಿತಿಯಲ್ಲೂ ರಾಜ್ಯದ ಅಭಿವೃದ್ಧಿಗೆ ಎಲ್ಲಿಯೂ ಹಿನ್ನಡೆಯಾಗದಂತೆ ಸರ್ಕಾರ ಕ್ರಮ ಕೈಗೊಂಡಿದೆ. ಆಡಳಿತ ಸುಧಾರಣೆಗೆ ಎರಡು ವರದಿಗಳನ್ನು ತೆಗೆದುಕೊಂಡಿದ್ದೇವೆ. ಉದ್ಯೋಗ ನೀತಿ, ಸೆಮಿಕಂಡಕ್ಟರ್ ನೀತಿಯಂತಹ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಸಹ ನಡೆಸಲಾಗುವುದು ಎಂದು ತಿಳಿಸಿದರು.
ಹೀಗೆ ನಮ್ಮ ಸರ್ಕಾರ ಹತ್ತು ಹಲವು ಪ್ರಗತಿಗೆ ಪೂರಕವಾದ ಯೋಜನೆಗಳನ್ನು ಜಾರಿ ಮಾಡಿದೆ. ಕೃಷಿ, ಉದ್ಯೋಗ, ಉದ್ಯಮ, ಸೇವೆ, ಪ್ರಗತಿ ನಮ್ಮ ಸರ್ಕಾರದ ಸಾಧನೆಗಳಾಗಿವೆ. ಈಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿದೆ ಎಂದು ಪ್ರಶಂಸಿಸಿದರು. ಮೊದಲ ಕೋವಿಡ್ ಅಲೆ ಬಂದಾಗ ಹೊಸ ಸಮಸ್ಯೆ ಎದುರಾಗಿತ್ತು. ಅಂತಹ ಸಂದರ್ಭದಲ್ಲೂ ಯಡಿಯೂರಪ್ಪನವರು ದೃತಿಗೆಡದೆ ಜನವ ಜೀವವನ್ನು ಉಳಿಸಲು ವಿಶೇಷ ಕಾರ್ಯಪಡೆಯನ್ನು ರಚಿಸಿ ಆರೋಗ್ಯ ಕ್ಷೇತ್ರ ವಿಶೇಷ ಅನುದಾನ ಒದಗಿಸಿದರು.
50 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಆರೋಗ್ಯ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿತ್ತು. ನಮ್ಮ ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬೆಡ್, ಔಷ, ವೆಂಟಿಲೇಟರ್, ಐಸಿಯು, ಐಸಿಯು ವೆಂಟಿಲೇಟರ್ ಬೆಡ್ಗಳು, ಕೋವಿಡ್ ಸೋಂಕಿತರಿಗೆ ಔಷಧಿಗಳು, ಆ್ಯಂಬುಲೆನ್ಸ್, ಮೃತಪಟ್ಟವರಿಗೆ ಉತ್ತಮ ರೀತಿಯಲ್ಲಿ ಶವ ಸಂಸ್ಕಾರ ನಡೆಸಿಕೊಟ್ಟ ಸರ್ಕಾರ ನಮ್ಮದು ಹೇಳಿದರು.
ದೇಶದ ಪ್ರಧಾನಿ ನರೇಂದ್ರಮೋದಿ ಅವರು ಕರ್ನಾಟಕಕ್ಕೆ ಎಲ್ಲ ರೀತಿಯಲ್ಲಿ ಸಹಕಾರ ಕೊಟ್ಟರು. ಎಲ್ಲ ಅಡೆತಡೆಗಳ ನಡುವೆಯೂ ನಾವು ಒಂದು ಮತ್ತು 2ನೇ ಕೋವಿಡ್ ಅಲೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆವು. ಮೂರನೇ ಅಲೆ ಬಂದರೂ ಸರ್ವಸನ್ನದ್ದರಾಗಿದ್ದೇವೆ. ಐಸಿಯು, ವೆಂಟಿಲೇಟರ್, ಐಸಿಯು, ಐಸಿಯು ವೆಂಟಿಲೇಟರ್ ಬೆಡ್ಗಳು, ಕೋವಿಡ್ ಸೋಂಕಿತರಿಗೆ ಔಷಧಿಗಳು, ಆ್ಯಂಬುಲೆನ್ಸ್ ಯಥೇಚ್ಛವಾಗಿ ಲಭ್ಯವಿದೆ. ಈಗ ಯಾವುದೇ ಆತಂಕವಿಲ್ಲ ಎಂದು ತಿಳಿಸಿದರು.
