ಈ ಬಾರಿಯ ಮೈಸೂರು ದಸರಾದಲ್ಲಿ ಕೆಎಂಎಫ್ನ ಸ್ತಬ್ಧ ಚಿತ್ರ ಇರಲಿದೆ. ರೈತರ ಚಟುವಟಿಕೆ ಮತ್ತು ಹೈನುಗಾರಿಕೆ ಸಾರುವ ಅಂಶವನ್ನು ಈ ಟ್ಯಾಬ್ಲೊ ಅನಾವರಣ ಮಾಡಲಿದೆ. ಜತೆಗೆ ವಸ್ತು ಪ್ರದರ್ಶನದ ಕೇಂದ್ರದಲ್ಲಿ ಕೆಎಂಎಫ್ ಮಳಿಗೆ ತೆರೆಯಲಾಗುವುದು ಎಂದು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಮುಂಬೈನಲ್ಲಿ ಪ್ರತಿ ನಿತ್ಯ ಎರಡು ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಹಾಗೆಯೇ ಕೋಲ್ಕತ್ತಾ ಸೇರಿ ಉತ್ತರ ಭಾರತದ ರಾಜ್ಯಗಳಲ್ಲಿ ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಗೋವಾ, ತಮಿಳುನಾಡು, ಆಂಧ್ರ ಸೇರಿ ಹಲವು ರಾಜ್ಯಗಳಲ್ಲಿ ಮುಂದಿನ ದಿನಗಳಲ್ಲಿ ಸುಮಾರು 5 ಲಕ್ಷ ಲೀಟರ್ ಹಾಲು ಮಾರಾಟದ ಗುರಿ ಹೊಂದಲಾಗಿದೆ ಎಂದು ಹೇಳಿದರು. ಹಾಗೆಯೇ ಹಾಸನದಲ್ಲಿ ಮೊದಲ ಬಾರಿಗೆ ನಂದಿನಿ ಕೆಫೆಯನ್ನು ಅತಿ ಶೀಘ್ರದಲ್ಲೇ ಉದ್ಘಾಟಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.