ಬೆಂಗಳೂರು,ಫೆ.8- ಈವರೆಗೂ ಕೇವಲ ಮಾತಿನ ಚಕಮಕಿಗೆ ಮಾತ್ರ ಸೀಮಿತವಾಗಿದ್ದ ಹಿಜಾಬ್ ಹಾಗೂ ಕೇಸರಿಶಾಲು ವಿವಾದ ಈಗ ತೀವ್ರ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದು, ಕೆಲವು ಕಡೆ ಕಲ್ಲು ತೂರಾಟ, ಪೊಲೀಸರ ಲಾಠಿಚಾರ್ಜ್ ಹಾಗೂ ವಿದ್ಯಾರ್ಥಿಗಳಿಗೆ ಗಾಯಗಳಾಗಿರುವ ಘಟನೆ ನಡೆದಿದೆ.
ಶಿವಮೊಗ್ಗದ ಬಾಪೂಜಿನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕೇಸರಿ ಹಾಗೂ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳ ನಡುವೆ ತಳ್ಳಾಟ, ನೂಕಾಟ, ಮಾತಿನ ಚಕಮಕಿ ನಡೆದು ಕಲ್ಲು ತೂರಾಟವೂ ಸಹ ನಡೆದಿದೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ನಿಯಂತ್ರಿಸಲು ಸ್ಥಳದಲ್ಲಿದ್ದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಇನ್ನು ಕಾಲೇಜಿನ ಆವರಣದ ಧ್ವಜದಲ್ಲಿ ರಾಷ್ಟ್ರಧ್ವಜ ಹಾರಿಸುವ ಬದಲು ಕೇಸರಿ ಧ್ವಜಾರೋಹಣ ಮಾಡಿದ ಘಟನೆಯೂ ನಡೆದಿದೆ. ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ಮಾಡಿಕೊಡಬಾರದು. ಅವರು ಹಿಜಾಬ್ ಧರಿಸಿ ಬಂದರೆ ನಾವು ಕೇಸರಿ ಶಾಲು ಮತ್ತು ಪೇಟಾ ಹಾಕಿಕೊಂಡು ಬರುತ್ತೇವೆ ಎಂದು ಹಿಂದೂ ವಿದ್ಯಾರ್ಥಿಗಳು ಸೆಡ್ಡು ಹೊಡೆದಿದ್ದಾರೆ.
ಹಿಜಾಬ್ ಧರಿಸಿ ಬಂದವರನ್ನು ತರಗತಿಯೊಳಗೆ ಬಿಟ್ಟರೆ ನಮ್ಮನ್ನು ಕೂಡ ಒಳಗೆ ಬಿಡಬೇಕೆಂದು ಪಟ್ಟು ಹಿಡಿದು ಗೇಟಿನೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಪೊಲೀಸರು ಎರಡೂ ಕಡೆಯ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಸಿದರೂ ಪ್ರಯೋಜನವಾಗಲಿಲ್ಲ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿಯ ಪದವಿಪೂರ್ವ ಕಾಲೇಜಿನಲ್ಲೂ ಅಹಿತಕರ ಘಟನೆ ನಡೆದಿದೆ. ಇಲ್ಲಿಯೂ ಕೂಡ ಓರ್ವ ವಿದ್ಯಾರ್ಥಿ ತಲೆಗೆ ಪೆಟ್ಟಾಗಿದ್ದು, ಪರಿಸ್ಥಿತಿ ಇಲ್ಲಿಯೂ ಉದ್ವಿಗ್ನಗೊಂಡಿದೆ. ಎಂದಿನಂತೆ ಮುಸ್ಲಿಂ ವಿದ್ಯಾರ್ಥಿಗಳು ಇಂದು ಕೂಡ ಹಿಜಾಬ್ ಧರಿಸಿ ಬಂದಿದ್ದರು. ಇದಕ್ಕೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿ ಕಾಲೇಜಿನ ಆವರಣದೊಳಗೆ ಬರಲು ಯತ್ನಿಸಿದರು.
