ಬೆಂಗಳೂರು,ಫೆ.27- ಭಯ, ಆತಂಕದ ನಡುವೆಯೇ ದಿನ ಕಳೆಯುವಂತಾಗಿದೆ ಎಂದು ಖಾಕ್ರ್ಯೀವ್ನಲ್ಲಿರುವ ಎಂಬಿಬಿಎಸ್ ವಿದ್ಯಾರ್ಥಿ ಅಂಕಿತ ಅಳಲು ತೋಡಿಕೊಂಡಿದ್ದಾರೆ. ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಅಪ್ಪ-ಅಮ್ಮನೊಂದಿಗೆ ಸಂಪರ್ಕದಲ್ಲಿದ್ದರೂ ದುಃಖದಲ್ಲಿಯೇ ಕಾಲ ನೂಕುವಂತಾಗಿದೆ.
ತೀವ್ರ ಆತಂಕದಲ್ಲಿರುವ ಅಮ್ಮ ಮಾತನಾಡದೆ ಅಳುತ್ತಾರೆ. ಅಪ್ಪ ಧೈರ್ಯ ಹೇಳಿದರು. ನಾನು ಕೂಡ ಧೈರ್ಯವಾಗಿಯೇ ಇದ್ದೇನೆ. ವೈದ್ಯರಾಗಬೇಕೆಂಬ ಕನಸು ಹೊತ್ತು ಉಕ್ರೇನ್ನಲ್ಲಿ ವ್ಯಾಸಂಗ ಮಾಡಲು ಬಂದು ಯುದ್ದಪೀಡಿತ ಪ್ರದೇಶದಲ್ಲಿ ಸಿಲುಕಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಪರಿಸ್ಥಿತಿ ತೀವ್ರ ಗಂಭೀರವಾಗಿದೆ. ಎಲ್ಲದಕ್ಕೂ ಸಮಸ್ಯೆಯಿದೆ. ತೀವ್ರ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಅಂಡರ್ಗ್ರೌಂಡ್ ಹಾಗೂ ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸರ್ಕಾರ ಹೇಳಿದೆ. ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಬೇಡಿ ಎಂಬ ಸೂಚನೆ ನೀಡಿದೆ. ಮುಂದೇನಾಗುತ್ತೋ ಎಂಬ ಆತಂಕದಲ್ಲೇ ಸಮಯ ಕಳೆಯುವಂತಾಗಿದೆ ಎಂದಿದ್ದಾರೆ.
ತಾಯ್ನಾಡಿಗೆ ಮರಳಿರುವ ಇಂಚರ ಅವರ ತಂದೆ ಶಿವರಾಜ್ ಮಾತನಾಡಿ, ಯಾರೂ ಕೂಡ ಧೈರ್ಯ ಕಳೆದುಕೊಳ್ಳಬೇಡಿ. ನಾವೆಲ್ಲರೂ ಜೊತೆಗಿದ್ದೇವೆ. ಎಲ್ಲರನ್ನೂ ಕರೆತರಲು ಕೇಂದ್ರ-ರಾಜ್ಯ ಸರ್ಕಾರಗಳು ನಿರಂತರ ಪ್ರಯತ್ನಿಸುತ್ತಿವೆ. ನಮ್ಮ ಮಗಳಂತೆ ನೀವು ಕೂಡ ಸುರಕ್ಷಿತವಾಗಿ ಮರಳುತ್ತೀರಿ ಎಂಬ ವಿಶ್ವಾಸವಿದೆ. ಪೋಷಕರು ಕೂಡ ಧೈರ್ಯವಾಗಿರಲಿ ಎಂಬ ಮಾತುಗಳನ್ನಾಡಿದರು.
ಅಂಕಿತ ಅವರ ಸಂಬಂಕರು, ಸ್ನೇಹಿತರು ಕೂಡ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಧೈರ್ಯಗುಂದದೆ ಎದುರಿಸಿ ತಾಯತ್ನಾಡಿಗೆ ಮರಳುವಂತೆ ಮನವಿ ಮಾಡಿದ್ದಾರೆ.