ತಮ್ಮ ಜೀವದ ಹಂಗು ತೊರೆದು ಆಶಾ, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆಯವರು ಕೈಜೋಡಿಸಿದ ಪರಿಣಾಮ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆವು. ಇಂದು ನಾವು 1200 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆ ಮಾಡುವ ಸಾಮಥ್ರ್ಯ ಹೊಂದಿದ್ದೇವೆ. ಈ ಸದನದ ಮೂಲಕ ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೋವಿಡ್ನಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ ಒಂದು ಲಕ್ಷ, ಕೇಂದ್ರ 50 ಸಾವಿ ಸೇರಿದಂತೆ ಒಂದೂವರೆ ಲಕ್ಷ ಪರಿಹಾರನೀಡಿದ್ದೇವೆ. ಬಡವರು, ಶ್ರಮಿಕರು, ಗಾರ್ಮೆಂಟ್ ನೌಕರರು, ಹೂವು ಮಾರಾಟಗಾರರು, ನೇಕಾರರು ಸೇರಿದಂತೆ ಪ್ರತಿಯೊಂದೂ ಸಮುದಾಯಕ್ಕೆ ವಿಶೇಷ ಆರ್ಥಿಕ ನೆರವು, ಫುಡ್ಕಿಟ್ ವಿತರಣೆ ಮಾಡಲಾಗಿದೆ.
ಅತ್ಯುತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಪ್ರಶಂಸಿಸಿದರು. ಆರೋಗ್ಯದ ಸಮಸ್ಯೆ ಎದುರಾಗದಂತೆ ಮುಂಗಡವಾಗಿ ಪಡಿತರಧಾನ್ಯಗಳು ಹಾಗೂ ಫುಟ್ಕಿಟ್ಗಳನ್ನು ಸಹ ನೀಡಲಾಗಿದೆ. ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಎಲ್ಲ ಜಿಲ್ಲಾ ಕೇಂದ್ರಗಳಿಗೂ ಖುದ್ದು ಭೇಟಿ ಕೊಟ್ಟು ಪರಿಶೀಲಿಸಿದ್ದೆ ಎಂದು ಹೇಳಿದರು.
ಎನ್ಡಿಆರ್ಎಫ್ನ ಮಾರ್ಗಸೂಚಿ ಯನ್ನು ಬದಿಗೊತ್ತಿ ಮಳೆಯಾಶ್ರಿತ ಬೆಳೆಗಳಿಗೆ ಒಂದು ಹೆಕ್ಟೇರ್ 6800ರಿಂದ 13600 ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು. ಒಟ್ಟು 1262 ಕೋಟಿ ರೈತರ ಖಾತೆಗೆ ಪರಿಹಾರವನ್ನು ಜಮೆ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 500 ಕೋಟಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಈವರೆಗೆ 1180 ಕೋಟಿ ಬಿಡುಗಡೆ ಮಾಡಲಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ರೈತರ ಮಕ್ಕಳಿಗಾಗಿ ವಿದ್ಯಾನಿ ಯೋಜನೆಯನ್ನು ಆರಂಭಿಸಿದೆವು. ಸುಮಾರು 4.5 ಲಕ್ಷ ಮಕ್ಕಳು ಇದರ ಲಾಭ ಪಡೆದಿದ್ದಾರೆ ಎಂದು ವಿವರಿಸಿದರು. ಕರ್ನಾಟಕ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರಿನ ಅಭಿವೃದ್ಧಿಗೆ 6 ಸಾವಿರ ಕೋಟಿ, ಸ್ಥಳೀಯ ಸಂಸ್ಥೆಗಳ ಅಭಿವೃದ್ದಿಗೆ 3,357 ಕೋಟಿ ಅನುದಾನವನ್ನು ಒದಗಿಸಿದ್ದೇವೆ.