ಈ ವೇಳೆ ಕಾಲೇಜಿನ ಆವರಣದ ಮುಂಭಾಗ ಭಾರೀ ಪ್ರಮಾಣದ ವಿದ್ಯಾರ್ಥಿಗಳು ಜಮಾಯಿಸಿದ್ದರಿಂದ ಆರೋಪ, ಪ್ರತ್ಯಾರೋಪ, ವಾದ, ಮಾತಿನ ಚಕಮಕಿ ನಡೆಯಿತು. ಹಿಜಾಬ್ ಧರಿಸುವುದು ನಮ್ಮ ಮೂಲಭೂತ ಹಕ್ಕು. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿಗಳು ಹೇಳಿದರೆ, ಕೇಸರಿ ಕೂಡ ಶಾಂತಿಯ ಸಂಕೇತ. ನಾವು ಕೂಡ ಅದನ್ನೇ ಹಾಕಿ ಬರುತ್ತೇವೆ. ನಮ್ಮನ್ನು ತರಗತಿಯೊಳಗೆ ಬಿಡಿ ಎಂದು ಪಟ್ಟು ಹಿಡಿದರು. ಇಲ್ಲಿ ಕೂಡ ಪರಿಸ್ಥಿತಿ ಕೈ ಮೀರಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು.
ಪ್ರಾರಂಭದಲ್ಲೇ ವಿವಾದಕ್ಕೆ ಮುನ್ನುಡಿ ಬರೆದಿದ್ದ ಉಡುಪಿ ಜಿಲ್ಲೆಯಲ್ಲಿ ಇಂದು ಕೂಡ ಅನೇಕ ಕಡೆ ಹಿಜಾಬ್- ಕೇಸರಿ ನಡುವೆ ಸಂಘರ್ಷ ಮುಂದುವರೆದಿದೆ. ಮಣಿಪಾಲಿನ ಎಸ್ಡಿಎಂ ಕಾಲೇಜಿನಲ್ಲಿ ಒಂದು ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದರೆ, ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ಕೇಸರಿ ಶಾಲು, ಪೇಟಾ ಹಾಕಿಕೊಂಡು ಕಾಲೇಜಿಗೆ ಆಗಮಿಸಿದರು. ಜೈ ಶ್ರೀರಾಮ್ ವಂದೇ ಮಾತರಂ ಎಂದು ಘೋಷಣೆ ಮೊಳಗಿಸಿದರು.
ಈ ವೇಳೆ ಕಾಲೇಜು ಆಡಳಿತ ಮಂಡಳಿಯವರು ಎಲ್ಲಾ ವಿದ್ಯಾರ್ಥಿಗಳನ್ನು ಗೇಟ್ ಬಳಿಯೇ ತಡೆದು ಹಿಜಾಬ್ ಇಲ್ಲವೇ ಕೇಸರಿ ಧರಿಸಿ ಬಂದ ಯಾವೊಬ್ಬ ವಿದ್ಯಾರ್ಥಿಗಳನ್ನು ಒಳಗೆ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಸೂಚನೆ ಕೊಟ್ಟರು. ಇದರಿಂದ ಕೆರಳಿದ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವುದು ನಮ್ಮ ಧರ್ಮದ ಹಕ್ಕು. ಇದರಿಂದ ಯಾರಿಗೂ ಕೂಡ ತೊಂದರೆಯಾಗುವುದಿಲ್ಲ. ಅವರು ಬೇಕಾದರೆ ಕೇಸರಿ ಶಾಲು ಹಾಕಿಕೊಂಡು ಬರಲಿ ನಮ್ಮದೇನು ಅಭ್ಯಂತರವಿಲ್ಲ ಎಂದರು.
ಆದರೆ ಇದನ್ನು ಒಪ್ಪದ ಆಡಳಿತಮಂಡಳಿಯವರು ನಾವು ಸರ್ಕಾರದ ಆದೇಶವನ್ನು ಪಾಲನೆ ಮಾಡುತ್ತೇವೆ. ನ್ಯಾಯಾಲಯದ ತೀರ್ಪು ಏನು ಬರುತ್ತದೆಯೊ ಕಾದುನೋಡೋಣ. ಅಲ್ಲಿಯವರೆಗೆ ನಾವು ಯಥಾಸ್ಥಿತಿಯನ್ನು ಕಾಪಾಡುತ್ತೇವೆ ಎಂದು ಕಡ್ಡಿ ಮುರಿದಂತೆ ಹೇಳಿದರು.
ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಹಿಜಾಬ್ ಧರಿಸಿದವರನ್ನು ಒಳಬಿಟ್ಟರೆ ನಮ್ಮನ್ನು ಕೂಡ ಒಳಬಿಡಬೇಕೆಂದು ಕೇಸರಿ ಧರಿಸಿದ್ದ ವಿದ್ಯಾರ್ಥಿಗಳು ಒತ್ತಡ ಹಾಕಿದರು. ಇದಕ್ಕೆ ಸೊಪ್ಪು ಹಾಕದ ಆಡಳಿತ ಮಂಡಳಿ ಯಾವ ವಿದ್ಯಾರ್ಥಿಗಳನ್ನು ಕೂಡ ಒಳಬಿಡದೆ ಕಾಲೇಜಿಗೆ ರಜಾ ಘೋಷಿಸಿತು.
