ಬೆಂಗಳೂರು,ಫೆ.28- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ಚುನಾವಣಾ ಕಾಲದಲ್ಲಿ ಪ್ರೀತಿ ತೋರಿಸುವ ಬಿಜೆಪಿಯವರು ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಏಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸ್ದುದಿಗಾರರೊಂದಿಗೆ ಮಾನಾಡಿದ ಅವರು, ಆಗೊಂದು ವೇಳೆ ಯಡಿಯೂರಪ್ಪ ಅವರ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ವ್ಯಕ್ತಪಡಿಸುತ್ತಿರುವ ಕಾಳಜಿ ನೈಜ್ಯವೇ ಆಗಿದ್ದರೆ ಕೂಡಲೇ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಚುನಾವಣಾ ಕಾಲದಲ್ಲಿ ಈ ರೀತಿಯ ಬೆಳವಣಿಗೆಗಳು ಸಾಮಾನ್ಯ. ಜನ ದಡ್ಡರಲ್ಲ. ಎಲ್ಲವನ್ನೂ ಅರ್ಥ ಮಾಡಿಕೊಂಡಿರುತ್ತಾರೆ. ಮತದಾನದ ವೇಳೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಪದೇ ಪದೇ ಬರುತ್ತಿದ್ದಾರೆ. ಇದು ಸಂತಸದ ವಿಚಾರ. ಅದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಅವರ ರಾಜ್ಯ ಪ್ರವಾಸದ ವೇಳೆ ಶೇ.40ರಷ್ಟು ಭ್ರಷ್ಟಾಚಾರದ ಆರೋಪ ಕುರಿತು ಏಕೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಪ್ರತಿಭಟನೆ ಕೈಬಿಡಲು ಸರ್ಕಾರಿ ನೌಕರರಿಗೆ ಸಿಎಂ ಮನವಿ
ರಾಜ್ಯದಲ್ಲಿ ಅಭಿವೃದ್ಧಿ ಚಟುವಟಿಕೆಗಳು ಶೂನ್ಯವಾಗಿವೆ. ಡಬ್ಬಲ್ ಇಂಜಿನ್ ಎಂದು ಹೇಳುತ್ತಲೇ ರಾಜ್ಯಕ್ಕೆ ಡಬ್ಬಲ್ ವಂಚನೆ ಮಾಡಲಾಗುತ್ತಿದೆ. ರಾಜ್ಯಕ್ಕೆ ನೀಡಬೇಕಾದ ಅನುದಾನದಲ್ಲಿ ಕಡಿತವಾಗಿದೆ. ಬೆಲೆ ಏರಿಕೆ ತೀವ್ರವಾಗಿದೆ. ಜನ ಸಂಕಷ್ಟದಿಂದ ಬಳಲುತ್ತಿದ್ದಾರೆ.
ಇದಾವುದರ ಬಗ್ಗೆಯೂ ಮಾತನಾಡದೆ ಭಾವನಾತ್ಮಕ ವಿಷಯಗಳು ಮತ್ತು ಜನ ಸಾಮಾನ್ಯರನ್ನು ದಾರಿ ತಪ್ಪಿಸುವ ಮಾತಗಳನ್ನಾಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
kpcc president, dk shivakumar, BS Yeddyurappa, BJP, Modi,