ಪರಿಶಿಷ್ಟ ಜಾತಿ, ಪಂಗಡದವರಿಗೆ ವಿಶೇಷ ಕಾರ್ಯಕ್ರಮಗಳು, ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿದ್ಯಾರ್ಥಿ ವೇತನ ವನ್ನು ಹೆಚ್ಚಳ ಮಾಡಲಾಗಿದೆ. ಸ್ತ್ರೀ ಶಕ್ತಿ ಸಂಘಟನೆಗಳಿಗೂ ಸಹ ಅನುದಾನ ವನ್ನು ಹೆಚ್ಚಳ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 5 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿ ದ್ದೇವೆ. ನಗರ ಪ್ರದೇಶಗಳಲ್ಲಿ 1 ಲಕ್ಷ ಹಾಗೂ ಗ್ರಾಮೀಣಾ ಪ್ರದೇಶಗಳಲ್ಲಿ 4 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು. ಅಮೃತ್ ಗ್ರಾಮ ಯೋಜನೆಯಡಿ ಗ್ರಾಮ- ಒನ್ ಯೋಜನೆ ಆರಂಭವಾಗಿದೆ. ಪ್ರತಿಯೊಂದು ಗ್ರಾಪಂಗಳಲ್ಲಿ ಸರ್ಕಾರದ ಒಟ್ಟು 100 ಸೇವೆಗಳು ಜನರಿಗೆ ಲಭ್ಯವಾಗಲಿದೆ.
ಇದರಿಂದ ಭ್ರಷ್ಟಾಚಾರ ನಿರ್ಮೂಲನೆಯಾಗಿ ಜನರಿಗೆ ಇಲಾಖೆಯಿಂದ ಇಲಾಖೆಗೆ ಅಲೆಯುವ ಸಂಕಟ ತಪ್ಪುತ್ತದೆ. ಇದು ನಮ್ಮ ಸರ್ಕಾರದ ಸಾಧನೆ ಎಂದು ಹೇಳೀದರು.
ಪ್ರಧಾನಿಗಳ ಮಹತ್ವಾಕಾಂಕ್ಷಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಇದರಿಂದ ಪ್ರಾಥಮಿಕ ಮತ್ತು ಮಾಧ್ಯಮ ಶಿಕ್ಷಣ ನೀತಿಯಲ್ಲಿ ಅನೇಕ ಮಹತ್ವದ ಬದಲಾವಣೆಯಾಗಲಿದೆ. ಬಿಪಿಎಲ್ನವರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಜೊತೆಗೆ ರಾಗಿ, ಜೋಳವನ್ನು ಸಹ ವಿತರಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಇಲಾಖೆಗೆ 3500 ಕೋಟಿ ಅನುದಾನ ಒದಗಿಸಿದ್ದೇವೆ. ಕುಡಿಯುವ ನೀರನ್ನು ಮನೆ ಮನೆಗೆ ಪೂರೈಸಲು ಸರ್ಕಾರ ಮುಂದಾಗಿದ್ದು ಈಗಾಗಲೇ 11 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕ ಸಿಕ್ಕಿದೆ ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಘೋಷಣೆ ಮಾಡಿದ 3 ಸಾವಿರ ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ ಮೊದಲ ಸರ್ಕಾರ ನಮ್ಮದು. ಹೀಗೆ ನಮ್ಮ ಸರ್ಕಾರ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿದಾಯಕಗೊಳಿಸಲಾಗುತ್ತಿದೆ ಎಂದರು.