ಕಾಫಿನಾಡು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಇಂದು ಕೂಡ ವಿವಾದ ಮುಂದುವರೆದಿದೆ. ಕೆಲವು ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದರೆ ಇನ್ನು ಕೆಲವು ವಿದ್ಯಾರ್ಥಿಗಳು ಕೇಸರಿ ಧರಿಸಿಯೇ ಬಂದರು. ಆದರೆ ಪ್ರಾಂಶುಪಾಲರು ಮಾತ್ರ ಯಾವುದಕ್ಕೂ ಅವಕಾಶ ಕೊಡಲಿಲ್ಲ. ಅಂತಿಮವಾಗಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳು ತರಗತಿಯನ್ನೇ ಬಹಿಷ್ಕರಿಸಿ ಹೊರ ನಡೆದಿದ್ದಾರೆ.
ಸಕ್ಕರೆ ನಾಡು ಮಂಡ್ಯದ ಪಿಯು ಕಾಲೇಜಿನಲ್ಲಿ ಕೆಲವು ವಿದ್ಯಾರ್ಥಿಗಳು ಕೇಸರಿ ಹಾಕಿಕೊಂಡು ತರಗತಿ ಪ್ರವೇಶಿಸಲು ಯತ್ನಿಸಿದರು. ಆದರೆ ಆಡಳಿತ ಮಂಡಳಿಯವರು ಇಲ್ಲೂ ಕೂಡ ನಿರ್ಬಂಧ ವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ವಿಜಾಪುರದ ಚಡಚಣದ ಬಸವೇಶ್ವರ ಕಾಲೇಜಿನಲ್ಲೂ ಕೇಸರಿ ಹಾಗೂ ಹಿಜಾಬ್ ನಡುವಿನ ವಿವಾದ ಮತ್ತಷ್ಟು ಭುಗಿಲೆದ್ದಿದೆ. ನಿನ್ನೆಯಂತೆ ಇಂದು ಕೂಡ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿದರೆ, ಇನ್ನು ಕೆಲವು ಕೇಸರಿ ಧರಿಸಿ ಬಂದಿದ್ದರು. ಕೊನೆಗೆ ಆಡಳಿತ ಮಂಡಳಿಯವರು ಕಾಲೇಜಿಗೆ ರಜಾ ಘೋಷಿಸಿದರು. ಗದಗ, ತುಮಕೂರಿನ ತಿಪಟೂರು ಸೇರಿದಂತೆ ನಾನಾ ಕಡೆ ಪರಿಸ್ಥಿತಿ ಉದ್ವಿಗ್ನವಾಗಿದೆ.
ಜನರ ಅಭಿಪ್ರಾಯಗಳು :
Koo App#ಹಿಜಾಬ್_ವಿವಾದ ಹಿಜಾಬ್ ಧರಿಸುವುದರ ಬಗ್ಗೆ ತಕರಾರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ ಸಾಂಪ್ರದಾಯಕವಾಗಿ ಮುಸ್ಲಿಂ ಸಮುದಾಯದವರು ಹೆಣ್ಣುಮಕ್ಕಳನ್ನು ಬುರ್ಖಾ ಧರಿಸದೆ ಹೊರಗೆ ಹೋಗಲು ಬಿಡುವುದಿಲ್ಲ. ಕೆಲವರ್ಷಗಳಿಂದ ಮುಸ್ಲಿಂ ಹೆಣ್ಣುಮಕ್ಕಳಿಗೆ ಅವರ ಮನೆಯಲ್ಲಿ ಸ್ವಲ್ಪ ಸ್ವಾತಂತ್ರ ಕೊಡುತ್ತಿದ್ದಾರೆ. ಆದರೆ ಅನೇಕರು ಇನ್ನೂ ಸಾಂಪ್ರದಾಯಕವಾಗಿ ಉಳಿದಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವುದೇ ಮುಖ್ಯ ಉದ್ದೇಶ ಆಗಿರುವಾಗ ಈ ರೀತಿ ತಕರಾರುಗಳು ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ.– Chandana Gowda (@chandana_somashekar) 8 Feb 2022
Koo App#ಹಿಜಾಬ್_ವಿವಾದ ನಮ್ಮ ಭಾರತ ಪ್ರಜಾ ಪ್ರಭುತ್ವ ರಾಷ್ಟ್ರ . ಪ್ರಜೆಗಳ ನಿರ್ಣಯವೇ ಅಂತಿಮ. ನನ್ನ ಪ್ರಕಾರ ಮುಸ್ಲಿಮರು ಇಜಾಬ್ ದರಿಸಲಿ , ಆದರೆ ಅವರವರ ಸಂಪ್ರದಾಯ ಅವರವರ ಚೌಕ್ಕಟಿನಲ್ಲಿ ಇರಲಿ . ಶಾಲಾ ಕಾಲೇಜು ಇದೆಲ್ಲಾ ವಿದ್ಯಾಭ್ಯಾಸ ಕಲಿಯುವ ಸ್ಥಳ . ಇಲ್ಲಿ ಎಲ್ಲರಿಗೂ ಒಂದೇ ನಿಯಮ ಇರಬೇಕು ಎಂಬುದು ನನ್ನ ಅಭಿಪ್ರಾಯ . ಅವರವರ ಸಂಪ್ರದಾಯ ಅವರವರ ಮನೆಯಲ್ಲಿ ಇರಲಿ ಹೊರ ಸಮಾಜದಲ್ಲಿ ಅಲ್ಲ . ಯಾವ ಸಂಪ್ರದಾಯಕ್ಕೂ ಅಡ್ಡಿ ಬೇಡ , ಅವರು ಬೇರೆಯವರಂತೆ ಎಲ್ಲ ಕ್ಷೇತ್ರದಲ್ಲೂ ಸಮಾನತೆ ಅಷ್ಟೇ ಮುಖ್ಯ.– Meghana N (@Meghana_NON2H4) 8 Feb 2022
Koo Appಕೋರ್ಟು ತೀರ್ಪಿಗೆ ಕಾಯುತ್ತಿದ್ದೇನೆ, ನಮ್ಮ ಅಭಿಪ್ರಾಯ ಭಾವನಾತ್ಮಕವಾಗಿರಬಹುದು, ಅದರಲ್ಲಿ ಕಿರುಬೆರಳಿನಷ್ಟು ಸತ್ಯವಿರಬಹುದು ಆದ್ರೆ ಸಂವಿಧಾನದ ಘಮಕ್ಕೆ ಯಾವುದೇ ಗುಡಿಯ ಉದ್ದಿನಕಡ್ಡಿಯ ಅಥವಾ ಮುಸ್ಲಿಂಮನ ಅತ್ತರಿನ ಘಮ ಅಂಟಿರುವಿದಿಲ್ಲ. ನಮ್ಮ ಅಭಿಪ್ರಾಯ ಈ ಕೋರ್ಟ್ ನಿಂದ ಮತ್ತೊಂದು ಕೋರ್ಟಿಗೆ ಹಾರಲಿಕ್ಕೆ ಸಹಾಯವಾಗಬಹುದೇ ಹೊರತು ಅದು ನಿರ್ಣಾಯಕವಂತೂ ಅಲ್ಲ. #ಹಿಜಾಬ್_ವಿವಾದ– Sunil NG (@Sunil_NG) 8 Feb 2022
Koo App#ಹಿಜಾಬ್_ವಿವಾದ ಧರ್ಮ ರಕ್ಷಕರು ಮೊದಲು ಸಮಾಜದಲ್ಲಿ ಸಾಮರಸ್ಯದ ಮತ್ತು ಒಗ್ಗಟ್ಟಿನ ಮಂತ್ರ ಸೌಹಾರ್ದತೆ ಯ ಪಾಠ ಮಾಡಬೇಕೆ ಹೊರೆತು ಧರ್ಮ ಸಂಘಟನೆಗಳು ಧರ್ಮದ ಅಹಿಂಸಾ ತತ್ವವನ್ನು ಪಾಲಿಸುವ ಕಾರ್ಯ ಮಾಡಬೇಕೆ ಹೊರೆತು ಸಮುದಾಯಗಳ ಒಗ್ಗಟ್ಟನ್ನು ಒಡೆಯುವ ಸಂಘಟನೆಗಳನ್ನು ಹುಟ್ಟುಹಾಕಬಾರದು ಧರ್ಮದ ಮೂಲ ದೇವರಾದ್ರೆ ದೇವರ ಮೂಲ ಮಾನವ 🙏ಮಾನವ ಧರ್ಮಕ್ಕೆ ಜಯವಾಗಲಿ🙏 ಮಾನವ ಸೃಷ್ಟಿಸಿದ ಧರ್ಮಕ್ಕಲ್ಲ– Arun Aghora (@Achar…hudga..vishwakarma.) 8 Feb 2022